ಎಲ್ಲಾ ಗೊತ್ತಿದ್ದೂ ಆಪ್ತರನ್ನು ರಕ್ಷಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಕಿಡಿಕಾರಿದರು.
ಶಿವಮೊಗ್ಗ: ಇನ್ನು ಹದಿನೈದು ದಿನದಲ್ಲಿ ರಾಜ್ಯದಲ್ಲಿ ನಾಲ್ಕು ಸಚಿವರು ಸಂಪುಟದಿಂದ ಹೊರನಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಕಾಲವೂ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸ ಬಾಂಬ್ ಹಾಕಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಪುಟದಿಂದ ಹೊರ ನಡೆಯುವ ಸಚಿವರು ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೂ, ತಮಗೆ ಬಂದ ಹಣದಲ್ಲಿ ಸಿದ್ದರಾಮಯ್ಯ ಅವರಿಗೂ ಪಾಲು ಕೊಟ್ಟಿದ್ದೇವೆ ಎಂದು ಹೇಳಿದರೂ ಅಚ್ಚರಿ ಇಲ್ಲ ಎಂದು ಹೇಳಿದರು.
ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆ ರೀತಿ ಮಾತನಾಡುವ ಮೊದಲು ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮುಖ್ಯಮಂತ್ರಿಗಳ ಎಡ-ಬಲ ಇರುವ ಸಚಿವರುಗಳೇ ಕಮಿಷನ್ ವ್ಯವಹಾರದಲ್ಲಿ ಪಾಲುದಾರರಾಗಿದ್ದು, ಇನ್ನೆರೆಡು ಮೂರು ತಿಂಗಳಲ್ಲಿ ಎಲ್ಲವೂ ಬಯಲಾಗಲಿದೆ. ತಮ್ಮ ಆಪ್ತ ಸಚಿವರ ಹಗರಣದಿಂದಾಗಿಯೇ ಮುಖ್ಯಮಂತ್ರಿಯವರು ಖುರ್ಚಿ ಬಿಡುವ ಕಾಲ ಸನ್ನಿಹಿತವಾಗಿದೆ ಎಂದರು.
ಶೇ.40 ಕಿಕ್'ಬ್ಯಾಕ್: ಎತ್ತಿನಹೊಳೆ ಯೋಜನೆಗೆ ಅನುಮತಿ ಸಿಗುವ ಮೊದಲೇ ರೂ.14 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕಾಮ ಗಾರಿ ಆರಂಭಕ್ಕೆ ಮುನ್ನವೇ ಕೋಟ್ಯಂತರ ಮೌಲ್ಯದ ಪೈಪ್ ಖರೀದಿಸ ಲಾಗಿದೆ. ಇದರಲ್ಲಿ ಸಿಎಂ ಹಾಗೂ ಅವರ ಆಪ್ತ ಸಚಿವರು ಶೇ.30ರಿಂದ 40ರಷ್ಟುಕಿಕ್ ಬ್ಯಾಕ್ ಪಡೆದಿದ್ದಾರೆ ಎಂದೂ ಬಿಎಸ್ವೈ ಆರೋಪಿಸಿದ್ದಾರೆ. ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಗುತ್ತಿಗೆದಾರ ಸಚಿವರೊಬ್ಬರಿಗೆ ರೂ.500 ಕೋಟಿ ನೀಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅಕ್ರಮ ನೋಟು ಪ್ರಕರಣದಲ್ಲಿ ಸಿಕಿಬಿದ್ದಿರುವ ಗುತ್ತಿಗೆದಾರ ಜಯಚಂದ್ರ ಸಹ ಹಣ ಸಚಿವರದ್ದು ಎಂದಿದ್ದಾನೆ. ಈ ಎಲ್ಲ ಪ್ರಕರಣಗಳಲ್ಲೂ ಮುಖ್ಯಮಂತ್ರಿಗಳ ಆಪ್ತ ಸಚಿವರೇ ಇದ್ದಾರೆ. ಎಲ್ಲಾ ಗೊತ್ತಿದ್ದೂ ಆಪ್ತರನ್ನು ರಕ್ಷಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಕಿಡಿಕಾರಿದರು.
ಸಚಿವರೊಬ್ಬರ ಸೆರೆಗೆ ಸಿದ್ಧತೆ?
ಬೆಂಗಳೂರು ರೂ.2000 ಮುಖಬೆಲೆಯ ರೂ.5.7ಕೋಟಿ ನೋಟುಗಳು ಪತ್ತೆಯಾದ ಪ್ರಕರಣದಲ್ಲಿ ರಾಜ್ಯದ ಹಿರಿಯ ಸಚಿವರೊಬ್ಬರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಇಂಡಿಯಾ ಟೈಮ್ಸ್ ವರದಿ ಮಾಡಿದೆ. ಸಚಿವರ ಬಂಧನ ನಿರ್ಧಾರವನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದ್ದು ಹಸಿರು ನಿಶಾನೆಗಾಗಿ ಕಾಯುತ್ತಿದೆ ಎನ್ನಲಾಗಿದೆ.
ಯಡಿಯೂರಪ್ಪ ಗಡುವು ಕಾದುನೋಡುತ್ತೇವೆ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇನ್ನೂ ನಾಲ್ವರು ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿ ಯಿಸಿರುವ ಕೆಪಿ ಸಿಸಿ ಅಧ್ಯಕ್ಷ ಡಾ. ಜಿ. ಪರಮೇ ಶ್ವರ, ಯಡಿಯೂರಪ್ಪ ಅವರೇ 15 ದಿನ ಗಡವು ನೀಡಿದ್ದಾರೆ. ನಾವು ಕಾದು ನೋಡುತ್ತೇವೆ ಎಂ ದರು. ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಯಡಿಯೂರಪ್ಪ ಹೇಳಿಕೆ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯಿಸುವುದಿಲ್ಲ. ಕಾದು ನೋಡು ತ್ತೇವೆ ಎಂದರು. ಸಚಿವ ಎಚ್.ವೈ.ಮೇಟಿ ಅವರ ವಿರುದ್ಧ ಆರೋಪಿಸಿ ರುವ ಆರ್'ಟಿಐ ಕಾರ್ಯಕರ್ತ ಬಸವರಾಜ ಅವರು ನನ್ನನ್ನು ಭೇಟಿಯಾಗುವ ವಿಚಾರ ನನಗೆ ಗೊತ್ತಿಲ್ಲ. ಈವರೆಗೆ ಅವರು ನನ್ನನ್ನಾಗಲಿ, ನನ್ನ ಕಚೇರಿಯನ್ನಾಗಲಿ ಸಂಪರ್ಕಿಸಿಲ್ಲ. ಈಗಾಗಲೇ ಮೇಟಿ ಅವರೇ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ ಎಂದರು.
(ಕನ್ನಡಪ್ರಭ ವಾರ್ತೆ)
epaper.kannadaprabha.in