ಮೋದಿ ಕೇರ್‌ಗೆ ಸಚಿವ ಸಂಪುಟ ಅಸ್ತು

By Suvarna Web DeskFirst Published Mar 22, 2018, 8:31 AM IST
Highlights

ಜಗತ್ತಿನ ಅತಿದೊಡ್ಡ ಆರೋಗ್ಯ ಸುರಕ್ಷತಾ ವಿಮೆ ಜಾರಿಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು. ಪ್ರಧಾನಿ ಮೋದಿಯವರ ಈ ಮಹತ್ವಾಕಾಂಕ್ಷಿ ಯೋಜನೆಗೆ ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಮಿಶನ್‌ ‘ಆಯುಷ್ಮಾನ್‌ ಭಾರತ’ ಯೋಜನೆ ಜಾರಿಗೆ ಅನುಮೋದನೆ ದೊರಕಿದೆ.

ನವದೆಹಲಿ (ಮಾ. 22): ಜಗತ್ತಿನ ಅತಿದೊಡ್ಡ ಆರೋಗ್ಯ ಸುರಕ್ಷತಾ ವಿಮೆ ಜಾರಿಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು. ಪ್ರಧಾನಿ ಮೋದಿಯವರ ಈ ಮಹತ್ವಾಕಾಂಕ್ಷಿ ಯೋಜನೆಗೆ ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಮಿಶನ್‌ ‘ಆಯುಷ್ಮಾನ್‌ ಭಾರತ’ ಯೋಜನೆ ಜಾರಿಗೆ ಅನುಮೋದನೆ ದೊರಕಿದೆ.

ದೇಶದ ಸುಮಾರು 10 ಕೋಟಿ ಬಡ ಕುಟುಂಬಗಳಳಿಗೆ ವರ್ಷಕ್ಕೆ ಒಂದು ಕುಟುಂಬಕ್ಕೆ ಸುಮಾರು 5 ಲಕ್ಷ ರು. ವರೆಗಿನ ಆರೋಗ್ಯ ಚಿಕಿತ್ಸಾ ವೆಚ್ಚವನ್ನು ಭರಿಸಿಕೊಳ್ಳುವ ಅವಕಾಶ ಈ ಯೋಜನೆಯಲ್ಲಿರಲಿದೆ. ಇದು ಇಡೀ ದೇಶಕ್ಕೆ ಅನ್ವಯವಾಗಲಿದ್ದು, ಖಾಸಗಿ ಅಥವಾ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಯಾವುದೇ ಚಿಕಿತ್ಸೆ ಪಡೆದಾಗ ನಗದು ರಹಿತ ಚಿಕಿತ್ಸಾ ವೆಚ್ಚದ ಪ್ರಯೋಜನ ಪಡೆಯಬಹುದಾಗಿದೆ. ಎಸ್‌ಇಸಿಸಿ ದತ್ತಾಂಶ ಆಧಾರದಲ್ಲಿ, ಯಾರು ಯೋಜನೆಗೆ ಅರ್ಹರು ಎಂದು ನಿರ್ಧರಿಸಲಾಗುತ್ತದೆ. ಸಾರ್ವಜನಿಕ ಮತ್ತು ಪಟ್ಟಿಮಾಡಲಾದ ಖಾಸಗಿ ಸೌಲಭ್ಯಗಳ ಪ್ರಯೋಜನಗಳನ್ನು ಫಲಾನುಭವಿಗಳು ಇದರಲ್ಲಿ ಪಡೆಯಬಹುದು.

ವೆಚ್ಚದ ನಿಯಂತ್ರಣಕ್ಕಾಗಿ, ಸರ್ಕಾರವು ಮೊದಲೇ ನಿರ್ಧರಿಸಿರುವ ಪ್ಯಾಕೇಜ್‌ ದರದ ಆಧಾರದಲ್ಲಿ ಚಿಕಿತ್ಸೆಯ ವೆಚ್ಚ ಪಾವತಿಸಲಾಗುತ್ತದೆ. ಯೋಜನೆಯಲ್ಲಿ ರಾಜ್ಯಗಳ ಸಹಭಾಗಿತ್ವವೂ ಇರಲಿದೆ. ಯೋಜನೆಯನ್ನು ರಾಜ್ಯಗಳು ಮತ್ತು ಕೆಂದ್ರದ ನಡುವೆ ಸಮನ್ವಯಗೊಳಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಆಯುಷ್ಮಾನ್‌ ಭಾರತ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಮಿಶನ್‌ ಮಂಡಳಿ ರಚಿಸಲಾಗುತ್ತದೆ. ರಾಜ್ಯಗಳಲ್ಲಿ ಯೋಜನೆ ಜಾರಿಗಾಗಿ ರಾಜ್ಯ ಆರೋಗ್ಯ ಏಜೆನ್ಸಿ ರಚಿಸಬೇಕಾಗುತ್ತದೆ.

ರಾಜ್ಯಗಳ ಆರೋಗ್ಯ ಸಂಸ್ಥೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತದೆ. ಇದಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಇದು ಪೇಪರ್‌ ರಹಿತ ಮತ್ತು ನಗದು ರಹಿತ ವ್ಯವಹಾರವಾಗಿರಲಿದೆ. ಕುಟುಂಬದಲ್ಲಿ ಎಷ್ಟುಸದಸ್ಯರಾದರೂ ಇದರ ಪ್ರಯೋಜನ ಪಡೆಯಬಹುದು. ಈ ಯೋಜನೆಯಿಂದ ಬಡವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗಲಿದೆ. ಆರೋಗ್ಯ ಜೀವನ ಸುಧಾರಿಸುವುದರಿಂದ, ಉತ್ಪಾದಕತೆ ಮತ್ತು ಉದ್ಯೋಗ ಸೃಷ್ಟಿವೃದ್ಧಿಯಾಗಿ, ಗುಣಮಟ್ಟದ ಜೀವನದಲ್ಲಿ ಸುಧಾರಣೆ ಕಾಣಲಿದೆ.

click me!