ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕ
2 ವರ್ಷದ ಮರಿ ಕಾಡಾನೆ ಬಾಲಾಜಿ ಸಾವು
ತುಂಗಾ ನದಿ ಹಿನ್ನೀರಿನಲ್ಲಿ ಸೆರೆ ಸಿಕ್ಕಿದ ಮರಿ ಕಾಡಾನೆ
ಅನಾರೋಗ್ಯದ ಹಿನ್ನೆಲೆಯಲ್ಲಿ ಇಹಲೋಕ ತ್ಯಜಿಸಿದ ಬಾಲಾಜಿ
ಸಕ್ರೆಬೈಲು ಆನೆ ಬಿಡಾರದಲ್ಲಿ ಬಾಲಾಜಿ ಅಂತ್ಯಕ್ರೀಯೆ
ಶಿವಮೊಗ್ಗ(ಜು.12): ಇಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ 2 ವರ್ಷದ ಕಾಡಾನೆ ಮರಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ 6 ತಿಂಗಳ ಹಿಂದೆ ತುಂಗಾ ನದಿಯ ಹಿನ್ನೀರಿನಲ್ಲಿ ಈ ಮರಿ ಕಾಡಾನೆ ಸೆರೆ ಸಿಕ್ಕಿತ್ತು.
ಸೆರೆ ಸಿಕ್ಕ ಮರಿ ಕಾಡಾನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದು ಆರೈಕೆ ಮಾಡಲಾಗಿತ್ತು. ಅಲ್ಲದೇ ಈ ಮರಿ ಕಾಡಾನೆಗೆ ಬಾಲಾಜಿ ಎಂದು ನಾಮಕರಣ ಕೂಡ ಮಾಡಲಾಗಿತ್ತು. ಆದರೆ ಸಕ್ರೆಬೈಲು ಆನೆ ಬಿಡಾರಕ್ಕೆ ಬಂದ ದಿನದಿಂದ ಈ ಮರಿ ಕಾಡಾನೆಗೆ ತೀವ್ರ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು ಎನ್ನಲಾಗಿದ್ದು, ಬಾಲಾಜಿ ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಾಜಿ ನಿಧನದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ವಿಭಾಗದ ಅಧಿಕಾರಿಗಳು, ಆನೆ ಬಿಡಾರದ ಮಾವುತರು, ಕಾವಾಡಿಗಳು ಸೇರಿ ಮೃತ ಆನೆ ಮರಿಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಈ ವೇಳೆ ಕಳೆದ ೬ ತಿಂಗಳಿನಿಂದ ಬಾಲಾಜಿ ಆರೈಕೆ ಮಾಡುತ್ತಿದ್ದ ಮಾವುತರ ಕಣ್ಣಾಲಿ ಗಳು ಒದ್ದೆಯಾಗಿದ್ದವು.