ಟಿ. ನರಸೀಪುರಕ್ಕೆ ಸುನಿಲ್‌ಬೋಸ್, ವರುಣಕ್ಕೆ ಡಾ. ಯತೀಂದ್ರ ಅಭ್ಯರ್ಥಿ : ಸಿಎಂ ಪರೋಕ್ಷ ಘೋಷಣೆ

By Suvarna Web DeskFirst Published Jan 11, 2018, 10:31 PM IST
Highlights

ನರಸೀಪುರ ಕ್ಷೇತ್ರದಲ್ಲಿ ಸಚಿವ ಮಹದೇವಪ್ಪ ಸ್ಪರ್ಧಿಸುತ್ತಾನೋ ಇಲ್ಲವೊ ಗೊತ್ತಿಲ್ಲ. ತಾನೂ ಕೂಡ ವರುಣದಲ್ಲಿ ನಿಲ್ಲುವ ಖಾತರಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸುನಿಲ್ ಬೋಸ್ ಹಾಗೂ ಡಾ. ಯತೀಂದ್ರ ಅವರಿಬ್ಬರು ಕೈ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಮುನ್ಸೂಚನೆಯನ್ನು ಸೂಚ್ಯವಾಗಿ ನೀಡಿದರು

ಟಿ. ನರಸೀಪುರ(ಜ.11): ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿ. ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸುನಿಲ್ ಬೋಸ್ ಹಾಗೂ ವರುಣ ವಿಧಾನಸಭಾ ಕ್ಷೇತ್ರಕ್ಕೆ ಡಾ. ಯತೀಂದ್ರ ಅವರೇ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಘೋಷಣೆ ಮಾಡಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಗುರುವಾರ ಸಂಜೆ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದ ಸಾಧನ ಸಂಭ್ರಮದಲ್ಲಿ ಮಾತನಾಡಿದ ಅವರು, ನರಸೀಪುರ ಕ್ಷೇತ್ರದಲ್ಲಿ ಸಚಿವ ಮಹದೇವಪ್ಪ ಸ್ಪರ್ಧಿಸುತ್ತಾನೋ ಇಲ್ಲವೊ ಗೊತ್ತಿಲ್ಲ. ತಾನೂ ಕೂಡ ವರುಣದಲ್ಲಿ ನಿಲ್ಲುವ ಖಾತರಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸುನಿಲ್ ಬೋಸ್ ಹಾಗೂ ಡಾ. ಯತೀಂದ್ರ ಅವರಿಬ್ಬರು ಕೈ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಮುನ್ಸೂಚನೆಯನ್ನು ಸೂಚ್ಯವಾಗಿ ನೀಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ, ವರುಣ ವಿಧಾನಸಭಾ ಕ್ಷೇತ್ರದಲ್ಲಿ ೨ ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ ಜನರು ರಾಜಕೀಯ ಶಕ್ತಿಯನ್ನು ನೀಡಿದರು. ಆಯ್ಕೆ ಮಾಡಿದ ಮತದಾರರ ಗೌರವಕ್ಕೆ ಧಕ್ಕೆಯನ್ನು ತಂದಿಲ್ಲ. ಕಳಂಕರಹಿತ ಹಾಗೂ ಭ್ರಷ್ಟಚಾರಮುಕ್ತ ಆಡಳಿತವನ್ನು ನೀಡಿದ್ದೇನೆ. ವರುಣ, ಟಿ. ನರಸೀಪುರದಲ್ಲಿ ಮುಂದೆಯೂ ಕಾಂಗ್ರೆಸ್ ಗೆಲ್ಲಿಸಿ. ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಉದಯಿಸುವ ಸೂರ್ಯನಷ್ಟೇ ಸತ್ಯವೆಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

click me!