ಲೋಕಸಭೆಯಲ್ಲಿ ಮೊಳಗಿದ ಜೈ ಶ್ರೀರಾಮ ಘೋಷಣೆ| ಪ.ಬಂಗಾಳ ಬಿಜೆಪಿ ನೂತನ ಸಂಸದರ ಪ್ರಮಾಣವಚನ| ಬಾಭುಲ್ ಸುಪ್ರಿಯೋ ಪ್ರಮಾಣವಚನದ ವೇಳೆ ಜೈ ಶ್ರೀರಾಮ ಘೋಷಣೆ| ಬಿಜೆಪಿಯ ಇತರ ಸದಸ್ಯರಿಂದ ಜೈ ಶ್ರೀರಾಮ ಘೋಷಣೆ|
ನವದೆಹಲಿ(ಜೂ.17): 17ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಇಂದು ಅಧಿಕೃತ ಚಾಳನೆ ದೊರೆತಿದ್ದು, ಲೋಕಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸಂಸದರು ಪ್ರಮಾಣವಚನ ಸ್ವೀಕರಿಸಿದರು.
ಈ ವೇಳೆ ಪ.ಬಂಗಾಳದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯರು ಪ್ರಮಾಣವಚನ ಸ್ವೀಕರಿಸುವಾಗ, ಸದನದಲ್ಲಿ ಜೈ ಶ್ರೀರಾಮ ಘೋಷಣೆ ಮೊಳಗಿದೆ. ಪ್ರಮುಖವಾಗಿ ಪ.ಬಂಗಾಳದ ಬಿಜೆಪಿ ಸಂಸದರಾದ ಬಾಬುಲ್ ಸುಪ್ರಿಯೋ ಮತ್ತು ದೇಬಶ್ರೀ ಚೌಧರಿ ಪ್ರಮಾಣವಚನ ಸ್ವೀಕರಿಸುವಾಗ ಇತರ ಬಿಜೆಪಿ ಸದಸ್ಯರು ಜೈ ಶ್ರೀರಾಮ ಘೋಷಣೆ ಕೂಗಿದರು.
ಲೋಕಸಭೆ ಚುನಾವಣೆ ವೇಳೆ ಪ.ಬಂಗಾಳದಲ್ಲಿ ಜೈ ಶ್ರೀರಾಮ ಘೋಷಣೆ ತೀವ್ರ ವಿರೋಧ ಸೃಷ್ಟಿಸಿತ್ತು. ಈ ಘೋಷಣೆ ಕೂಗುವುದನ್ನು ತಡೆಯಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪ್ರಯತ್ನಿಸಿದ್ದರೆ, ಈ ಘೋಷಣೆಯನ್ನು ಮುಂದಿಟ್ಟುಕೊಂಡೇ ಬಿಜೆಪಿ ಚುನಾವಣೆ ಎದುರಿಸಿತ್ತು.
ಇದೇ ಮೊದಲ ಬಾರಿಗೆ ಪ.ಬಂಗಾಳದಲ್ಲಿ 18 ಸೀಟುಗಳನ್ನು ಗೆದ್ದಿರುವ ಬಿಜೆಪಿ, ರಾಜ್ಯದಲ್ಲಿ ತನ್ನ ಬೇರು ಗಟ್ಟಿಗೊಳಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಜೈ ಶ್ರೀರಾಮ ಘೋಷಣೆಯನ್ನು ಬಳಸಿಕೊಂಡ ಬಿಜೆಪಿ, ಅದರಲ್ಲಿ ಯಶಸ್ವಿಯಾಗಿರುವುದು ವಿಶೇಷ.