ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ರೂಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಸ್ತಾವನೆಯನ್ನು ರಾಜಕೀಯವಾಗಿ ಹೇಗೆ ಎದುರಿಸಬೇಕು ಎಂಬ ಗೊಂದಲ ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಕಂಡು ಬರುತ್ತಿದೆ. ಇದು ಚುನಾವಣಾ ವರ್ಷವಾಗಿದ್ದರಿಂದ ಸಿದ್ದರಾಮಯ್ಯ ಅವರು ಚುನಾವಣಾ ತಂತ್ರವಾಗಿಯೇ ಇಂಥದೊಂದು ಪ್ರಸ್ತಾವನೆ ಮುಂದಿಟ್ಟರು. ಈಗ ಏಕಾಏಕಿ ಪ್ರತ್ಯೇಕ ಧ್ವಜ ರೂಪಿಸಿದರೂ ಅದಕ್ಕೆ ಸಂವಿಧಾನದ ಮಾನ್ಯತೆ ಸಿಗದಿರಬಹುದು. ಆದರೆ, ಕನ್ನಡಿಗರಿಗೆ ಮಾತ್ರ ಇಂಥದೊಂದು ಧ್ವಜ ಬೇಕು ಎಂಬ ಭಾವನೆ ಮೂಡಿರುವುದು ಸುಳ್ಳಲ್ಲ. ಆದರೆ, ಬಿಜೆಪಿ ನಾಯಕರು ಹಿಂದೆ ಮುಂದೆ ಯೋಚಿಸದೆ ನಾಡಧ್ವಜ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದ್ದು ಪಕ್ಷದಲ್ಲೇ ಅನೇಕರಿಗೆ ಅಸಮಾಧಾನ ಹುಟ್ಟು ಹಾಕಿದೆ.
ಬೆಂಗಳೂರು(ಜು.21): ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ರೂಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಸ್ತಾವನೆಯನ್ನು ರಾಜಕೀಯವಾಗಿ ಹೇಗೆ ಎದುರಿಸಬೇಕು ಎಂಬ ಗೊಂದಲ ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಕಂಡು ಬರುತ್ತಿದೆ. ಇದು ಚುನಾವಣಾ ವರ್ಷವಾಗಿದ್ದರಿಂದ ಸಿದ್ದರಾಮಯ್ಯ ಅವರು ಚುನಾವಣಾ ತಂತ್ರವಾಗಿಯೇ ಇಂಥದೊಂದು ಪ್ರಸ್ತಾವನೆ ಮುಂದಿಟ್ಟರು. ಈಗ ಏಕಾಏಕಿ ಪ್ರತ್ಯೇಕ ಧ್ವಜ ರೂಪಿಸಿದರೂ ಅದಕ್ಕೆ ಸಂವಿಧಾನದ ಮಾನ್ಯತೆ ಸಿಗದಿರಬಹುದು. ಆದರೆ, ಕನ್ನಡಿಗರಿಗೆ ಮಾತ್ರ ಇಂಥದೊಂದು ಧ್ವಜ ಬೇಕು ಎಂಬ ಭಾವನೆ ಮೂಡಿರುವುದು ಸುಳ್ಳಲ್ಲ. ಆದರೆ, ಬಿಜೆಪಿ ನಾಯಕರು ಹಿಂದೆ ಮುಂದೆ ಯೋಚಿಸದೆ ನಾಡಧ್ವಜ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದ್ದು ಪಕ್ಷದಲ್ಲೇ ಅನೇಕರಿಗೆ ಅಸಮಾಧಾನ ಹುಟ್ಟು ಹಾಕಿದೆ.
ಸಂವಿಧಾನದ ಮಾನ್ಯತೆ ಸಿಗುತ್ತದೆಯೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ಅದನ್ನು ಜಾಣತನದಿಂದ ಪ್ರತಿಪಾದಿಸಬೇಕಿತ್ತು. ಏಕಾಏಕಿ ವಿರೋಧಿಸಿದ್ದರಿಂದ ಕನ್ನಡಿಗರು, ಕನ್ನಡಪರ ಸಂಘಟನೆಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. ಆಡಳಿತಾರೂಢ ಕಾಂಗ್ರೆಸ್ ಇದನ್ನೇ ಮುಂದಿಟ್ಟುಕೊಂಡು ತಮ್ಮ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿ ಹಣಿಯಬಹುದು, ಜನರಲ್ಲಿ ಬಿಜೆಪಿ ವಿರುದ್ಧ ಭಾವನೆ ಕೆರಳಿಸುವಂತೆ ಮಾಡಬಹುದು ಎಂಬ ಆತಂಕ ಪಕ್ಷದ ಹಲವು ಹಿರಿಯ ಮುಖಂಡರಲ್ಲಿ ಕಾಡತೊಡಗಿದೆ. ಬಿಜೆಪಿ ಮತ್ತು ದರ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮೊದಲಿನಿಂದಲೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿಕೊಂಡು ಬಂದಿವೆ. ಹೀಗಾಗಿ, ಬಿಜೆಪಿ ಈ ದೇಶದ ಪ್ರತಿಯೊಂದು ರಾಜ್ಯ ಪ್ರತ್ಯೇಕ ಧ್ವಜ ರೂಪಿಸುವುದನ್ನು ಒಪ್ಪುವುದು ಅಸಾಧ್ಯದ ಮಾತೇ ಸರಿ. ಹಾಗಂತ ತರಾತುರಿಯಲ್ಲಿ ವಿರೋಧಿಸುವ ಬದಲು ಕೆಲಕಾಲ ಮೌನಕ್ಕೆ ಶರಣಾಗಬಹುದಿತ್ತು ಅಥವಾ ಜಾಣತನದ ಪ್ರತಿಕ್ರಿಯೆ ನೀಡಬಹುದಿತ್ತು ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗತೊಡಗಿದೆ. ಸರ್ಕಾರ ಪ್ರತ್ಯೇಕ ನಾಡಧ್ವಜ ರೂಪಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸುವ ನಿಲುವು ಪ್ರಕಟಿಸುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಲವಾಗಿ ವಿರೋಧಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಲವಾಗಿ ಹರಿಹಾಯ್ದರು. ಅದಕ್ಕೆ ವಿರೋಧ ವ್ಯಕ್ತವಾದ ನಂತರ ಯಡಿಯೂರಪ್ಪ ಅವರ ಧ್ವನಿ ಸಣ್ಣಗಾಯಿತು.
ಯಡಿಯೂರಪ್ಪ ಅವರು ತಕ್ಷಣ ಏಕಾಏಕಿ ಪ್ರತಿಕ್ರಿಯೆ ನೀಡುವ ಮೊದಲು ಪಕ್ಷದ ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಈ ವಿಷಯಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು? ಪಕ್ಷದ ನಿಲುವು ಏನಿರಬೇಕು ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಬಹುದಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛೆಪಡದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.