
ಬೆಂಗಳೂರು(ಡಿ.02): ಬಿಎಂಟಿಸಿ ಬಸ್ನಲ್ಲಿ 5 ರೂ. ಮುಖಬೆಲೆಯ ನಾಣ್ಯವನ್ನು ಬೀಳಿಸಿ ಮಹಿಳಾ ಪ್ರಯಾಣಿಕರೊಬ್ಬರ ಗಮನ ಬೇರೆಡೆ ಸೆಳೆದು 100 ಗ್ರಾಂ ಚಿನ್ನದ ಸರ ಎಗರಿಸಿ ನಾಲ್ವರು ಖತರ್ನಾಕ್ ಕಳ್ಳಿಯರು ಪರಾರಿಯಾಗಿರುವ ಘಟನೆ ಮಡಿವಾಳ ಸಮೀಪ ನಡೆದಿದೆ. ಹಾಸನ ಮೂಲದ ರಾಧಾ ಎಂಬುವರೇ ವಂಚನೆಗೊಳಗಾಗಿದ್ದು, ಹೊಸೂರು ರಸ್ತೆ ಕೂಡ್ಲುವಿನಲ್ಲಿರುವ ಸಂಬಂಧಿಕರ ಮನೆಗೆ ಗುರುವಾರ ಅವರು ತೆರಳುವಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ತಮ್ಮೂರಿನಿಂದ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ನಲ್ಲಿ ನಗರಕ್ಕೆ ಆಗಮಿಸಿದ ರಾಧಾ ಅವರು, ಅಲ್ಲಿಂದ ಕೂಡ್ಲುಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ್ದರು. ಆಗ ಮಾರ್ಗ ಮಧ್ಯೆ ನಿಮ್ಹಾನ್ಸ್ ಬಸ್ ನಿಲ್ದಾಣದಲ್ಲಿ ಐದು ವರ್ಷದ ಬಾಲಕ ಜತೆ ನಾಲ್ವರು ಮಹಿಳೆಯರು, ಅದೇ
ಬಸ್ ಹತ್ತಿದ್ದರು. ಕೆಲ ದೂರು ಸಾಗಿದ ನಂತರ ಆ ಮಹಿಳೆಯರು, ಬಸ್ಸಿನಲ್ಲಿ ಸಹ ಪ್ರಯಾಣಿಕರನ್ನು ತಳ್ಳಿಕೊಂಡು ರಾಧಾ ಅವರ ಸಮೀಪಕ್ಕೆ ಬಂದು ನಿಂತಿದ್ದರು. ತರುವಾಯ ಮಡಿವಾಳ ಚೆಕ್ ಪೋಸ್ಟ್ ಸಮೀಪ ಆರೋಪಿಗಳ ಪೈಕಿ ಒಬ್ಬಾಕೆ, 5 ರೂ. ನಾಣ್ಯವನ್ನು ಬೇಕಂತಲೇ ಕೆಳಗೆ ಬೀಳಿಸಿದ್ದಳು. ಆಗ ತಮ್ಮ ಕಾಲ ಬಳಿಗೆ ಬಿದ್ದ ನಾಣ್ಯವನ್ನು ಎತ್ತಿ ಆ ಮಹಿಳೆಗೆ ರಾಧಾ ಕೊಟ್ಟಿದ್ದಾರೆ. ಆಗ ಮತ್ತೊಂದು ನಾಣ್ಯವಿರಬಹುದು ಎಂದು ಹೇಳಿದಕ್ಕೆ ರಾಧಾ ಆಸನದಿಂದ ಮೇಲೆದ್ದು ಕೆಳಗೆ ಬಿದ್ದಿರುವ
ನಾಣ್ಯವನ್ನು ಹುಡುಕಲು ಮುಂದಾಗಿದ್ದಾರೆ. ಈ ವೇಳೆ ರಾಧಾ ಅವರ ವ್ಯಾನಿಟಿ ಬ್ಯಾಗ್ ಅನ್ನು ತೆಗೆದುಕೊಂಡ ಆರೋಪಿಗಳು, ಅದರಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ. ಕೆಲ ನಿಮಿಷದ ಬಳಿಕ ಸೀಟ್ ಕೆಳಗೆ ಮತ್ತೊಂದು ನಾಣ್ಯ ಬಿದ್ದಿಲ್ಲ ಎಂದು ಹೇಳಿ ಅವರು ಕುಳಿತಿದ್ದಾರೆ. ಅಷ್ಟರಲ್ಲಿ ಮಡಿವಾಳ ಚೆಕ್ ಪೋಸ್ಟ್ ಬಳಿ ಬಸ್ ನಿಲ್ಲಿಸುತ್ತಿದ್ದಂತೆ ಆ ಮಹಿಳೆಯರು ಇಳಿದಿದ್ದಾರೆ. ಕೆಲ ಹೊತ್ತಿನ ಬಳಿಕ ಮಹಿಳೆ ಯರ ನಾಟಕೀಯ ನಡವಳಿಕೆಗೆ ಅನುಮಾನಗೊಂಡ ರಾಧಾ, ಬ್ಯಾಗ್ ಪರಿಶೀಲಿಸಿ ದಾಗ ಕಳ್ಳತನ ಗೊತ್ತಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.