ಮೈಸೂರು(ಅ.04): ಮೈಸೂರು ದಸರಾ ಶುರುವಾಯ್ತು ಅಂದ್ರೆ ಸಾಕು.. ಪ್ರವಾಸಿಗರ ಹೂವನ್ನು ಅರಸಿ ಬರುವ ದುಂಬಿಗಳಂತೆ ಮೈಸೂರಿಗೆ ಆಗಮಿಸುತ್ತಿದ್ದರು. ಈ ಬಾರಿಯ ದಸರಾ ಪ್ರವಾಸಿಗರಿಲ್ಲದೆ ಸೊರಗಿ ಹೋಗಿದೆ. ವಿದೇಶಿ ಪ್ರವಾಸಿಗರು ತಮ್ಮ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿರುವುದರಿಂದ ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿದೆ. ಇದಕ್ಕೆಲ್ಲ ಕಾರಣ ಏನು ಗೊತ್ತಾ? ಇಲ್ಲಿದೆ ವಿವರ.
ವಿಶ್ವವಿಖ್ಯಾತಿ ಮೈಸೂರು ದಸರಾ ಬಂತೆಂದರೆ ಸಾಕು ಮೈಸೂರು ಪ್ರವಾಸಿಗರಿಂದ ತುಂಬಿ ಹೋಗುತ್ತಿತ್ತು. ಆದರೆ ಈ ಬಾರಿ ದಸರಾ ಪ್ರವಾಸಿಗರಿಲ್ಲದೆ ಕಳೆಗುಂದಿದೆ. ಇದಕ್ಕೆಲ್ಲ ಕಾರಣ ಕಾವೇರಿ ಎಫೆಕ್ಟ್. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಈ ಬಾರಿ ದಸರಾಕ್ಕೆ ಬರಬೇಕಿದ್ದ ಬಹಳಷ್ಟು ವಿದೇಶಿ ಪ್ರವಾಸಿಗರು ತಮ್ಮ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಅರಮನೆ ವೀಕ್ಷಣೆಗೆ ಪ್ರತಿ ದಿನ 3000 ದಷ್ಟು ವಿದೇಶಿ ಪ್ರವಾಸಿಗರು ಬರುತ್ತಿದ್ದರು. ಆದರೆ ಈ ಬಾರಿ ಅದು 120 ದಾಟುತ್ತಿಲ್ಲ ಎನ್ನುತ್ತಾರೆ ಗೈಡ್ಗಳು.
ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿರುವ ಕಾರಣ ಹೋಟೆಲ್ ಉದ್ಯಮ ಮತ್ತು ಪ್ರವಾಸೋದ್ಯಮದ ಮೇಲೆ ಅಡ್ಡ ಪರಿಣಾಮ ಬೀರಿದೆ. ಬಹಳಷ್ಟು ಹೋಟೆಲ್'ಗಳು ಖಾಲಿಯಾಗಿಯೇ ಇದೆ. ಇನ್ನು ದಸರಾ ಸಂಧರ್ಭದಲ್ಲಿ ಮೈಸೂರಿನಲ್ಲಿ ವಿದೇಶಿಯರಿಗೆ ಮನೆ ಆತಿಥ್ಯ ನೀಡುವಂತಹ ಪ್ರವಾಸೋದ್ಯಮಕ್ಕೂ ಸ್ವಲ್ಪ ಹಿನ್ನೆಡೆಯಾಗಿದೆ.
ಒಟ್ಟಾರೆ ಈ ಬಾರಿಯ ನಾಡಹಬ್ಬದ ಮೇಲೆ ಕಾವೇರಿ ವಿವಾದದ ಛಾಯೆ ಬಿದ್ದಿರುವುದಂತೂ ನಿಜ ದುರದುಷ್ಟ ಎಂದೇ ಹೇಳಬಹುದು. ಆದರೆ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ಮೈಸೂರಿಗರು ಈ ಬಾರಿ ಫುಲ್ ಎಂಜಾಯ್ ಮಾಡಲು ಅವಕಾಶ ಸಿಕ್ಕಿದಂತಾಗಿದೆ.