ಎಪಿಜೆ ಅಬ್ದುಲ್ ಕಲಾಂ ಭಾರತ ಕಂಡ ಧೀಮಂತ ವ್ಯಕ್ತಿತ್ವಗಳಲ್ಲೊಂದು. ವಿಜ್ಞಾನ ಮತ್ತು ತಂತ್ರಜ್ಞಾನ ರಂಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದವರಲ್ಲಿ ಕಲಾಂ ಒಬ್ಬರು. ಭಾರತದ ‘ಮಿಸೈಲ್ ಮ್ಯಾನ್’ಎಂದೇ ಕರೆಯಲ್ಪಡುವ ಕಲಾಂ, ಫೋಕ್ರಾನ್-II ಪರಮಾಣು ಪರೀಕ್ಷೆ, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ರೂವಾರಿ. 2002-2007 ಅವಧಿಯಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಕಲಾಂ, ಬ್ರಹ್ಮಚಾರಿ ಮತ್ತು ಸಸ್ಯಹಾರಿಯಾಗಿದ್ದವರು!
ಭಾರತ ಹಾಗೂ ವಿಶ್ವ ಕಂಡ ಆ ಮರೆಯಲಾಗದ ವ್ಯಕ್ತಿತ್ವದ ಬಗ್ಗೆ ತಿಳಿದಿರಬೇಕಾದ 10 ವಿಷಯಗಳು:
15 ಅಕ್ಟೋಬರ್ 1931ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಅವ್ವಲ್ ಫಕೀರ್ ಜೈನುಲ್ ಆಬೀದೀನ್ ಅಬ್ದುಲ್ ಕಲಾಂ, 1954ರಲ್ಲಿ ತಿರುಚಿಯ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. ಬಳಿಕ, 1957ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಉನ್ನತ ಶಿಕ್ಷಣ.
ರೋಹಿಣಿ ಉಪಗ್ರಹವನ್ನು ಭೂಕಕ್ಷೆಗೆ ಹಾರಿಸಿದ ಭಾರತದ ಮೊತ್ತಮೊದಲ ಉಪಗ್ರಹ ಉಡಾವಣಾ ವಾಹಕ (SLV III)ಕ್ಕೆ ಕಲಾಂ ನೇತೃತ್ವ. ಆ ಮೂಲಕ ಬಾಹ್ಯಾಕಾಶ ಕ್ಲಬ್ ಗೆ ಭಾರತದ ಎಂಟ್ರಿ!
ಸುಮಾರು 2 ದಶಕಗಳ ಕಾಲ ಇಸ್ರೋನಲ್ಲಿ ಸೇವೆ ಸಲ್ಲಿಸಿದ ಬಳಿಕ, ಡಿಆರ್ ಡಿಓನಲ್ಲಿ ಆಧುನಿಕ ಕ್ಷಿಪಣಿ ಅಭಿವೃಧಿ ಪಡಿಸುವ ಮಹತ್ತರ ಜವಾಬ್ದಾರಿ ಹೊತ್ತುಕೊಂಡ ಕಲಾಂ
ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಕಾರ್ಯರೂಪಕ್ಕಿಳಿಸಿದ ಕಲಾಂಗೆ ಕ್ಷಿಪಣಿ ಮನುಷ್ಯನೆಂಬ ಬಿರುದು
ಪರಮಾಣು ಶಕ್ತಿ ಕೇವಲ 5 ರಾಷ್ಟ್ರಗಳಿಗೆ [ಅಮೆರಿಕಾ, ರಷ್ಯಾ, ಇಂಗ್ಲಂಡ್, ಚೀನಾ ಮತ್ತು ಫ್ರಾನ್ಸ್] ಮಾತ್ರ ಸೀಮಿತವಾಗಿದ್ದ ಕಾಲವದು.
ಫೋಕ್ರಾನ್-II ಪರಮಾಣು ಪರೀಕ್ಷೆ ನಡೆಸುವ ಮೂಲಕ ಭಾರತವು ತನ್ನ ಪರಮಾಣು ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿತು. ಈ ಪರೀಕ್ಷೆಯ ಹಿಂದಿದ್ದವರು ಕಲಾಂ!
2018ರಲ್ಲಿ ನಿರ್ಮಿಸಲಾದ ಜಾನ್ ಅಬ್ರಹಾಂ ನಟನೆಯ ‘ಪರಮಾಣು: ದಿ ಸ್ಟೋರಿ ಆಫ್ ಫೋಕ್ರಾನ’ಚಿತ್ರ ಅಬ್ದುಲ್ ಕಲಾಂರಿಂದ ಸ್ಫೂರ್ತಿ ಪಡೆದಿದೆ.
ಕಲಾಂ ಪಡೆದಿರುವ ಗೌರವ ಡಾಕ್ಟರೇಟ್ ಗಳ ಸಂಖ್ಯೆ ಒಂದಲ್ಲ, ಎರಡಲ್ಲ. ಭಾರತ ಹಾಗೂ ವಿದೇಶ ವಿವಿಗಳಿಂದ ಬರೋಬ್ಬರಿ 48 ಗೌರವ ಡಾಕ್ಡರೇಟ್ ಗಳನ್ನು ಪಡೆದ ಹಿರಿಮೆ ಕಲಾಂ ಅವರದ್ದು!
ಭೌತಶಾಸ್ತ್ರ ಮತ್ತು ರಕ್ಷಣಾ ತಂತ್ರಜ್ಞಾನದ ಹೊರತು, ಕಲಾಂ ಗ್ರಾಮೀಣ ಆರೋಗ್ಯ ಕ್ಷೇತ್ರವನ್ನು ಉತ್ತಮಪಡಿಸುವಲ್ಲೂ ಶ್ರಮಿಸಿದ್ದಾರೆ. ಹೃದಯರೋಗ ತಜ್ಞ ಸೋಮರಾಜು ಜೊತೆ ಸೇರಿ ಕಡಿಮೆ ಬೆಲೆಯ ಸ್ಟೆಂಟನ್ನು ಅಭಿವೃದ್ಧಿಪಡಿಸಿದ್ದಾರೆ. ತರುವಾಯ ಆ ಸ್ಟೆಂಟ್ ಗೆ ಕಲಾಂ-ರಾಜು ಸ್ಟೆಂಟ್ ಎಂದೇ ನಾಮಕರಣವಾಯಿತು.
1992-1999 ವರೆಗೆ ಕಲಾಂ ಪ್ರಧಾನಿ ಮುಖ್ಯ ವೈಜ್ಞಾನಿಕ ಸಲಹೆಗಾರರನಾಗಿ ಮತ್ತು ಡಿಆರ್ ಡಿಓ ಕಾರ್ಯದರ್ಶಿಯಾಗಿ ಕಲಾಂ ಸೇವೆ ಸಲ್ಲಿಸಿದ್ದಾರೆ.
2002ರಲ್ಲಿ ಲಕ್ಷ್ಮೀ ಸೆಹಗಲ್ ಅವರನ್ನು ಸೋಲಿಸಿ ಅಧ್ಯಕ್ಷರಾದ ಕಲಾಂ, ದೇಶದ ಇತಿಹಾಸದಲ್ಲಿ ‘ಜನಾನುರಾಗಿ ರಾಷ್ಟ್ರಪತಿ’ಯೆಂದೇ ಗುರುತಿಸಿಕೊಂಡವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.