ಭಾರತರತ್ನ ಹಾಗೂ ಪದ್ಮ ಪ್ರಶಸ್ತಿಗಳು ಯಾವುದೇ ಪದವಿ ಅಥವಾ ಬಿರುದುಗಳಲ್ಲ ಎಂದು ಪುನರುಚ್ಚರಿಸಿರುವ ಕೇಂದ್ರ ಸರ್ಕಾರ, ಜನರು ಇವುಗಳನ್ನು ತಮ್ಮ ಹೆಸರಿನ ಹಿಂದೆ ವಿಶೇಷವಾಗಿ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.
ನವದೆಹಲಿ[ಫೆ.13]: ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿರುವ ಭಾರತರತ್ನ ಹಾಗೂ ಪದ್ಮ ಪ್ರಶಸ್ತಿಗಳು ಯಾವುದೇ ಪದವಿ ಅಥವಾ ಬಿರುದುಗಳಲ್ಲ ಎಂದು ಪುನರುಚ್ಚರಿಸಿರುವ ಕೇಂದ್ರ ಸರ್ಕಾರ, ಜನರು ಇವುಗಳನ್ನು ತಮ್ಮ ಹೆಸರಿನ ಹಿಂದೆ ವಿಶೇಷಣವಾಗಿ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.
ಈ ಕುರಿತು ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಹನ್ಸರಾಜ್ ಅಹಿರ್, ಭಾರತರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀಗಳು ಸಂವಿಧಾನದ 18(1) ಪರಿಚ್ಛೇದದ ಪ್ರಕಾರ ಪದವಿ ಅಥವಾ ಬಿರುದು ಎನ್ನಿಸಿಕೊಳ್ಳುವುದಿಲ್ಲ. ಹೆಸರಿನ ಹಿಂದೆ ಬಳಸಿದರೆ ಅವುಗಳನ್ನು ವಾಪಸ್ ಪಡೆಯುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ.
ಶಿಕ್ಷಣ ಅಥವಾ ಸೇನಾಪಡೆಗೆ ಸಂಬಂಧಿಸಿದಂತೆ ಪದವಿ ನೀಡುವುದರ ಹೊರತಾಗಿ ಇನ್ನಾವುದೇ ಪದವಿಗಳನ್ನು ಜನರಿಗೆ ಪ್ರದಾನ ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ತಕ್ಷಣ ಪುರಸ್ಕೃತರಿಗೆ ನಿಮ್ಮ ಹೆಸರಿನ ಹಿಂದೆ ಇದನ್ನು ಬಳಸಬೇಡಿ ಎಂದು ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.