
ಬೆಂಗಳೂರು(ಆ.22): ಬಿಎಸ್ವೈ ವಿರುದ್ಧದ ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಶನ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಬಿಎಸ್ವೈ, ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಸೇರಿ ಐವರ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿರುವ ಎಸಿಬಿ ತನಿಖೆ ಮುಂದುವರೆಸಿದ್ದು ಸ್ಫೋಟಕ ಮಾಹಿತಿ ಹೊರತೆಗೆಯುತ್ತಿದ್ದಾರೆ. ಇದೀಗ ಈ ಕೇಸಿನ ಪ್ರಧಾನ ಸೂತ್ರದಾರರೊಬ್ಬರ ಅಸ್ತಿತ್ವವನ್ನೇ ಬಯಲಿಗೆ ತಂದಿದ್ದಾರೆ.
ಶಿವರಾಮ್ ಕಾರಂತ್ ಬಡಾವಣೆಯಲ್ಲಿನ ಮೂರು ಎಕರೆ 6 ಗುಂಟೆ ಜಮೀನನ್ನ ಡಿ ನೋಟಿಫಿಕೇಶನ್ ಮಾಡುವ ಹಂತದಲ್ಲಿ ಜಮೀನಿನ ಪರವಾಗಿ ಆಶಾ ಪರದೇಶಿ ಎಂಬುವವರು ತಕರಾರು ಅರ್ಜಿ ಸಲ್ಲಿಸಿದ್ರು. ಆಶಾ ಪರದೇಶಿ ಸಲ್ಲಿಸಿದ್ದ ಅರ್ಜಿಗೆ ಸ್ಪಷ್ಟೀಕರಣ ಕೊಟ್ಟ, ಬಿಡಿಎ ಅಧಿಕಾರಿ ಬಸವರಾಜೇಂದ್ರ ಸಂಬಂಧಪಟ್ಟ ಜಮೀನನ್ನ ಡಿ ನೋಟಿಫಿಕೇಶನ್ ಮಾಡಲಾಗಿದೆ ಎಂದು ನಿರ್ದೆಶಿಸುವ ಹಿಂಬರಹ ಪತ್ರವನ್ನ ಆಶಾ ಪರದೇಶಿಗೆ ನೀಡಿದ್ದಾರೆ. ಎಸಿಬಿ ತನಿಖೆ ವೇಳೆ, ಬಸವರಾಜೇಂದ್ರ ಅವರು ಡಿ ನೋಟಿಫಿಕೇಶನ್ ಮಾಡಿರುವ ಬಗ್ಗೆ ಸಾಕ್ಷಾಧಾರಗಳನ್ನ ಎಸಿಬಿ ಸಂಗ್ರಹಿಸಿದೆ. ಆದ್ರೆ ದೂರು ಅರ್ಜಿ ಸಲ್ಲಿಸಿದ್ದ ಆಶಾ ಪರದೇಶಿ ಅವರ ಎನ್ಕೈರಿಗೆ ಮುಂದಾದಾಗ, ಆಶಾ ಪರದೇಶಿ ಎಂಬ ಮಹಿಳೆಯೇ ಇಲ್ಲ ಎಂಬುದು ಮೇಲ್ನೋಟಕ್ಕೆ ಅಧಿಕಾರಿಗಳಿಗೆ ಗೊತ್ತಾಗಿದೆ.
ಯಡಿಯೂರಪ್ಪಗೆ ತಿರುಗೇಟು ನೀಡಲು ಸರ್ಕಾರ ಸಜ್ಜು
ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ನ ಹಿಂದೆ ರಾಜಕೀಯ ಅಡಗಿದೆ. ಎಸಿಬಿಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಹೈಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಾಡ್ಲಿಕ್ಕೆ ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಸಿಎಂ ಆಪ್ತ ಪ್ರೊ.ರವಿವರ್ಮಕುಮಾರ್ ಮತ್ತು ಸೀನಿಯರ್ ಕೌನ್ಸಿಲ್ಗಳನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸ್ಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಸಿಬಿ ಎಡಿಜಿಪಿ ಎಂ.ಎನ್.ರೆಡ್ಡಿ ಪತ್ರ ಬರೆದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿ.ಎಸ್. ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಪ್ರಕರಣ ರದ್ದು ಕೋರಿ, ಹೈಕೋರ್ಟ್ ಮೊರೆ ಹೋಗಿರುವ ಬಿಎಸ್ವೈ ಇಂದು ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ್ರೂ ಅಚ್ಚರಿ ಪಡಬೇಕಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.