
ಇಸ್ಲಾಮಾಬಾದ್(ಜೂನ್ 14): ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧ ಎಷ್ಟು ಸೂಕ್ಷ್ಮ, ಸಂಕೀರ್ಣ, ಅದನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ನಿಮಗೆ ಗೊತ್ತಿರಬಹುದು. ನಾಯಕರಾದವರು ತುರ್ತು ಸಂದರ್ಭದಲ್ಲಿ ಬಹಳ ಚಾಕಚಕ್ಯತೆ ಪ್ರದರ್ಶಿಸಬೇಕಾಗುತ್ತದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಇಂಥದ್ದೊಂದು ಜಾಣತವನ್ನು ಸೌದಿ ಅರೇಬಿಯಾದಲ್ಲಿ ಪ್ರದರ್ಶಿಸಿದ್ದಾರೆ. ಕತಾರ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೌದಿಗೆ ಹೋಗಿದ್ದ ಪಾಕ್ ಪ್ರಧಾನಿ ಷರೀಫ್'ಗೆ ಅಲ್ಲಿಯ ರಾಜನಿಂದ ಅನಿರೀಕ್ಷಿತ ಪ್ರಶ್ನೆ ಎದುರಾಯಿತು. ಆದರೂ ಸಾವರಿಸಿಕೊಂಡು ಪಾಕ್ ಪ್ರಧಾನಿ ಬಹಳ ಸಮಯೋಚಿತ ಉತ್ತರ ನೀಡಿ ಹೊಸ ವಿವಾದದ ಸಾಧ್ಯತೆಯಿಂದ ಬಚಾವಾಗಿದ್ದಾರೆ.
ಸೌದಿ ರಾಜ ಕೇಳಿದ್ದೇನು?
"ನೀವು ನಮ್ಮೊಂದಿಗಿದ್ದೀರೋ ಅಥವಾ ಕತಾರ್ ದೇಶವನ್ನು ಬೆಂಬಲಿಸುತ್ತೀರೋ?" ಎಂಬುದು ಸೌದಿ ರಾಜ ಸಲ್ಮಾನ್ ಕೇಳಿದ ಪ್ರಶ್ನೆಯಾಗಿತ್ತು. ಕತಾರ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೌದಿ ಜೊತೆ ಮಾತುಕತೆ ನಡೆಸಿ ವಾತಾವರಣ ತಿಳಿಗೊಳಿಸುವ ಸಲುವಾಗಿ ನವಾಜ್ ಷರೀಫ್ ಅವರು ಸೌದಿಗೆ ತೆರಳಿದ್ದರು. ಜೆದ್ದಾ ನಗರದಲ್ಲಿ ಸೌದಿ ರಾಜ ಸಲ್ಮಾನ್ ಅವರೊಂದಿಗೆ ಈ ವಿಚಾರವಾಗಿ ಮಾತನ್ನಾಡಬೇಕಾದರೆ ಷರೀಫ್ ಅವರಿಗೆ ದಿಢೀರ್ ಈ ಪ್ರಶ್ನೆ ಎದುರಾಗಿದೆ.
"ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿದ ಸಂದರ್ಭದಲ್ಲಿ ಪಾಕಿಸ್ತಾನವು ಯಾರ ಪರವೂ ನಿಲ್ಲುವುದಿಲ್ಲ," ಎಂದು ನವಾಜ್ ಷರೀಫ್ ಉತ್ತರಿಸಿದರೆನ್ನಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಆರೋಪಿಸಿ ಕತಾರ್ ದೇಶವನ್ನು ಇತರ ಕೆಲ ಅರಬ್ ದೇಶಗಳು ಬಹಿಷ್ಕಾರ ಹಾಕಿವೆ. ಆ ದೇಶಗಳಲ್ಲಿ ಸೌದಿ ಅರೇಬಿಯಾ ಪ್ರಮುಖವಾದುದು. ಮೊದಲು ನಾಲ್ಕು ರಾಷ್ಟ್ರಗಳು ಕತಾರ್'ನ್ನು ಬಹಿಷ್ಕರಿಸಿದರೆ, ಈಗ ಆ ಪಟ್ಟಿಗೆ ಇನ್ನೂ 6 ದೇಶಗಳು ಸೇರಿವೆ. ಪ್ರಮುಖ ಮುಸ್ಲಿಮ್ ರಾಷ್ಟ್ರವಾದ ಪಾಕಿಸ್ತಾನ ಕೂಡ ತನ್ನ ನಿರ್ಧಾರಕ್ಕೆ ಬೆಂಬಲ ಕೊಡಬೇಕು ಎಂಬುದು ಸೌದಿ ರಾಜನ ಅಪೇಕ್ಷೆಯಾಗಿತ್ತು. ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವುದರಲ್ಲಿ ಮುಸ್ಲಿಮರ ಹಿತಾಸಕ್ತಿ ಅಡಗಿದೆ ಎಂದು ಸೌದಿ ರಾಜ ಪಾಕ್ ಪ್ರಧಾನಿ ತಿಳಿಹೇಳುವ ಪ್ರಯತ್ನವನ್ನೂ ಮಾಡಿದರು.
ಆದರೆ, ಪಾಕ್ ಪ್ರಧಾನಿ ಷರೀಫ್ ಜಾಣತನದಿಂದ ನುಣುಚಿಕೊಂಡರು. "ಮುಸ್ಲಿಮ್ ರಾಷ್ಟ್ರಗಳಲ್ಲಿ ಒಡಕು ಸೃಷ್ಟಿಸುವ ಯಾವ ನಿರ್ಧಾರವನ್ನೂ ಪಾಕಿಸ್ತಾನ ಕೈಗೊಳ್ಳುವುದಿಲ್ಲ," ಎಂದು ಷರೀಫ್ ಹೇಳಿದರೆನ್ನಲಾಗಿದೆ. ಸೌದಿ ರಾಜನಿಗೆ ನಿರಾಶೆಯಾಗಬಾರದೆಂದು ಪಾಕಿಸ್ತಾನವು ಕತಾರ್ ಜೊತೆ ತನಗಿರುವ ಪ್ರಭಾವ ಬಳಸಿ ವಾತಾವರಣ ತಿಳಿಗೊಳಿಸಲು ಯತ್ನಿಸುವುದಾಗಿ ಭರವಸೆ ನೀಡಿತೆನ್ನಲಾಗಿದೆ. ಅದರಂತೆ ಕತಾರ್ ಹಾಗೂ ಅದರ ಮಿತ್ರ ರಾಷ್ಟ್ರಗಳಾದ ಕುವೈತ್ ಮತ್ತು ಟರ್ಕಿ ದೇಶಗಳಿಗೆ ಪಾಕ್ ಪ್ರಧಾನಿ ಭೇಟಿ ಕೊಟ್ಟು ಮಾತುಕತೆ ನಡೆಸಲಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.