
ಬೆಂಗಳೂರು(ಆ.12): ಕಳೆದ ವರ್ಷ ಸಾರ್ವಜನಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮಾಜಿ ಅಬಕಾರಿ ಸಚಿವ ಎಚ್. ವೈ. ಮೇಟಿ ರಾಸಲೀಲೆ ಸಿ.ಡಿ. ಬಹಿರಂಗ ಪ್ರಕರಣದ ಸಿಐಡಿ ತನಿ ಖೆಯು ಮಹತ್ವದ ತಿರುವು ಪಡೆದಿದ್ದು, ಈಗ ದಿಗ್ಗನೆ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಹೆಸರು ಕೇಳಿ ಬಂದಿದೆ.
ಇದೇ ತಿಂಗಳ 17ರಂದು ಗುರುವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಮೂಲಕ ಈಗಾಗಲೇ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ ಕೃತ್ಯದ ಸುಳಿಯಲ್ಲಿ ಸಿಲುಕಿರುವ ಸಂತೋಷ್'ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಮುಲಾಲಿ ಮೇಲೂ ಅನುಮಾನ:
ಮೇಟಿ ಅವರು ಪಾಲ್ಗೊಂಡಿದ್ದರು ಎನ್ನಲಾದ ರಾಸಲೀಲೆ ಸಿ.ಡಿ. ಬಹಿರಂಗದ ಹಿಂದೆ ವ್ಯವಸ್ಥಿತ ಸಂಚು ನಡೆದಿರುವುದು ತನಿಖಾ ಹಂತದಲ್ಲಿ ಗೊತ್ತಾಗಿದೆ. ಈ ಪ್ರಕರಣದಲ್ಲಿ ಬಳ್ಳಾರಿಯ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ ಮುಲಾಲಿ ಮೇಲೂ ಅನುಮಾನವಿದೆ. ಈ ಸಿ.ಡಿ. ಬಹಿರಂಗಕ್ಕೂ ಮುನ್ನ ರಾಜಶೇಖರ್ ಮುಲಾಲಿ ಜತೆ ಸಂತೋಷ್ ನಿರಂತರ ಸಂಪರ್ಕದಲ್ಲಿದ್ದರು. ಈ ಸಂಗತಿಯು ಮುಲಾಲಿ ಅವರ ಮೊಬೈಲ್ ಕರೆಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ರಾಸಲೀಲೆ ದೃಶ್ಯಾವಳಿಯನ್ನು ಬೇರೆಯವರಿಗೆ ತಮ್ಮ ಮೊಬೈಲ್'ನಿಂದ ಸಂತೋಷ್ ಸಹ ರವಾನಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ರಾಜಶೇಖರ್ ಮುಲಾಲಿ ಹಾಗೂ ಸಂತೋಷ್ ನಡುವಿನ ಸ್ನೇಹದ ಬಗ್ಗೆ ವಿಚಾರಣೆಗೆ ಕರೆಯಲಾಗಿದೆ. ಕೃತ್ಯದ ಕುರಿತು ಅವರನ್ನು ಪ್ರಶ್ನಿಸಿದ ನಂತರ ಪಾತ್ರವಿದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಾಗಲಿದೆ.
ಈವರೆಗಿನ ತನಿಖೆಯಲ್ಲಿ ರಾಜಶೇಖರ್ ಮುಲಾಲಿ ಜತೆ ಅವರು ಸಂಪರ್ಕದಲ್ಲಿದ್ದ ಬಗ್ಗೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ. 2016ರ ಲೈಂಗಿಕ ವಿವಾದ ಸುಳಿಗೆ ಸಿಲುಕಿದ ಬಾಗಲಕೋಟೆ ಶಾಸಕ ಮೇಟಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದ್ದರು. ಈ ರಾಜೀನಾಮೆಗೂ ಮುನ್ನ ಸಚಿವರ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತ ಮುಲಾಲಿ ‘ಧ್ವನಿ ಎತ್ತಿದ್ದರು. ಅದು ಕೊನೆಗೆ ಮೇಟಿ ಅವರ ಮಂತ್ರಿಗಿರಿಗೆ ಕುತ್ತು ಬಂದಿತ್ತು.
ನನಗೆ ರಾಜೇಂದ್ರ ಪರಿಚಿತ: ಸಂತೋಷ್ ಒಪ್ಪಿಗೆ
ನನಗೆ ಬಿಜೆಪಿ ಮುಖಂಡ ರಾಜೇಂದ್ರ ಪರಿಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್. ಆರ್. ಸಂತೋಷ್ ಶುಕ್ರವಾರ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನ ಕೂಡ ಸಂತೋಷ್ ತನಿಖಾಧಿಕಾರಿಗಳು ಶುಕ್ರವಾರ ವಿಚಾರಣೆಗೆ ಹಾಜರಾದರು.
ಸುಮಾರು ಆರು ಗಂಟೆಗಳ ವಿಚಾರಣೆ ಎದುರಿಸಿದ ಸಂತೋಷ್, ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೂ, ಬಿಜೆಪಿ ಮುಖಂಡ ರಾಜೇಂದ್ರನಿಗೂ ಸಂಬಂಧ ಇಲ್ಲ ಎಂದು ಶುಕ್ರವಾರ ಕೂಡ ಪುನರುಚ್ಚರಿಸಿದ್ದಾರೆ. ಹೀಗಾಗಿ ತನಿಖಾಧಿಕಾರಿಗಳು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಜೇಂದ್ರನನ್ನು ಕರೆಸಿ ಮುಖಾಮುಖಿ ವಿಚಾರಣೆ ನಡೆಸಿದರು. ಈ ವೇಳೆ ಸಂತೋಷ್, ರಾಜೇಂದ್ರ ಹಾಗೂ ಇನ್ನಿತರರ ಜತೆ ಫೋನ್'ನಲ್ಲಿ ಸಂಪರ್ಕ ಮಾಡಿರುವ ಬಗ್ಗೆ (ಸಿಡಿಆರ್) ತನಿಖಾಧಿಕಾರಿಗಳು ದಾಖಲೆ ನೀಡಿದಾಗ ರಾಜೇಂದ್ರನ ಪರಿಚಯ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ಕೂಡ ವಿಚಾರಣೆ ನಡೆಯಲಿದೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದರು. ಬೆಳಗ್ಗೆ 11.30 ರಿಂದ ಸಂಜೆ 5.30 ತನಕ ಸಂತೋಷ್ ತಮ್ಮ ಇಬ್ಬರು ವಕೀಲರೊಂದಿಗೆ ವಿಚಾರಣೆಗೆ ಹಾಜರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.