ತಮಿಳುನಾಡಿನ ಪಂಚವರ್ಣ ಸ್ವಾಮಿ ದೇವಾಲಯದಲ್ಲಿ ಅಚ್ಚರಿಯೊಂದು ಕಂಡು ಬಂದಿದೆ.
ಚೆನ್ನೈ: ರಾಮಾಯಣದಲ್ಲಿ ಪುಷ್ಪಕ ವಿಮಾನ ವಿದ್ದ ಬಗ್ಗೆ ಕೇಳಿದ್ದೇವೆ, ಬಹುತೇಕ ಎಲ್ಲ ಹಿಂದೂ ದೇವರುಗಳಿಗೆ ತಮ್ಮದೇ ಆದ ವಾಹನಗಳಿರುವ ಪರಿಕಲ್ಪನೆಯ ನಂಬಿಕೆ ಭಾರತದಲ್ಲಿ ವ್ಯಾಪಕವಾಗಿದೆ. ಆದರೆ, ಸುಮಾರು 2,000 ವರ್ಷಗಳಷ್ಟು ಹಳೆಯ ದೇವಸ್ಥಾನವೊಂದರಲ್ಲಿ 200 ವರ್ಷ ಹಿಂದೆಯಷ್ಟೇ ಸಂಶೋಧಿಸಲ್ಪಟ್ಟ ಸೈಕಲ್ ಚಿತ್ರದ ಕೆತ್ತನೆ ಇದೆ ಎಂದರೆ ಎಂತಹವರಿಗೂ ಆಶ್ಚರ್ಯವಾಗದಿರದು.
ಹೌದು, ಚೋಳರ ಕಾಲದಲ್ಲಿ ನಿರ್ಮಾಣವಾ ಗಿದೆ ಎನ್ನಲಾದ ತಮಿಳುನಾಡಿನ ತಿರುಚನಾಪಳ್ಳಿಯ ವರೈಯೂರ್ನ ಪಂಚವರ್ಣಸ್ವಾಮಿ ದೇವಸ್ಥಾನದೊಳಗೆ ಗೋಡೆಯೊಂದರಲ್ಲಿರುವ ವ್ಯಕ್ತಿಯೊಬ್ಬ ಸೈಕಲ್ ಸವಾರಿ ಮಾಡುವ ಚಿತ್ರದ ಕೆತ್ತನೆ ಈಗ ಸುದ್ದಿಯಾಗಿದೆ. ಪ್ರವೀಣ್ ಎಂಬಾತ ಈ ಚಿತ್ರದ ಬಗ್ಗೆ ಯೂಟ್ಯೂಬ್ನಲ್ಲಿ ಹಾಕಿದ್ದ ವೀಡಿಯೊ ಈಗ ಭಾರಿ ಚರ್ಚೆಗೊಳಪಟ್ಟಿದೆ. ಸೈಕಲ್ 1885ರಲ್ಲಿ ಸಂಶೋಧಿಸ ಲ್ಪಟ್ಟಿತು, ಆದರೆ 2000 ವರ್ಷ ಹಳೆಯ ದೇವಸ್ಥಾನದಲ್ಲಿ ಈ ಕೆತ್ತನೆ ಹೇಗೆ ಬಂತು? ಎಂಬ ಪ್ರಶ್ನೆ ಇತಿಹಾಸ ಕಾರರಲ್ಲಿ ಮೂಡಿದೆ.
ಸಂಶೋಧನೆ ಯೊಂದರ ಪ್ರಕಾರ, 1920 ರಲ್ಲಿ ಈ ದೇವಸ್ಥಾನ ಜೀರ್ಣೋದ್ಧಾರ ವಾಗಿದೆ. ಈ ವೇಳೆ ಸೈಕಲ್ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿದ್ದುದರಿಂದ, ಅದರಿಂದ ಪ್ರೇರಿತರಾಗಿ ಈ ಚಿತ್ರ ಕೆತ್ತಲಾಗಿರಬಹುದು ಎಂಬ ಊಹೆಯೂ ಇದೆ.ಆದರೆ ಈ ಕುರಿತು ನಿಖರ ಮಾಹಿತಿ ಎಲ್ಲಿಯೂ ಇಲ್ಲ.