
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಕಾಂಗ್ರೆಸ್ಸಿನ ಪ್ರಭಾವಿ ನಾಯಕರೂ ಆಗಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ವಿದೇಶದಲ್ಲಿ ಬರೋಬ್ಬರಿ 20 ಸಾವಿರ ಕೋಟಿ ರು.ನಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ‘ಬಾಂಬ್’ ಸಿಡಿಸಿದೆ. ಇದು ಬಿಜೆಪಿ -ಕಾಂಗ್ರೆಸ್ ವಾಕ್ಸಮರಕ್ಕೂ ಕಾರಣವಾಗಿದೆ.
ವಿದೇಶದಲ್ಲಿರುವ ಆಸ್ತಿ ಕುರಿತು ರಹಸ್ಯ ಕಾಪಾಡಿಕೊಂಡ ಸಂಬಂಧ ಚಿದಂಬರಂ ಪತ್ನಿ ನಳಿನಿ, ಪುತ್ರ ಕಾರ್ತಿ ಹಾಗೂ ಸೊಸೆ ಶ್ರೀನಿಧಿ ವಿರುದ್ಧ ಕಳೆದ ಶುಕ್ರವಾರ ಆದಾಯ ತೆರಿಗೆ ಇಲಾಖೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿತ್ತು. ಇದರ ಬೆನ್ನಲ್ಲೇ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗೆ ಅದೇ ಅಸ್ತ್ರವನ್ನು ಬಳಸಿ ಬಿಜೆಪಿ ತಿರುಗೇಟು ನೀಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ಪ್ರತ್ಯಸ್ತ್ರ ಪ್ರಯೋಗವನ್ನು ಟ್ವೀಟ್ ಮೂಲಕ ಆರಂಭಿಸಿದ್ದಾರೆ. ‘ಚಿದಂಬರ ಕುಟುಂಬ ಸದಸ್ಯರು ವಿದೇಶದಲ್ಲಿ 20 ಸಾವಿರ ಕೋಟಿ ರು. (3 ಶತಕೋಟಿ ಡಾಲರ್) ಅಕ್ರಮ ಆಸ್ತಿ ಹೊಂದಿದ್ದಾರೆ. ಕಪ್ಪು ಹಣ ಕುರಿತು ವಿಶೇಷ ತನಿಖಾ ತಂಡ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರೂ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ| ಮನಮೋಹನ ಸಿಂಗ್ ಹಾಗೂ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಹಿಂದೇಟು ಹಾಕಿದ್ದರು. ಏಕೆಂದರೆ ಎಸ್ಐಟಿ ರಚನೆ ಮಾಡಿದ್ದರೆ ಅವರ ನಾಯಕರೇ ಸಿಕ್ಕಿ ಬೀಳುತ್ತಿದ್ದರು’ ಹರಿಹಾಯ್ದಿದ್ದಾರೆ.
ಇದಕ್ಕೆ ಟ್ವೀಟರ್ನಲ್ಲೇ ತಿರುಗೇಟು ನೀಡಿರುವ ಚಿದು, ದೇಶದ ಶ್ರೀಮಂತ ರಾಜಕೀಯ ಪಕ್ಷದ ಮುಖ್ಯಸ್ಥರು ಶತಕೋಟಿ ಡಾಲರ್ ಕನಸು ಕಾಣುತ್ತಿ ದ್ದಾರೆ. ದೇಶದ ಜನರಿಗೆ ಭರವಸೆ ನೀಡಿದ್ದಂತೆ ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ ೧೫ ಲಕ್ಷ ಜಮೆ ಮಾಡಿ ಎಂದು ಟಾಂಗ್ ನೀಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್ಸಿನ ಭ್ರಷ್ಟಾಚಾರ ಆರೋಪ ಗಳಿಗೆ ತಿರುಗೇಟು ನೀಡುವಂತೆ ದೇಶಾದ್ಯಂತ ಎಲ್ಲ ನಾಯಕರಿಗೂ ಬಿಜೆಪಿ ಸೂಚನೆ ನೀಡಿದೆ. ಅದರ ಮೊದಲ ಭಾಗವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರುದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಚಿದು ವಿರುದ್ಧ ಹರಿಹಾಯ್ದಿದ್ದಾರೆ.
ಚಿದಂಬರಂ ಕುಟುಂಬ ಸದಸ್ಯರ ವಿರುದ್ಧ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿ ಕಾಂಗ್ರೆಸ್ ಪಾಲಿಗೆ ನವಾಜ್ ಷರೀಫ್ ಗಳಿಗೆಯಾ ದಂತಿದೆ. ವಿದೇಶಗಳಲ್ಲಿರುವ ಆಸ್ತಿಯನ್ನು ಬಹಿರಂಗ ಮಾಡದ ಕಾರಣಕ್ಕೆ ನವಾಜ್ ಷರೀಫ್ ಅವರನ್ನು ಪಾಕಿಸ್ತಾನ ನ್ಯಾಯಾಲಯ ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು. ಪ್ರಶ್ನಾರ್ಹ ಹಣಕಾಸು ವ್ಯವಹಾರ ನಡೆಸಿದ ಕಾರಣಕ್ಕೆ ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ಅಧ್ಯಕ್ಷರು ಈ ಬಗ್ಗೆ ಪ್ರತಿಕ್ರಿಯಿಸಬೇಕು. ಚಿದಂಬರಂ ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಅವರ ಪಕ್ಷ ಹಾಗೂ ಇಡೀ ದೇಶಕ್ಕೆ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ಸೀತಾರಾಮನ್ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಚಿದಂಬರಂ, ರಕ್ಷಣಾ ಸಚಿವ ಸ್ಥಾನದಿಂದ ನಿರ್ಮಲಾ ಅವರನ್ನು ತೆಗೆದು ಆದಾಯ ತೆರಿಗೆ ಇಲಾಖೆಯ ವಕೀಲರನ್ನಾಗಿ ನೇಮಕ ಮಾಡ ಬೇಕು. ವಕೀಲರ ಹುದ್ದೆಗೆ ಅವರನ್ನು ಸ್ವಾಗತಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.