2014 ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದ್ದ ಬಿಜೆಪಿ ಇದೀಗ ಮತ್ತೊಮ್ಮೆ ಗಲುವಿನ ಪತಾಕೆ ಹಾರಿಸಲು ಸಿದ್ಧತೆ ನಡೆಸಿದೆ. ಪ್ರತೀ ಬೂತ್ ಮಟ್ಟದಲ್ಲಿಯೂ ಕೂಡ ಇರುವ ದೇವಾಲಯ ಹಾಗೂ ಜನರ ಮಾಹಿತಿ ಸಂಗ್ರಹ ಮಾಡುವ ಮೂಲಕ ಮತಗಳನ್ನು ಸೆಳೆಯಲು ಪ್ಲಾನ್ ಮಾಡಿಕೊಂಡಿದೆ.
ಆಗ್ರಾ : 2019ರ ಲೋಕಸಭಾ ಚುನಾವಣೆಗೆ ಈಗಾಗಲೇ ವಿವಿಧ ಪಕ್ಷಗಳು ಸಕಲ ಸಿದ್ಧತೆಯನ್ನು ಆರಂಭ ಮಾಡಿವೆ. ಇತ್ತ ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದುಗಳ ಮತವನ್ನು ಕಲೆಹಾಕಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಈಗಾಗಲೇ ಇಲ್ಲಿನ ವಿವಿಧ ಪ್ರದೇಶಗಳಲ್ಲಿರುವ ಪ್ರತೀ ಬೂತ್ ಮಟ್ಟದಲ್ಲಿರುವ ಮಠ ಮಂದಿರಗಳು ಹಾಗೂ ಧಾರ್ಮಿಕ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ಒಂದು ನಿರ್ದಿಷ್ಟ ಉದ್ದೇಶವನ್ನು ಇರಿಸಿಕೊಂಡು ಎಸ್ ಸಿ ಹಾಗೂ ಒಬಿಸಿಗಳ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ.
ಒಟ್ಟು ರಾಜ್ಯದ 1.4 ಲಕ್ಷ ಬೂತ್ ಗಳಲ್ಲಿ ಈ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ಅಲ್ಲದೇ ಪ್ರಮುಖ ಅರ್ಚಕರುಗಳ ಮಾಹಿತಿ ಹಾಗೂ ದೂರವಾಣಿ ಸಂಖ್ಯೆಗಳನ್ನೂ ಕೂಡ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಗಳನ್ನೂ ಕೂಡ ತಲುಪುವುದೇ ಉದ್ದೇಶವಾಗಿದೆ.
ಒಬಿಸಿ ಹಾಗೂ ಎಸ್ ಸಿ ಮಾಹಿತಿ ಸಂಗ್ರಹ ಮಾಡಲು ಆಯಾ ಸಮುದಾಯದವರನ್ನೇ ಬೂತ್ ಮಟ್ಟದಲ್ಲಿ ನೇಮಕ ಮಾಡಲಾಗುತ್ತಿದ್ದು ಅದರಲ್ಲಿ ಮಹಿಳೆಯರೂ ಕೂಡ ಸೇರಿದ್ದಾರೆ.
ಅಲ್ಲದೇ ಸ್ಥಳೀಯ ಮಟ್ಟದಲ್ಲಿ ಇರುವ ಪ್ರಮುಖ ನಾಯಕರ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡುವಂತೆ ತಿಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 1.6 ಲಕ್ಷ ಬೂತ್ ಗಳಿದ್ದು ಪ್ರತೀ ಬೂತ್ ಗೂ ಕೂಡ 21 ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ನೇಮಕ ಮಾಡುತ್ತಿದೆ.