
ನಿನ್ನೆ ಬಿ.ಸಿ ಪಾಟೀಲರಿಂದ ಮಗಳ ನಟನೆಯ ‘ಹ್ಯಾಪಿ ನ್ಯೂ ಇಯರ್' ವೀಕ್ಷಣೆಗೆ ಆಹ್ವಾನ ಸಿಎಂ ಸಿನಿಮಾ ನೋಡಿದರೆ ಕಲೆಕ್ಷನ್ ಜಾಸ್ತಿ ಆಗುತ್ತೆ ಎಂಬ ಪ್ರತೀತಿ ಉಪ ಚುನಾವಣೆ ವೇಳೆ ಸತತ ಪ್ರಚಾರ-ಪ್ರವಾಸದಿಂದ ಬಳಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತುಸು ಬಿಡುವು ಮಾಡಿಕೊಂಡು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ರಾಜ್ಕುಮಾರ' ಸಿನಿಮಾ ವೀಕ್ಷಿಸಿದರು. ಅಷ್ಟಾಗಿದ್ದೇ ತಡ, ಸಿದ್ದರಾಮಯ್ಯ ಅವರನ್ನು ಸಿನಿಮಾ ನೋಡುವಂತೆ ಕನ್ನಡದ ನಟರು, ನಿರ್ದೇಶಕರು, ನಿರ್ಮಾಪಕರು ದುಂಬಾಲು ಬೀಳಲು ಆರಂಭಿಸಿದ್ದಾರೆ.
ಸೋಮವಾರ ಕಾಂಗ್ರೆಸ್ನ ಮಾಜಿ ಶಾಸಕ ಹಾಗೂ ನಟ ಕಮ್ ನಿರ್ಮಾಪಕ ಬಿ.ಸಿ. ಪಾಟೀಲ್ ಕೂಡ ತಮ್ಮ ನಿರ್ಮಾಣದ ‘ಹ್ಯಾಪಿ ನ್ಯೂ ಇಯರ್' ಸಿನಿಮಾ ನೋಡುವಂತೆ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದರು. ಈ ಚಿತ್ರದಲ್ಲಿ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿಪಾಟೀಲ್ ನಾಯಕಿ. ಸಿಎಂ ‘ರಾಜ್ಕುಮಾರ' ವೀಕ್ಷಿಸಿದ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸಿದ್ದವು. ಅದರಿಂದ ಸಿನಿಮಾದ ಕಲೆಕ್ಷನ್ ಕೂಡ ಹೆಚ್ಚಾಯಿತು ಎಂಬುದು ಗಾಂಧಿನಗರದ ಜನರ ಅಂಬೋಣ. ಹೀಗಾಗಿ ಕನ್ನಡದ ಒಬ್ಬೊಬ್ಬರೇ ನಿರ್ಮಾಪಕರು, ನಿರ್ದೇಶಕರು, ನಟರು ಸಿಎಂಗೆ ಸಿನಿಮಾ ನೋಡುವಂತೆ ದುಂಬಾಲು ಬಿದ್ದು ನಿತ್ಯ ಬೆಳಗಾದರೆ ಮನೆ ಮುಂದೆ ಪಾಳಿ ನಿಲ್ಲಲು ಆರಂಭಿಸಿದ್ದಾರೆ.
ದುಬೈಗೆ ಪ್ರವಾಸದಿಂದ ಬಂದ ನಂತರ ಸಿದ್ದರಾಮಯ್ಯ ‘ಬಾಹುಬಲಿ-2' ತೆಲುಗು ಸಿನಿಮಾ ನೋಡಿದರು. ಅದೇ ದಿನ ಸಂಜೆ ‘ನಿರುತ್ತರ' ಕನ್ನಡ ಚಿತ್ರ ವೀಕ್ಷಿಸಿದರು. ಈ ಎರಡೂ ಸಿನಿಮಾಗಳನ್ನು ಸಿದ್ದರಾಮಯ್ಯ ವೀಕ್ಷಿಸಿದ ವಿಚಾರವನ್ನು ಸ್ವತಃ ಸಿಎಂ ಕಚೇರಿಯೇ ಸಿಎಂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತು. ಅದಕ್ಕೆ ಭಾರಿ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇದೇ ವೇಳೆ ನಟ ಹುಚ್ಚ ವೆಂಕಟ್ ಪತ್ರಿಕಾಗೋಷ್ಠಿ ಕರೆದು, ಮಾಧ್ಯಮಗಳ ಮೂಲಕವೇ ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿದರು. ಅಲ್ಲದೇ ನಟ ಮಿತ್ರ ಅವರು ತಮ್ಮ ‘ರಾಗ' ಸಿನಿಮಾ ನೋಡುವಂತೆ ವಿಧಾನಸೌಧಕ್ಕೆ ತೆರಳಿ ಭಿನ್ನವಿಸಿದ್ದರು. ಮುಂದಿನ ಚುನಾ ವಣೆ ಕೂಡ ಸಮೀಪಿಸಿದ್ದು, ಅನೇಕ ನಟ-ನಟಿಯರು ಪಕ್ಷದ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಆ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಎಲ್ಲರ ಆಹ್ವಾನವನ್ನು ಒಪ್ಪುಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಹೀಗೊಂದು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.