
ಬೆಂಗಳೂರು: ಕಾವೇರಿ ತೀರ್ಪಿನಿಂದ ಕರ್ನಾಟಕ ಹಿರಿ ಹಿರಿ ಹಿಗ್ಗುತ್ತಿದೆ. ತಮಿಳುನಾಡಿಗೆ ನೀಡುವ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ತುಸು ನಿರಾಳವಾಗುವಂತೆ ತೀರ್ಪು ನೀಡಿದ್ದು, ಕನ್ನಡಿಗರು ನೆಮ್ಮದಿಯಾಗಿದ್ದಾರೆ. ಆದರೆ, ಇದರಲ್ಲಿ ಕಹಿಯೂ ಇದೆ.
ಕಾವೇರಿ ನಿರ್ವಹಣಾ ಮಂಡಳಿ 6 ವಾರದಲ್ಲಿ ರಚನೆಯಾಗಬೇಕೆಂದು ಹೇಳಿದ್ದು, ಇದರಿಂದ ರಾಜ್ಯಕ್ಕೆ ಮಾರಕವಾಗುವ ಸಾಧ್ಯತೆಗಳಿವೆ. ಈ ಮಂಡಳಿ ರಚನೆಯಾದರೆ, ತಿಂಗಳಿಗೆ ಎಷ್ಟೆಷ್ಟು ನೀರು ಬಿಡುಗಡೆ ಎಂದು ನಿಗದಿ ಮಾಡುವ ಅಧಿಕಾರ ಇರಲಿದೆ. ಈ ಮಂಡಳಿ ಬೇಡವೆಂಬುವುದು ರಾಜ್ಯದ ವಾದವಾಗಿತ್ತು. ಆದರೆ, ಕೋರ್ಟಿನ ಈ ಆದೇಶದಿಂದ ರಾಜ್ಯಕ್ಕೆ ಸಂಪೂರ್ಣ ಸೋಲಾಗಿದೆ.
ಕೊನೆಗೂ ರಚನೆ ಆಗಲಿಲ್ಲ ಸಂಕಷ್ಟ ಸೂತ್ರ
ಕಾವೇರಿ ನೀರಿನ ಹಂಚಿಕೆ ಸಾಮಾನ್ಯ ಮಳೆ ಬರುವ ವರ್ಷದಲ್ಲಿ ತೊಂದರೆಯೇ ಅಲ್ಲ. ಸಮಸ್ಯೆ ಉದ್ಭವ ಆಗುವುದೇ ಮಳೆ ಕಡಿಮೆ ಆದಾಗ. ಇದಕ್ಕೆ ಟ್ರಿಬ್ಯುನಲ್ ಕೂಡ ಯಾವುದೇ ಪರಿಹಾರ ಕೊಟ್ಟಿಲ್ಲ.
ಸುಪ್ರೀಂ ಕೋರ್ಟ್ ಮುಂದಿನ 15 ವರ್ಷಗಳವರೆಗೆ ಟ್ರಿಬ್ಯುನಲ್ ಹೇಳಿರುವಂತೆ ತಿಂಗಳು ತಿಂಗಳು ನೀರು ಬಿಡುಗಡೆ ಆಗಬೇಕು ಎಂದು ಹೇಳಿದ್ದು, ಇವತ್ತು ಕಡಿಮೆ ಮಾಡಿರುವ 14.75 ಟಿಎಂಸಿ ನೀರು ಮಾತ್ರ ಅನುಪಾತದ ಲೆಕ್ಕದಲ್ಲಿ ಕಡಿಮೆ ಮಾಡಬೇಕು ಎಂದಿದೆ. ನೀರು ಹಂಚಿಕೆ ಅನುಷ್ಠಾನಗೊಳಿಸುವ ಮಂಡಳಿ ಈ ಲೆಕ್ಕವನ್ನು ಮಾಡಲಿದೆ.
ಆದರೆ ಒಂದು ವೇಳೆ ನೀರು ಕಡಿಮೆ ಬಂದರೆ ಜೂನ್ನಿಂದ ಸೆಪ್ಟೆಂಬರ್ವರೆಗೆ 136 ಟಿಎಂಸಿ ಬಿಡುಗಡೆ ಮಾಡಬೇಕಾದ ಅನಿವಾರ್ಯತೆಯಿಂದ ಪಾರು ಮಾಡಿಲ್ಲ.
ಇವತ್ತಿನ ಹೊಸ ಹಂಚಿಕೆ ನಂತರವೂ ಮೊದಲಿನ 4 ತಿಂಗಳಲ್ಲಿ ಸರಿ ಸುಮಾರು 125 ಟಿಎಂಸಿ ನೀರನ್ನು ಕೊಡಲೇಬೇಕು.
ಹೀಗಿರುವಾಗ ಮಳೆ ಕಡಿಮೆ ಬಂದು ಎಷ್ಟು ನೀರು ಕಡಿಮೆ ಆಗುತ್ತದೋ, ಅಷ್ಟನ್ನು ಮಂಡಳಿ ಬಿಡುಗಡೆ ಮಾಡಿ ಎಂದು ಹೇಳಿದರೆ ಜಲ ವಿವಾದದ ಕಾನೂನು ಸೆಕ್ಷನ್ 6 ಆ (2) ಪ್ರಕಾರ ನಾವು ಪೂರ್ತಿ ಬಾಧ್ಯರೋ ಅಥವಾ ಮರಳಿ ಈಗಿನ ಹಾಗೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ಅವಕಾಶ ಇರುತ್ತದೋ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.