
ಬೆಂಗಳೂರು : ನಿಗಮದ ‘ಗಂಗಾ ಕಲ್ಯಾಣ ಯೋಜನೆ’ಯಡಿ ಕೊಳವೆ ಬಾವಿ ಕೊರೆಸುವ ಕಾಮಗಾರಿಗಳಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದು, ಈ ಸಂಬಂಧ ಕೆಲವು ದಾಖಲೆಗಳನ್ನೂ ಬಹಿರಂಗಪಡಿಸಿದ್ದಾರೆ.
ಈ ಕೊಳವೆ ಬಾವಿ ಹಗರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡಬೇಕು. ಅಲ್ಲದೆ, ರಾಜ್ಯ ಸರ್ಕಾರ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಮಾಜ ಕಲ್ಯಾಣ ಇಲಾಖೆಯ ಅಧೀನದ ಅಂಬೇಡ್ಕರ್ ನಿಗಮದ ಏಳು ವಿಭಾಗಗಳಲ್ಲಿ ಕಾನೂನು ಬಾಹಿರವಾಗಿ ತರಾತುರಿಯಲ್ಲಿ 36 ಕೋಟಿ ವೆಚ್ಚದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಆದೇಶಿಸಲಾಗಿದೆ ಎಂದರು.
ಆಂಜನೇಯ ಅವರ ಹೊಳಲ್ಕೆರೆ ಕ್ಷೇತ್ರದಲ್ಲೇ ಒಂದೇ ದಿನ 1800 ಬೋರ್ ವೆಲ್ ಕೊರೆಸಲು ನಿಗಮ ಮುಂದಾಗಿದೆ. ಈ ಕಾಮಗಾರಿಗೆ ಹಣ ಸಹ ಬಿಡುಗಡೆಯಾಗಿದೆ. ಒಂದೇ ಕ್ಷೇತ್ರದಲ್ಲಿ 1800 ಬೋರ್ವೆಲ್ ತೆಗೆಯುವುದು ಕಾನೂನು ಬಾಹಿರವಾಗಿದೆ. ಇದರಿಂದ ಅಂರ್ತಜಲ ಮಟ್ಟವೂ ಮತ್ತಷ್ಟು ಕ್ಷೀಣಿಸಲಿದೆ ಎಂದು ದೂರಿದರು.
ಈ ಕಾಮಗಾರಿಗಳಿಗೆ ಪೂರ್ಣ ಹಣ ಬಿಡುಗಡೆಯಾಗಿದೆ. ಸಚಿವರ ಸ್ವಕ್ಷೇತ್ರದಲ್ಲಿ 18 ಕೋಟಿ ಪೋಲು ಮಾಡಲಾಗಿದೆ. ಇದುವರೆಗೆ ಬೆರಳೆಣಿಕೆಯಷ್ಟು ಬೋರ್ವೆಲ್ ಕೊರೆಯಲಾಗಿದ್ದು, ಬಾಕಿ ಹಣವನ್ನು ಸಂಪೂರ್ಣವಾಗಿ ನುಂಗಲಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬಂದಿದೆ.
ಒಂದೇ ದಿನದಲ್ಲೇ ಸಾವಿರಾರು ಬೋರ್ ವೆಲ್ ಕೊರೆಯಲು ಸಾಧ್ಯವೇ ಎಂದು ಶೋಭಾ ಮಾರ್ಮಿಕವಾಗಿ ಪ್ರಶ್ನಿಸಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಸಚಿವ ಆಂಜನೇಯ ಅವರು, ತಮ್ಮ ಕ್ಷೇತ್ರಕ್ಕೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಇತರೆ ಜಿಲ್ಲೆಗಳ ಮತ್ತು ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಒಂದೇ ದಿನದಲ್ಲಿ ವರ್ಗಾವಣೆ ಗೊಳಿಸಿದ್ದಾರೆ ಎಂದು ದೂರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.