ಗಜಗಾಂಭಿರ್ಯದಿಂದ ರಸ್ತೆಯಲ್ಲಿ ಸಾಗುತ್ತಿದ್ದ ಅರ್ಜುನನ ಮರದ ಅಂಬಾರಿಗೆ ವಿದ್ಯುತ್ ತಂತಿ ತಗುಲಿತು.
ಮೈಸೂರು(ಅ.02): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಕಳೆಕಟ್ಟಿದೆ. ಜಂಬೂಸವಾರಿ ಮೆರವಣಿಗೆಗೆ ಇನ್ನೇನು 9 ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ, ಅಂಬಾರಿ ಹೊತ್ತು ಸಾಗಲಿರುವ ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.
ಸಂಪ್ರದಾಯಬದ್ದವಾಗಿ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮರದ ಅಂಬಾರಿ ಕಟ್ಟಿ ತಾಲೀಮು ಆರಂಭಿಸಲಾಗಿದೆ. ಅಂಭಾರಿ ಹೊರಲಿರುವ ಅರ್ಜುನನಿಗೆ ಇತರೆ ಆನೆಗಳು ಸಾಥ್ ನೀಡಿದ್ದವು. ಮರದ ಅಂಬಾರಿ ಹೊತ್ತ ಅರ್ಜುನ ೧ ಗಂಟೆ ೧೦ ನಿಮಿಷದ ಅವಧಿಯಲ್ಲಿ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ ಸಾಗಿದ್ದಾನೆ.
ಮರದ ಅಂಬಾರಿ ಹೊತ್ತು ಅರಮನೆಯಿಂದ ಹೊರಟ ಅರ್ಜುನನಿಗೆ ಶಾಕ್ ಕಾದಿತ್ತು. ಗಜಗಾಂಭಿರ್ಯದಿಂದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿತು. ಆರ್ಎಂಪಿ ವೃತ್ತದ ಬಳಿ ಮರದ ಅಂಬಾರಿಗೆ ವಿದ್ಯುತ್ ತಂತಿ ತಡೆ ಹೊಡೆಯಿತು. ಇದ್ರಿಂದ ಬೆದರಿದ ಅರ್ಜುನ ದಿಢೀರನೇ ಹಿಂದೆ ಸರದ. ಹೀಗಾಗಿ, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯ್ತು. ರಸ್ತೆ ಮಧ್ಯೆ ಹಾದು ಹೋಗಿರುವ ವಿದ್ಯುತ್ ಹೈ ಟೆನ್ಷನ್ ಕೇಬಲ್ ಅನ್ನು ಗಮನಿಸದೇ ಮಾವುತ ಅರ್ಜುನನ್ನ ಮುನ್ನಡೆಸಿದ್ದೇ ಈ ಅವಾಂತರಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಕೂಡಲೇ ಎಚ್ಚೆತ್ತ ಅರಣ್ಯಾಧಿಕಾರಿ ಅರ್ಜುನ ನನ್ನು ರಸ್ತೆ ಬದಿಗೆ ಕರೆತರುವಂತೆ ಮಾವುತರಿಗೆ ಸೂಚನೆ ನೀಡಿದರು.