
ಬೆಂಗಳೂರು(ಜ. 03): ತಮ್ಮ ಪರಮಾಪ್ತರಲ್ಲೊಬ್ಬರೆನಿಸಿದ್ದ ಸಹಕಾರಿ ಸಚಿವ ಮಹದೇವ್ ಪ್ರಸಾದ್ ಅವರ ನಿಧನ ಸದ್ದಿಗೆ ಸಿಎಂ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಮಹದೇವ ಪ್ರಸಾದ್ ಅವರ ಸಾವು ತಮಗೆ ದಿಗ್ಭ್ರಮೆ ಮೂಡಿಸಿದೆ. ವೈಯಕ್ತಿಕವಾಗಿ ತಮಗೆ ಬಹಳ ನಷ್ಟವಾಗಿದೆ. ಪಕ್ಷಕ್ಕೂ ಹಿನ್ನಡೆಯಾಗಿದೆ. ಅವರ ಕುಟುಂಬದ ದುಃಖದಲ್ಲಿ ತಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಮಹದೇವ ಪ್ರಸಾದ್ ಒಬ್ಬ ಸಜ್ಜನ ರಾಜಕಾರಣಿ, ಮಿತಭಾಷಿ. ಅಜಾತ ಶತ್ರುವಾಗಿದ್ದ ಅವರು ಕೋಪದಿಂದ ಮಾತನಾಡಿದ್ದನ್ನು ನಾನು ನೋಡಿಯೇ ಇಲ್ಲ. ಯಾವುದೇ ಜವಾಬ್ದಾರಿ ಕೊಟ್ಟರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಸಚಿವರಾಗಿ ಬಹಳ ಶಿಸ್ತಿನಿಂದ ಇದ್ದ ಅವರಲ್ಲಿ ಯಾವುದೇ ಕಪ್ಪು ಚುಕ್ಕೆ ಇರಲಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
"ಮಹದೇವ ಪ್ರಸಾದ್ ನನ್ನ ಸಹೋದ್ಯೋಗಿ ಮಾತ್ರ ಆಗಿರಲಿಲ್ಲ. ನನ್ನೆಲ್ಲ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಅಗಲಿಕೆಯ ನೋವು ಅಸಹನೀಯವಾದುದು" ಎಂದೂ ಸಿಎಂ ಟ್ವೀಟ್ ಮಾಡಿದ್ದಾರೆ.
ಸಿಎಂ ಕಚೇರಿ ಮೂಲಗಳ ಪ್ರಕಾರ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಮೊದಲು ಸಿಎಂ ಸಿದ್ದರಾಮಯ್ಯನವರು ಬಹಳ ಗದ್ಗದಿತರಾಗಿದ್ದರೆನ್ನಲಾಗಿದೆ. ತಮ್ಮ ಆಪ್ತರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ತನ್ನ ಮಗನ ಸಾವಾಯಿತು, ಈಗ ಸ್ನೇಹಿತ ಮಹದೇವ ಪ್ರಸಾದ್ ಅಗಲಿ ಹೋಗಿದ್ದಾನೆ ಎಂದು ಕಣ್ಣೀರಿಟ್ಟರೆಂದು ಮೂಲಗಳು ಹೇಳಿವೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.