
ಬೆಂಗಳೂರು(ಏ. 24): ಸಿಎಂ ಸಿದ್ದರಾಮಯ್ಯ ಇಂದು ಶ್ರವಣಬೆಳಗೊಳಕ್ಕೆ ತೆರಳುವ ವೇಳೆ ಅವರ ಹೆಲಿಕಾಪ್ಟರ್'ಗೆ ಹದ್ದೊಂದು ಡಿಕ್ಕಿ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಹೆಲಿಕಾಪ್ಟರ್ ಟೇಕಾಫ್ ಆದಾಗ ಆ ಘಟನೆ ನಡೆದಿದೆ ಎನ್ನಲಾಗಿದೆ. ಬೆಳಗ್ಗೆ 11 ಗಂಟೆಗೆ ಶ್ರವಣಬೆಳಗೊಳಕ್ಕೆ ಹೋಗಬೇಕಿದ್ದ ಮುಖ್ಯಮಂತ್ರಿಗಳು 45 ನಿಮಿಷ ತಡವಾಗಿ ಹೋಗಲು ಈ ಘಟನೆಯೇ ಕಾರಣವೆನ್ನಲಾಗಿದೆ. ಹೆಲಿಕಾಪ್ಟರ್'ನಲ್ಲಿ ಸಿದ್ದರಾಮಯ್ಯನವರ ಜೊತೆ ಗೃಹ ಸಚಿವ ಜಿ.ಪರಮೇಶ್ವರ್ ಕೂಡ ಇದ್ದರು.
ಕಳೆದ ಬಾರಿ ಶ್ರವಣಬೆಳಗೊಳಕ್ಕೆ ಸಿಎಂ ಹೋಗಿದ್ದಾಗಲೂ ಹೆಲಿಕಾಪ್ಟರ್ ಸಮಸ್ಯೆ ಎದುರಾಗಿತ್ತು. 2015, ಫೆ.1ರಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶ್ರವಣಬೆಳಗೊಳಕ್ಕೆ ಸಿಎಂ ಬಂದಿದ್ದಾಗ ಹೆಲಿಕಾಪ್ಟರ್'ನ ಲ್ಯಾಂಡಿಂಗ್ ವ್ಹೀಲ್ ಗೇರ್ ಸಮಸ್ಯೆಯಾಗಿ 30 ನಿಮಿಷ ಕಾಲ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಕಾಕತಾಳೀಯವೆಂಬಂತೆ ಸಿಎಂ ಈಗ ಶ್ರವಣಬೆಳಗೊಳಕ್ಕೆ ಹೊರಡುವ ವೇಳೆ ಹೆಲಿಕಾಪ್ಟರ್'ಗೆ ಹದ್ದು ಡಿಕ್ಕಿ ಹೊಡೆದು ಪ್ರಯಾಣ ವಿಳಂಬವಾಗಿದೆ.
ಸಿಎಂ ಸಿದ್ದರಾಮಯ್ಯಗೆ ಪಕ್ಷಿಗಳ ಕಾಟ ಇದೆಯಾ ಎಂದು ಅನುಮಾನ ಹುಟ್ಟಿಸುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ. ಸಿಎಂ ಕಾರಿನ ಮೇಲೆ ಕಾಗೆ ಕೂತಿದ್ದು, ಕಾರ್ಯಕ್ರಮವೊಂದರಲ್ಲಿ ಸಿಎಂ ಮೇಲೆ ಕಾಗೆ ಹಿಕ್ಕೆ ಹಾಕಿದ್ದು, ಹೀಗೆ ಕೆಲವಾರು ಘಟನೆಗಳು ವರದಿಯಾಗಿದ್ದವು. ಸಿಎಂಗೆ ಶನಿದೇವರ ಕಾಟ ಇದೆ ಎಂದು ಜ್ಯೋತಿಷಿಗಳು ಭವಿಷ್ಯ ಹೇಳಿದ ಬೆನ್ನಲ್ಲೇ ಸಿಎಂ ನೇತೃತ್ವದಲ್ಲಿ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಗಮನಾರ್ಹ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.