ಇನ್ನು ಇದೇ 16ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಆಗಲಿದ್ದು, ಮೊದಲ ಹಂತದಲ್ಲಿ 101 ವಾರ್ಡ್'ಗಳಲ್ಲಿ ಕಾರ್ಯಾರಂಭಗೊಳ್ಳಲಿದೆ.
ಬೆಂಗಳೂರು(ಆ.14): ರಾಜ್ಯ ಸರ್ಕಾರದ ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಹಂತದ ಕಾಮಗಾರಿ ಪರಿಶೀಲನೆ ಕಾರ್ಯ ಭರದಿಂದ ನಡೆಯುತ್ತಿದೆ.
ಕಳೆದ ಐದು ದಿನಗಳಿಂದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ವಿಶೇಷ ಆಯುಕ್ತ ಮನೋಜ್ ರಾಜನ್ ನೇತೃತ್ವದಲ್ಲಿ ತಡ ರಾತ್ರಿ ಕಾಮಗಾರಿ ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ. ಇಂದು ಕೂಡ ವಿಶೇಷ ಆಯುಕ್ತ ಮನೋಜ್ ರಾಜನ್ ಅವರು ಬೊಮ್ಮನಹಳ್ಳಿ, ಬನ್ನೇರುಘಟ್ಟ ವ್ಯಾಪ್ತಿಯ ಕೆಲ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಇನ್ನೊಂದೆಡೆ ಬಿಬಿಎಪಿ ಆಯುಕ್ತ ಮಂಜುನಾಥ್ ಪ್ರಸಾದ್ ಚಾಮರಾಜಪೇಟೆ, ರಾಜಾಜಿನಗರ ವಿಧಾನಸಭಾ ವ್ಯಾಪ್ತಿಯ ಕ್ಯಾಂಟೀನ್ ಕಾಮಗಾರಿ ಪರಿಶೀಲನೆ ನಡೆಸಿದರು.
ಇನ್ನು ಇದೇ 16ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಆಗಲಿದ್ದು, ಮೊದಲ ಹಂತದಲ್ಲಿ 101 ವಾರ್ಡ್'ಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಇನ್ನುಳಿದ 97 ವಾರ್ಡ್ ಗಳಲ್ಲಿ ಆಕ್ಟೋಬರ್ 2 ಒಳಗೆ ಆರಂಭಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ಮೊದಲ ಹಂತದಲ್ಲಿ ಉದ್ಘಾಟನೆಗೊಳ್ಳಲಿರುವ ಕ್ಯಾಂಟೀನ್ ಕಾರ್ಯ ಶೇ. 90ರಷ್ಟು ಮುಗಿದಿದ್ದು, ಇನ್ನೇನು ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಇದಲ್ಲದೆ ಕ್ಯಾಂಟೀನ್'ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ವಿಶೇಷ ಕೌಶ್ಯಲ್ಯ ತರಬೇತಿಯೂ ಕೂಡ ನಡೆಯುತ್ತಿದೆ.
ಇಂದಿರಾ ಕ್ಯಾಂಟೀನ್'ನಲ್ಲಿ 5 ರೂಪಾಯಿಗೆ ಬೆಳಗ್ಗೆಯ ಉಪಹಾರ ಹಾಗೂ 10 ರೂಪಾಯಿಗೆ ಮಧ್ಯಾಹ್ನದ ಊಟ ದೊರೆಯಲಿದೆ.