
ಕಡೂರು (ಮಾ. 10): ರಾಜ್ಯ ಸಮ್ಮಿಶ್ರ ಸರ್ಕಾರದ ರೈತರ ಸಾಲಮನ್ನಾ ಘೋಷಣೆ, ಬಲವಂತದಿಂದ ಸಾಲ ವಸೂಲಿ ಮಾಡದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಸೂಚನೆಯಿದ್ದರೂ ಬೆಳೆ ಸಾಲ ವಸೂಲಿಗೆ ಚಿಕ್ಕಮಗಳೂರಿನ ಕಡೂರಿನಲ್ಲಿ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ರೈತರ ಮನೆ ಮುಂದೆ ಪ್ರತ್ಯಕ್ಷರಾಗುತ್ತಿದ್ದಾರೆ.
ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದಿರುವ ರೈತರ ಒಟ್ಟು ಸಾಲವಾದ .52 ಸಾವಿರ ಕೋಟಿಯನ್ನು ಮನ್ನಾ ಮಾಡುತ್ತಿರುವುದಾಗಿ ಸರ್ಕಾರ ಘೋಷಿಸಿದೆ. ಆದರೂ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯ ಬರಪೀಡಿತ ತಾಲೂಕಿನ ನೂರಾರು ರೈತರಿಗೆ ಸಾಲದ ಬಡ್ಡಿ ಕಟ್ಟುವಂತೆ ಮನೆ ಬಾಗಿಲಿಗೆ ನೋಟಿಸ್ ನೀಡಿದ್ದಾರೆ.
2016ರಲ್ಲಿ ಸಾಲ ಪಡೆದಿದ್ದ ರೈತರು ಸರ್ಕಾರದ ಮನ್ನಾ ಘೋಷಣೆ ನಂತರ ನಿರುಮ್ಮಳಾಗಿದ್ದರು. ಇದೀಗ ಮತ್ತೆ ಬ್ಯಾಂಕಿನ ಅಧಿಕಾರಿಗಳು ಸಾಲದ ವಿವರದ ಜೊತೆ ದಿನಾಂಕವಿಲ್ಲದ ನೋಟಿಸ್ ನೀಡಿ ರೈತರ ಮನೆ ಬಾಗಿಲಿಗೆ ತೆರಳಿ ಬಡ್ಡಿ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ.
ಕಡೂರು ತಾಲೂಕಿನ ಗಡಿಯಲ್ಲಿರುವ ಮರವಂಜಿ ಗ್ರಾಮದ ಶಿವಶಂಕರ್ ಸೇರಿ ತಾಲೂಕಿನ ನೂರಾರು ರೈತರಿಗೆ ಎಕ್ಸಿಸ್ ಬ್ಯಾಂಕ್ ನೋಟಿಸ್ ನೀಡಿದೆ. ಈ ಕುರಿತು ವಿಚಾರಿಸಿದರೆ ಬ್ಯಾಂಕ್ನ ದಾವಣಗೆರೆ ವಲಯದ ಅಧಿಕಾರಿಗಳು ಸಾಲದ ಬಡ್ಡಿ ಕಟ್ಟಿಎಂದು ದುಂಬಾಲು ಬಿದ್ದಿದ್ದಾರೆ ಎನ್ನುತ್ತಾರೆ ರೈತರು.
‘ನಾನು 2016ರಲ್ಲಿ ಎಕ್ಸಿಸ್ ಬ್ಯಾಂಕಿನಿಂದ .4 ಲಕ್ಷ ಬೆಳೆ ಸಾಲ ಪಡೆದಿದ್ದೆ. ಇದಕ್ಕೆ ಸಂಬಂಧಿಸಿ 2018ರಲ್ಲಿ ಬಡ್ಡಿ ಕೂಡ ಕಟ್ಟಿದ್ದೆ. ಆದರೆ ಕುಮಾರಸ್ವಾಮಿ ಸರ್ಕಾರವು ಸಾಲ ಮನ್ನಾದ ಜೊತೆ ಸಾಲಮುಕ್ತ ಪತ್ರ ನೀಡುವುದಾಗಿ ಹೇಳಿದ್ದರೂ ಅಧಿಕಾರಿಗಳು ಮನೆ ಬಾಗಿಲಿಗೆ ಎಡತಾಕುತ್ತಾ ಬಡ್ಡಿ ಮಾತ್ರ ಕಟ್ಟಿಎನ್ನುತ್ತಿದ್ದಾರೆæ. ಇದರ ಮರ್ಮ ನಮಗೆ ತಿಳಿಯುತ್ತಿಲ್ಲ’ ಎಂದು ರೈತ ಶಿವಶಂಕರ್ ನೋವು ತೋಡಿಕೊಳ್ಳುತ್ತಾರೆ.
ಈ ಹಿಂದೆ ಬೆಳಗಾವಿಯ ರೈತರಿಗೆ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಬಂಧನ ವಾರಂಟ್ ಜಾರಿ ಮಾಡಿ ವಿವಾದ ಸೃಷ್ಟಿಸಿದ್ದರು. ಸರ್ಕಾರದ ಮಧ್ಯಪ್ರವೇಶದ ಬಳಿಕ ನೋಟಿಸ್ ವಾಪಸ್ ಪಡೆಯುವ ನಿರ್ಧಾರವನ್ನು ಅಧಿಕಾರಿಗಳು ಪ್ರಕಟಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.