
ಬೆಂಗಳೂರು(ಏ. 10): ಪುನೀತ್ ರಾಜಕುಮಾರ್ ಅಭಿನಯದ "ರಾಜಕುಮಾರ" ಸಿನಿಮಾ ನಮ್ಮ ಸಿಎಂ ಸಿದ್ದರಾಮಯ್ಯನವರಿಗೆ ಸಿಕ್ಕಾಪಟ್ಟೆ ಇಷ್ಟವಾಗಿರುವಂತಿದೆ. ನಿನ್ನೆ 'ರಾಜಕುಮಾರ' ಚಿತ್ರ ವೀಕ್ಷಿಸಿದ್ದ ಸಿದ್ದರಾಮಯ್ಯ ಇಂದು ತಮ್ಮ ನಿವಾಸ 'ಕಾವೇರಿ'ಗೆ ಪುನೀತ್ ರಾಜಕುಮಾರ್ ಅವರನ್ನು ಕರೆಸಿಕೊಂಡು ಮಾತನಾಡಿದ್ದಾರೆ. ಚಿತ್ರ ಚೆನ್ನಾಗಿದೆ ಎಂದು ಮನಸಾರೆ ಪ್ರಶಂಸಿಸಿದ ಮುಖ್ಯಮಂತ್ರಿಗಳು, ಅಪ್ಪು ಅಭಿನಯವನ್ನೂ ಮೆಚ್ಚಿಕೊಂಡಿದ್ದಾರೆ.
ಸಿಎಂ ತಮ್ಮ ನಟನೆಯ ಚಿತ್ರವನ್ನು ಮೆಚ್ಚಿಕೊಂಡಿದ್ದು ಪುನೀತ್ ರಾಜಕುಮಾರ್'ಗೂ ಸಂತಸ ತಂದಿದೆ. ಒಳ್ಳೆಯ ಸಂದೇಶವಿರುವ ಚಿತ್ರವೆಂದು ಸಿಎಂ ಹೇಳಿದ್ದಾರೆ. ಮೊದಲಿಂದಲೂ ತಮ್ಮ ಕುಟುಂಬದ ಬಗ್ಗೆ ಸಿದ್ದರಾಮಯ್ಯನವರಿಗೆ ಗೌರವ ಇದೆ. ಸಿನಿಮಾ ನೋಡಿದ ಬಳಿಕ ಕರೆ ಮಾಡಿ ತಮಗೆ ಅಭಿನಂದನೆ ತಿಳಿಸಿದ್ದು ಸಿಎಂ ಅವರ ದೊಡ್ಡ ಗುಣವನ್ನು ತೋರಿಸುತ್ತದೆ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಚಿತ್ರ ವೀಕ್ಷಣೆ:
ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರ ಉಪಚುನಾವಣೆಯಲ್ಲಿ ಬಿರುಸಿನ ಪ್ರಚಾರದ ಬಳಿಕ ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ವೇಳೆ ಸಿಎಂ ಸಿದ್ದರಾಮಯ್ಯ ಭಾನುವಾರ ಸಂಜೆ ನಟ ಪುನೀತ್ ಅಭಿನ ಯದ ‘ರಾಜ್ಕುಮಾರ' ಚಿತ್ರ ವೀಕ್ಷಿಸಿದರು. ಮೈಸೂರಿನ ಜಯ ಲಕ್ಷ್ಮಿಪುರಂನಲ್ಲಿರುವ ಡಿಆರ್ಸಿ ಮಲ್ಟಿಪ್ಲೆಕ್ಸ್ನಲ್ಲಿ ಸಂಜೆ 4.15ರ ಪ್ರದರ್ಶನಕ್ಕೆ ತೆರಳಿದ ಸಿದ್ದರಾಮಯ್ಯ, ತಮ್ಮ ಕೆಲವು ಆಪ್ತರೊಂದಿಗೆ ಚಿತ್ರ ವೀಕ್ಷಿಸಿದರು.
"ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ" ಚಿತ್ರದ ನಿರ್ದೇಶನ ಮಾಡಿದ್ದ ಸಂತೋಷ್ ಆನಂದರಾಮ್ ಅವರೇ "ರಾಜಕುಮಾರ" ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಮೆಸೇಜ್ ಇರುವ ಈ ಚಿತ್ರದ ಬಗ್ಗೆ ಸಾಕಷ್ಟು ಸಕರಾತ್ಮಕ ವಿಮರ್ಶೆಗಳು ಬಂದಿವೆ. ಗಲ್ಲಾಪೆಟ್ಟಿಗೆಯಲ್ಲೂ ರಾಜಕುಮಾರ ಧೂಳೆಬ್ಬಿಸುತ್ತಿದೆ.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.