
ಬೆಂಗಳೂರು(ಮೇ 24): ಬುಲೆಟ್ ಪ್ರಕಾಶ್ ಇಂದು ದೊಡ್ಡ ಬಾಂಬ್ ಸಿಡಿಸುತ್ತಾರೆಂದು ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಫೋಟಕ ಮಾಹಿತಿ ಹೊರಹಾಕುವುದಾಗಿ ಬರೆದಿದ್ದ ನಟ ಬುಲೆಟ್ ಪ್ರಕಾಶ್ ಇದೀಗ ತಮ್ಮ ಸಾಹಸ ಪ್ರಯತ್ನವನ್ನು ಕೈಬಿಟ್ಟಿದ್ದಾರೆ. ಹಿರಿಯರ ಸಲಹೆ ಮೇರೆಗೆ ತಾನು ಏನೂ ಹೇಳುತ್ತಿಲ್ಲ ಎಂದು ಬುಲೆಟ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಬುಲೆಟ್ ಹೇಳಿಕೊಂಡಿದ್ದೇನು?
ಚಿತ್ರರಂಗದಲ್ಲಿನ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ ಎಂದು ಬುಲೆಟ್ ಪ್ರಕಾಶ್ ನಿನ್ನೆ ಸಂಜೆ ಮೊದಲು ಟ್ವೀಟ್ ಮಾಡಿದ್ದಾರೆ. ನಂತರ, ದೊಡ್ಡ ನಟನ ಸಣ್ಣತನ ನಿಮಗೆ ಪರಿಚಯ ಮಾಡಿಸ್ತೀನಿ ಎಂದು ಇನ್ನೂ ದೊಡ್ಡ ಸ್ಫೋಟಕ ಮಾಹಿತಿ ಬಹಿರಂಗಪಡಿಸುವ ಸೂಚನೆ ನೀಡುತ್ತಾರೆ. ಅಷ್ಟಕ್ಕೆ ಸುಮ್ಮನಾಗದೆ, "ದೀಪ ಆರುವ ಮೊದಲು ಜೋರಾಗಿ ಉರಿಯುತ್ತದೆ," ಎಂದು ಮೂರನೇ ಟ್ವೀಟ್ ಕಳುಹಿಸುತ್ತಾರೆ. ಸುವರ್ಣನ್ಯೂಸ್ ಸೇರಿದಂತೆ ಆರೇಳು ಸುದ್ದಿ ವಾಹಿನಿಗಳನ್ನು ತಮ್ಮ ಟ್ವೀಟ್'ಗಳಲ್ಲಿ ಟ್ಯಾಗ್ ಮಾಡುತ್ತಾರೆ.
ಬುಲೆಟ್ ಪ್ರಕಾಶ್ ಬೆತ್ತಲು ಮಾಡುವ ಆ ನಟ ಯಾರು ಎಂಬ ಕುತೂಹಲ ಸಾಕಷ್ಟು ಜನರಿಗೆ ಕೆರಳಿಸಿತ್ತು. ಆದರೆ, ಬುಲೆಟ್ ಬಾಂಬ್ ಇಂದು ಸಿಡಿಯಲಿಲ್ಲ. ತಮಗೆ ರಾತ್ರಿಯಿಂದ ಸಾಕಷ್ಟು ಕರೆಗಳು ಬಂದಿದ್ದು, ಹಿರಿಯರ ಸಲಹೆ ಮೇರೆಗೆ ನಾನು ಮತ್ತೇನನ್ನೂ ಹೇಳಬಾರದೆಂದು ನಿರ್ಧರಿಸಿದ್ದೇನೆ ಎಂದು ಬುಲೆಟ್ ಸ್ಪಷ್ಟನೆ ನೀಡಿದ್ದಾರೆ.
"ನಿನ್ನೆಯ ಟ್ವೀಟ್'ನಿಂದ ಕೆಲವರಿಗೆ ಬೇಸರವಾಗಿದೆ. ಹಿರಿಯರ ಜೊತೆ ಬಗೆಹರಿಸಿಕೊಳ್ಳುತ್ತಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಬೇರೆ ರೂಪ ಬೇಡ," ಎಂದು ಬುಲೆಟ್ ಪ್ರಕಾಶ್ ಇಂದು ಬೆಳಗ್ಗೆ ಟ್ವೀಟ್ ಮಾಡಿ ವಿವಾದ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.