ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಯಡಿಯೂರಪ್ಪ ಸವಾಲು

By Web DeskFirst Published Aug 4, 2018, 11:10 AM IST
Highlights

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸವಾಲು ಹಾಕಿದ್ದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. 

ಹುಬ್ಬಳ್ಳಿ :  ಲಿಂಗಾಯತ ಮುಖ್ಯಮಂತ್ರಿಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆ ಏನು ಎಂದು ಕೇಳಿದವರು ಯಾರು?  ಚನ್ನಪಟ್ಟಣದಲ್ಲಿ ಜಾತಿ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಮತಹಾಕಿದಿರಿ ಎಂದು ಹೇಳಿದವರು ಯಾರು?
ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಬರುವ ಆದಾಯ ಏನು ಎಂದು ಕೇಳಿದವರು ಕುಮಾರಸ್ವಾಮಿ ಅವರಲ್ಲವೇ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಹಾಕಿರುವ ಮೂರು ಪ್ರಶ್ನೆಗಳಿವು. 

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಅಧಿಕಾರ ಸಿಗದೆ ಹತಾಶೆ ಭಾವನೆಯಿಂದ ಪ್ರತ್ಯೇಕ ಉತ್ತರ ಕರ್ನಾಟಕ ಕುರಿತು ಹೇಳಿಕೆ ನೀಡಲಾಗುತ್ತಿದೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಪ್ರತಿಪಕ್ಷ ನಾಯಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. 

ಅಧಿಕಾರ ಸಿಗದ ಕಾರಣಕ್ಕಾಗಿ ಹತಾಶೆಗೊಳಗಾಗಿ ಮಾತನಾಡಿಲ್ಲ. ಹತಾಶೆ ಭಾವನೆ ನಮ್ಮಲಿಲ್ಲ. ಅವಕಾಶವಾದಿ ರಾಜಕಾರಣವನ್ನು ಬಿಜೆಪಿ ಮಾಡಿಲ್ಲ. ತತ್ವ ಸಿದ್ಧಾಂತ ಮೇಲೆ ರಾಜಕೀಯ ಮಾಡಲಾಗಿದೆ’ ಎಂದು ಬಲವಾಗಿ ಪ್ರತಿಪಾದಿಸಿದರು. ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖ್ಯ ಮಂತ್ರಿಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆ ಏನು ಎಂದು ಕೇಳಿದವರು ಯಾರು? ಚನ್ನಪಟ್ಟಣದಲ್ಲಿ ಜಾತಿ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಮತಹಾಕಿದಿರಿ ಎಂದು ಹೇಳಿದವರು ಯಾರು? ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಬರುವ ಆದಾಯ ಏನು ಎಂದು ಕೇಳಿದವರು ಕುಮಾರಸ್ವಾಮಿ ಅವರಲ್ಲವೇ? ಈ ಪ್ರಶ್ನೆಗಳಿಗೆ ದೇವೇಗೌಡ ಅವರು ಉತ್ತರಿಸಬೇಕು ಎಂದು ತಿರುಗೇಟು ನೀಡಿದರು. 

ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೇಜವಾಬ್ದಾರಿ ಹೇಳಿಕೆಯಿಂದ ಉತ್ತರ ಕರ್ನಾಟಕ ಹೊತ್ತಿ ಉರಿಯುವಂತಾಗಿದೆ. ಮಗ ಮಾಡಿದ ತಪ್ಪನ್ನು ತಿದ್ದಿಕೊಳ್ಳುವಂತೆ ಹೇಳುವ ಬದಲು ಇಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ಬೆಳಗಾವಿಯಲ್ಲಿ ಮಠಾಧೀಶರ ಪ್ರತಿಭಟನೆಯಲ್ಲಿ ಭಾಗಿಯಾಗಿ ಅಖಂಡ ಕರ್ನಾಟಕಕ್ಕೆ ಬೆಂಬಲ ನೀಡಿದ್ದೇನೆ. ಮುಖ್ಯಮಂತ್ರಿ ಮಾಡುವ ಕೆಲಸವನ್ನು ಮಾಡಿರುವುದು ತಪ್ಪಾ? ನನ್ನ ಕೆಲಸವನ್ನು ನಾನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೇನೆ ಎಂದರು.

click me!