ಬಿಜೆಪಿ - ಜೆಡಿಎಸ್ ನಾಯಕರಿಬ್ಬರ ನಡುವೆ ನೇಣಿನ ಸವಾಲ್

By Web DeskFirst Published Aug 26, 2018, 12:49 PM IST
Highlights

ಬಿಜೆಪಿ ಮಾಜಿ ಶಾಸಕ ಹಾಗೂ ಜೆಡಿಎಸ್ ಶಾಸಕರ ನಡುವೆ ಇದೀಗ ಮುಸುಕಿನ ಗುದ್ದಾಟ ಆರಂಭವಾಗಿದೆ. ಇಬ್ಬರ ನಡುವೆ ಭ್ರಷ್ಟಾಚಾರದ ಬಗ್ಗೆ ಆರೋಪ ಕೇಳಿ ಬಂದಿದ್ದು ನೇಣಿನ ಸವಾಲ್ ಹಾಕಿಕೊಂಡಿದ್ದಾರೆ. 

ಬೆಂಗಳೂರು :  ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಜೆಡಿಎಸ್‌ನ ಹಾಲಿ ಶಾಸಕ ಗೌರಿಶಂಕರ್ ನಡುವಿನ ಮುಸುಕಿನ ಗುದ್ದಾಟ ಇದೀಗ ತಾರಕಕ್ಕೇರಿದೆ. ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಗೌರಿಶಂಕರ್, ನೇಣಿಗೇರುವ ಸವಾಲನ್ನು ಮಾಜಿ ಶಾಸಕರಿಗೆ ಒಡ್ಡಿದ್ದಾರೆ.

ಇದೆಲ್ಲ ಶುರುವಾಗಿದ್ದು ಸುರೇಶ್‌ಗೌಡ ಅವರು ಗುರುವಾರ ಮಾಡಿದ ಆರೋಪ. ಶಾಸಕ ಗೌರಿಶಂಕರ್ ಅವರು ಅಧಿಕಾರಿಗಳ ವರ್ಗಾವಣೆ ಹಾಗೂ ಕಾಮಗಾರಿ ಹೆಸರಲ್ಲಿ 8 ಕೋಟಿ ರು. ಹಣ ಲೂಟಿ ಮಾಡಿದ್ದು,  ಅವರ ಆಪ್ತ ನಗುರಗನಹಳ್ಳಿ ವಿಜಯಕುಮಾರ್ ಡೈರಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಸಿಬಿಐ ತನಿಖೆಗೆ ವಹಿಸಬೇಕು. ಒಬ್ಬ ಪಿಎಸ್‌ಐ ವರ್ಗಾವಣೆಗೆ 15 ಲಕ್ಷ, ಸಿಪಿಐಗೆ 20 ಲಕ್ಷ ಫಿಕ್ಸ್ ಮಾಡಿ ವರ್ಗಾವಣೆ ದಂಧೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಕೆರಳಿದ ಗೌರಿಶಂಕರ್: ಈ ಆರೋಪದಿಂದ ಕೆರಳಿದ ಗೌರಿಶಂಕರ್, ಒಂದೊಮ್ಮೆ ಆರೋಪ ಸಾಬೀತಾದರೆ ನಾನು ನೇಣಿಗೆ ಏರುತ್ತೇನೆ, ಇಲ್ಲದಿದ್ದರೆ ಸುರೇಶ್ ಗೌಡ ನೀವು ನೇಣಿಗೇರುತ್ತೀರಾ ಎಂದು ಶನಿವಾರ ಸವಾಲು ಹಾಕಿದ್ದಾರೆ. ಅಲ್ಲದೇ ಸುರೇಶಗೌಡ ವಿರುದ್ಧ 5 ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದಿದ್ದಾರೆ.

ಶಾಸಕನಾಗಿ 3 ತಿಂಗಳಾಗಿದೆ. ಸದ್ಯ 2 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, 8 ಕೋಟಿ ರು. ಭ್ರಷ್ಟಾಚಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕಳೆದ 10 ವರ್ಷಗಳಿಂದ ಸುರೇಶ್ ಗೌಡ ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ, ಮದ್ಯ ಮಾರಾಟ, ಜೂಜು, ಕಲ್ಲು ಗಣಿಗಾರಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದರು. ಈಗ ಅದಕ್ಕೆಲ್ಲಾ ತಾವು ಬ್ರೇಕ್ ಹಾಕಿರುವುದರಿಂದ ಈ ರೀತಿ ಆರೋಪ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!