ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ?

By Suvarna Web DeskFirst Published Jan 21, 2018, 8:53 AM IST
Highlights

ಚುನಾವಣೆ ಹೊಸ್ತಿಲಿನಲ್ಲಿ ಲಿಂಗಾಯತ  ಮತಬ್ಯಾಂಕ್‌'ಗೆ ಪ್ರತ್ಯೇಕ ಧರ್ಮ ಅಸ್ತ್ರ ಬಳಸಿದ ಕಾಂಗ್ರೆಸ್‌ಗೆ ಪ್ರತಿತಂತ್ರವಾಗಿ ರಾಜ್ಯ ಬಿಜೆಪಿ ಘಟಕವು ಚುನಾವಣೆಗೆ ಮುನ್ನವೇ  ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ ಗೌರವವನ್ನು ನೀಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹಾಕಲಾರಂಭಿಸಿದೆ. ಇದರ ಮೊದಲ ಹಂತವಾಗಿ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಜ.21): ಚುನಾವಣೆ ಹೊಸ್ತಿಲಿನಲ್ಲಿ ಲಿಂಗಾಯತ  ಮತಬ್ಯಾಂಕ್‌'ಗೆ ಪ್ರತ್ಯೇಕ ಧರ್ಮ ಅಸ್ತ್ರ ಬಳಸಿದ ಕಾಂಗ್ರೆಸ್‌ಗೆ ಪ್ರತಿತಂತ್ರವಾಗಿ ರಾಜ್ಯ ಬಿಜೆಪಿ ಘಟಕವು ಚುನಾವಣೆಗೆ ಮುನ್ನವೇ  ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ ಗೌರವವನ್ನು ನೀಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹಾಕಲಾರಂಭಿಸಿದೆ. ಇದರ ಮೊದಲ ಹಂತವಾಗಿ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಮೂಲಕ ಚುನಾವಣೆಯಲ್ಲಿ ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ  ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತ್ಯೇಕ ಲಿಂಗಾಯತರಿಗೆ ಧರ್ಮ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕಾಂಗ್ರೆಸ್‌'ಗೆ ಸಮುದಾಯದಿಂದ ಬೆಂಬಲ ವ್ಯಕ್ತವಾಗಿತ್ತು. ಇದಕ್ಕೆ ತಿರುಗೇಟು ನೀಡುವ ಸಂಬಂಧ ಬಿಜೆಪಿಯು ಶಿವಕುಮಾರ್  ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಿ ಮತಗಳನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿದೆ.

ರಾಜ್ಯದ ಲಕ್ಷಾಂತರ ಭಕ್ತರು ಸ್ವಾಮೀಜಿ ಅವರನ್ನು ನಡೆದಾಡುವ ದೇವರು ಎಂದೇ ಆರಾಧಿಸುತ್ತಾರೆ. ಅವರು ಭಾರತ ರತ್ನಕ್ಕೆ ಭಾಜನವಾಗುವುದನ್ನು ಜನರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಕಾಯಕ ಯೋಗಿ ಆಗಿರುವ ಅವರನ್ನು ಕೇಂದ್ರ ಸರ್ಕಾರ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಪತ್ರದಲ್ಲಿ ಎಸ್.ಎಂ.ಕೃಷ್ಣ ಅವರು ಮನವಿ ಮಾಡಿದ್ದಾರೆ.

೧೧೧ ವರ್ಷ ವಯೋಮಾನದ ಶಿವಕುಮಾರ ಸ್ವಾಮೀಜಿ ಅವರು ಕಳೆದ ಎಂಟು ದಶಕಗಳಿಗೂ ಅಧಿಕ ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಸಮಾನತೆಗಾಗಿ ಶ್ರಮಿಸುತ್ತಿರುವ ಸ್ವಾಮೀಜಿ ಮಾನವತಾವಾದಿಯಾಗಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯದ ಜ್ಞಾನವನ್ನು ಹೊಂದಿದ್ದಾರೆ. ಸಮಾಜದಲ್ಲಿನ ಕೆಟ್ಟ ಆಚರಣೆ, ಮೂಢನಂಬಿಕೆ  ಮತ್ತು ತಾರಮತ್ಯವನ್ನು ಹೊಡೆದೋಡಿಸಲು ಶ್ರಮಿಸುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜನತೆಗೆ ಸಮಾನತೆ ಕುರಿತು ಬೋಧನೆ ಮಾಡುತ್ತಿದ್ದಾರೆ. ಯಾವುದೇ ವರ್ಗ ಮತ್ತು ಮತಭೇದ ಇಲ್ಲದೆ ಪ್ರತಿಯೊಬ್ಬ ನಾಗರಿಕರು ದರ್ಶನ ಪಡೆಯುವ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಸ್ವಾಮೀಜಿ ಅವರು ಮನುಕುಲಕ್ಕೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ಮತ್ತು ಲಕ್ಷಾಂತರ ಭಕ್ತರ ನಿರೀಕ್ಷೆಯಂತೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನವನ್ನು ಅವರಿಗೆ ಪ್ರದಾನ  ಮಾಡಬೇಕು. ಭಾರತ ರತ್ನ ಪುರಸ್ಕಾರಕ್ಕೆ ಶಿವಕುಮಾರ ಸ್ವಾಮೀಜಿ ಅವರು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

 

click me!