
ಬೆಂಗಳೂರು(ಸೆ.27): ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಿಷೇಧಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಉಗ್ರ ಸಂಘಟನೆಯಲ್ಲಿ ಆರೋಪ ಪಿಎಫ್ಐಗೆ ಮುಳವಾಗಲಿದ್ದು, ನಿಷೇಧಕ್ಕೆ ಆಗ್ರಹಿಸಿ ಕೇರಳ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಆದರೆ ಪಿಎಫ್ಐ ಮಾತ್ರ ನಮ್ಮ ಸಂಘಟನೆ ಪರಿಶುದ್ಧವಾಗಿದೆ ಅಂತಾ ವಾದಕ್ಕಿಳಿದಿದೆ.
ಕರ್ನಾಟಕ ಹಾಗೂ ಕೇರಳದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಅಪರಾಧ ಕೃತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ನಿಷೇಧಕ್ಕೆ ಚಿಂತನೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯ ನಿಷೇಧಕ್ಕೆ ನಿರ್ಧರಿಸಿದೆ ಎಂಬ ಸುದ್ದಿ ಬೆನ್ನಲ್ಲೇ, ಕೇರಳ ಸರ್ಕಾರ ಪತ್ರ ಬರೆದು ಮತ್ತಷ್ಟು ಒತ್ತಡ ಹೇರಿದೆ. ಬಾಂಬ್ ತಯಾರಿ, ಟೆರರ್ ಕ್ಯಾಂಪ್ ಗಳ ನಿರ್ವಹಣೆ ಸೇರಿದಂತೆ ಹಲವು ಉಗ್ರ ಕೃತ್ಯಗಳಲ್ಲಿ ಪಿಎಫ್'ಐ ಭಾಗಿಯಾಗಿರುವ ಆರೋಪ ಇದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ವರದಿ ಸಲ್ಲಿಸಿದ ಬಳಿಕ ಕೇಂದ್ರ ಗೃಹ ಸಚಿವಾಲಯ ನಿಷೇಧಕ್ಕೆ ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಕ್ರಮದ ಸೂಚನೆ ಸಿಕ್ಕ ಪಿಎಫ್ಐ ಇಂದು ಪತ್ರಿಕಾಗೋಷ್ಠಿ ನಡೆಸಿ, ತನ್ನ ವಿರುದ್ಧದ ಆರೋಪಗಳನ್ನ ಅಲ್ಲಗಳೆದಿದೆ. ಪಿಎಫ್ಐ ದಲಿತರ, ಶೋಷಿತರ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಕೆಲಸ ಮಾಡುತ್ತಿದೆ. ಮುಸ್ಲಿಂ ಸಂಘಟನೆಯನ್ನು ನಿರ್ಮೂಲನೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ಷಡ್ಯಂತ್ರ ಮಾಡಿದೆ. ಅಲ್ಲದೆ, ತನ್ನ ವಿರುದ್ಧ ಬಹುತೇಕ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಸಂಘಟನೆಯ ಕಾರ್ಯದರ್ಶಿ ಯಾಸಿರ್ ಹಸನ್ ತಿಳಿಸಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಪ್ರೋಫೆಸರ್ ಜೋಸೆಫ್ ಕೈ ಕತ್ತರಿಸಿದ ಪ್ರಕರಣ ಹಾಗೂ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಪ್ರಕರಣಗಳಲ್ಲಿ ಪಿಎಫ್ಐ ಭಾಗಿ ಬಗ್ಗೆ ಸಾಕ್ಷ್ಯಗಳಿವೆ. ತಮ್ಮ ಸಂಘಟನೆ ನಿಷೇಧ ಮಾಡಿದರೆ, ಕೋರ್ಟ್ ಮೆಟ್ಟಿಲೇರುವ ಸೂಚನೆಯನ್ನು ಸಂಘಟಕರು ನೀಡಿದ್ದಾರೆ. ಸದ್ಯ ಚಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು, ನಿಷೇಧ ಆಗುತ್ತಾ ಅನ್ನೋದು ಸದ್ಯದ ಕುತೂಹಲ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.