
ಬೆಂಗಳೂರು(ಫೆ.07): ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟರ್ ವಾರ್ ಭರ್ಜರಿಯಾಗಿ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.
ಇಡೀ ಟ್ವೀಟ್ ಉದ್ದಕ್ಕೂ ಯಡಿಯೂರಪ್ಪ ಅವರು ‘ಡಿಯರ್ ಮಿ.10 ಪರ್ಸೆಂಟ್ ಸಿಎಂ ಸಿದ್ದರಾಮಯ್ಯ’ ಎಂದೇ ಸಂಬೋಧಿಸಿದ್ದಾರೆ. ನೀವು ಚರ್ಚೆಗೆ ಮುಂದಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಇದನ್ನು ದೆಹಲಿವರೆಗೆ ಕೊಂಡೊಯ್ಯುವ ಮೊದಲು ನೀವು ನನ್ನ ಕೆಳಕಂಡ ಪಂಚ ಪ್ರಶ್ನೆಗಳಿಗೆ ಉತ್ತರಿಸಬಹುದಲ್ಲ ಎಂದೂ ಯಡಿಯೂರಪ್ಪ ವ್ಯಂಗ್ಯವಾಗಿ ಹೇಳಿದ್ದಾರೆ.
1. ಲೋಕಾಯುಕ್ತ ಸಂಸ್ಧೆಗಿದ್ದ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ಅದನ್ನು ಹಲ್ಲಿಲ್ಲದ ಸಂಸ್ಥೆಯನ್ನಾಗಿ ಮಾಡಿದ್ದು ಯಾಕೆ?
2. ಡಿವೈಎಸ್'ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ದಾಖಲಿಸಿರುವ ಎಫ್'ಐಆರ್'ನಲ್ಲಿ ನಂ.1 ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಅಂಥ ಸಚಿವರ ಬೆನ್ನಿಗೆ ನೀವು ನಿಂತುಕೊಂಡಿದ್ದು ಯಾಕೆ? ಅಂಥ ಕಳಂಕಿತ ಸಚಿವರನ್ನು ಇಟ್ಟುಕೊಂಡ ನಿಮ್ಮ ಸಂಪುಟದ ಮೌಲ್ಯ ಎಲ್ಲಿ ಹೋಯಿತು?
3. ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಉದ್ಯಮಿಯೊಬ್ಬರಿಗೆ ಅನುಕೂಲ ಮಾಡಿಕೊಟ್ಟ ಬದಲಾಗಿ ನೀವು ಅಧಿಕಾರಿಯೊಬ್ಬರಿಂದ ಪಡೆದುಕೊಂಡಿದ್ದು ಎನ್ನಲಾದ 70 ಲಕ್ಷ ರುಪಾಯಿ ಮೌಲ್ಯದ ಹ್ಯೂಬ್ಲೋಟ್ ವಾಚ್, ನಿಮ್ಮ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ..?
4. ನೀವು ರೈತರ ಪರವಾಗಿರುವವರು ಎಂದು ಹೇಳಿಕೊಳ್ಳುತ್ತೀರಿ. ಹಾಗಿದ್ದ ಮೇಲೂ ನಿಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 3,500ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..?
5. ಕೊಪ್ಪಳ ಹಾಗೂ ಕುಷ್ಟಗಿ ತಾಲೂಕುಗಳಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೆಲಸ ಮಾಡದೇ ನಕಲಿ ಬಿಲ್'ಗಳನ್ನು ಸೃಷ್ಟಿಸಿ ಹಣ ಹೊಡೆದ 39.38 ಕೋಟಿ ರು. ಮೊತ್ತದ ನೀರಾವರಿ ಹಗರಣವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.