ಕೋರ್ಟಲ್ಲೇ ಶ್ರುತಿ - ಅರ್ಜುನ್ ಸರ್ಜಾ ಫೈಟ್!

By Web DeskFirst Published Oct 26, 2018, 8:25 AM IST
Highlights

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಮೀ ಟೂ ಆರೋಪದ ಬಗ್ಗೆ ನಡೆದ ಸಂಧಾನ ಸಭೆಯೂ ಕೂಡ ವಿಫಲವಾಗಿದೆ. ಇದೀಘ ಸರ್ಜಾ ಶ್ರುತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. 

ಬೆಂಗಳೂರು :  ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಮೀ ಟೂ’ ವಿವಾದ ಇದೀಗ ಕೋರ್ಟ್ ಮೆಟ್ಟಿಲೇರಿದೆ. ತಮ್ಮ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪಗಳಿಂದ ತಾವಷ್ಟೇ ಅಲ್ಲ, ತಮ್ಮ ಕುಟುಂಬ, 4 ರಾಜ್ಯದ ಅಭಿಮಾನಿಗಳು ಅವಮಾನ ಅನುಭವಿಸಿದ್ದು, ಇದರ ವಿರುದ್ಧ ಕೋರ್ಟಲ್ಲಿ ಹೋರಾಡುವುದಾಗಿ ನಟ ಅರ್ಜುನ್ ಸರ್ಜಾ ಘೋಷಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶ್ರುತಿ ಹರಿಹರನ್, ತಾವೂ ಕೋರ್ಟ್‌ನಲ್ಲಿ ಎದುರಿ ಸಲು ಸಿದ್ಧವಾಗಿರುವುದಾಗಿ ಹೇಳಿದ್ದಾರೆ. 

ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪಕ್ಕೆ ಸಂಬಂಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗುರುವಾರ ಕರೆದಿದ್ದ ಸಂಧಾನ ಸಭೆ ವಿಫಲವಾಗಿದೆ.

ಅಂಬರೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಿ ಸಂಧಾನಕ್ಕೆ ಯತ್ನಿಸಲಾಯಿತಾದರೂ ಇಬ್ಬರ ನಡುವೆ ಒಮ್ಮತ ಮೂಡಲಿಲ್ಲ. ರಾಜಿ ಸಾಧ್ಯವಿಲ್ಲ, ಕೋರ್ಟಲ್ಲಿ ದಾವೆ ಹೂಡಿದ್ದೇನೆ, ಅಲ್ಲಿಯೇ ನೋಡಿಕೊಳ್ಳುತ್ತೇನೆ ಎಂದು ಅರ್ಜುನ್ ಸರ್ಜಾ ತಿಳಿಸಿದರು. ಹಾಗಿದ್ದರೆ ತಾನೂ ಕೋರ್ಟಲ್ಲೇ ನೋಡಿಕೊಳ್ಳುತ್ತೇನೆ ಎಂದು ಶ್ರುತಿ ಹರಿಹರನ್ ಹೇಳಿದರು. 

ಈ ಮೂಲಕ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಆರೋಪ- ಪ್ರತ್ಯಾರೋಪಕ್ಕೆ ತಾರ್ಕಿಕ ಅಂತ್ಯ ನೀಡಲು ಸಾಧ್ಯವಾಗದೆ ಸಂಧಾನ ಸಮಿತಿ ಕೈಚೆಲ್ಲಿತು. ಸತತ ಮೂರು ತಾಸುಗಳ ಕಾಲ ನಡೆದ ಸಭೆಯಲ್ಲಿ ಇಬ್ಬರ ಜೊತೆಯೂ ಪ್ರತ್ಯೇಕವಾಗಿ ಮಾತುಕತೆ ನಡೆಸಲಾಯಿತು. ಚಿತ್ರೋದ್ಯಮದ ಗೌರವ, ಕಲಾವಿದರ ಭವಿಷ್ಯ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟು ವಿವಾದ ಶಾಂತಿಯುತವಾಗಿ ಬಗೆಹರಿಯಲು ಸಹಕರಿಸಿ ಎಂದು ಇಬ್ಬರಲ್ಲೂ ಅಂಬರೀಷ್ ನೇತೃತ್ವದ ಸಮಿತಿ ವಿನಂತಿಸಿಕೊಂಡಿತು. ಆದರೆ ಪ್ರತ್ಯೇಕವಾಗಿ ತಮಗಾದ ನೋವು ಹಂಚಿಕೊಂಡ ಇಬ್ಬರೂ ಸಂಧಾನ ಸಾಧ್ಯವೇ ಇಲ್ಲ. 

ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದರು. ಈಗಾಗಲೇ ಅರ್ಜುನ್ ಸರ್ಜಾ ಕೋರ್ಟಲ್ಲಿ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ. ಹಾಗಾಗಿ ಇಬ್ಬರೂ ಕೋರ್ಟಲ್ಲಿಯೇ ನ್ಯಾಯ ಪಡೆಯುತ್ತೇವೆ ಎಂದು ಪಟ್ಟು ಹಿಡಿದರು. ಹೀಗಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಜಟಾಪಟಿ ಮಹತ್ವದ ರಾಜಿ ಸಂಧಾನದ ಸಭೆ ಯಾವುದೇ ಫಲಿತಾಂಶ ಕಾಣದೆ ಮುಕ್ತಾಯವಾಯಿತು.

click me!