
ಬರೇಲಿ(ಆ.10): ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿರುವ ನಿದಾ ಖಾನ್, ಬಿಜೆಪಿಗೆ ಸೇರ್ಪಡೆಯಾಗುವ ಸಂಭವವಿದೆ ಎನ್ನಲಾಗಿದೆ. ಈ ಕುರಿತು ಖುದ್ದು ಸ್ಪಷ್ಟನೆ ನೀಡಿರುವ ನಿದಾ ಖಾನ್, ತಾವು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾಗಿ ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಹೋರಾಡುವುದಾಗಿ ನಿದಾ ಖಾನ್ ಹೇಳಿದ್ದಾರೆ. 24 ವರ್ಷದ ನಿದಾ ಖಾನ್ ತ್ರಿವಳಿ ತಲಾಖ್ ನ ಸಂತ್ರಸ್ತ ಮಹಿಳೆಯರಿಗಾಗಿ ಎನ್ ಜಿಒ ನಡೆಸುತ್ತಿದ್ದಾರೆ. ತ್ರಿವಳಿ ತಲಾಖ್ ವಿರುದ್ಧ ಧ್ವನಿ ಎತ್ತಿದ್ದರಿಂದ ದರ್ಗಾ ಅಲಾ ಹಜರತ್ ನಿದಾ ವಿರುದ್ಧ ಫತ್ವಾ ಹೊರಡಿಸಿದ್ದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಬಿಜೆಪಿಗೆ ಸೇರ್ಪಡೆಯಾಗಿ ತ್ರಿವಳಿ ತಲಾಖ್, ಹಲಾಲ್ ಪದ್ಧತಿಗಳ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸುತ್ತೇನೆ, ಇನ್ನು ಪಕ್ಷ ಸೇರ್ಪಡೆ ಕುರಿತಂತೆ ಸ್ಥಳ, ಸಮಯ, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ನಿದಾ ಖಾನ್ ತಿಳಿಸಿದ್ದಾರೆ.
ನಿದಾ ಖಾನ್ ಸಹ ತ್ರಿವಳಿ ತಲಾಖ್ ಸಂತ್ರಸ್ತೆಯಾಗಿದ್ದು ಪತಿ ಶಿರೇನ್ ಆಕೆಗೆ ತಲಾಖ್ ನೀಡಿದ್ದರು. ಇದರ ವಿರುದ್ಧ ಹೋರಾಟ ನಡೆಸಿದ್ದ ನಿದಾ ಖಾನ್ ಗೆ ಭಾರೀ ಬೆಂಬಲ ಸಿಕ್ಕಿತ್ತು. ಅಲ್ಲದೆ ಬರೇಲಿಯ ಕೋರ್ಟ್ ನಿದಾ ಖಾನ್ ಗೆ ನೀಡಲಾಗಿರುವ ತ್ರಿವಳಿ ತಲಾಖ್ ಅಸಿಂಧುವೆಂದು ಘೋಷಿಸಿತ್ತು. ಉತ್ತರಾಖಂಡ್ ದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ರೇಖಾ ಆರ್ಯಾ ಬಿಜೆಪಿ ಸೇರುವಂತೆ ನಿದಾ ಖಾನ್ ಅವರಿಗೆ ಸಲಹೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.