
ಬೆಂಗಳೂರು (ಆ.14): ಮೂರು ದಿನಗಳ ಕರ್ನಾಟಕ ಭೇಟಿ ಮುಗಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇದೀಗ ದೆಹಲಿಗೆ ವಾಪಸಾಗಿದ್ದಾರೆ. ನಿರಂತರ ಸಭೆಗಳನ್ನು ನಡೆಸಿ ರಾಜ್ಯ ಬಿಜೆಪಿ ಮುಖಂಡರಿಗೆ ಸಂಘಟನೆಯ ಪಾಠ ಹೇಳಿದ ಅಮಿತ್ ಶಾ, ಹಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅವುಗಳನ್ನು ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಮಿತ್ ಶಾ ಸೂತ್ರಗಳು ಇಂತಿವೆ.
1. ನಾನು ಮೂರು ದಿನಗಳ ಕಾಲ ಏನೆಲ್ಲ ಸಲಹೆ-ಸೂಚನೆ ನೀಡಿದ್ದೇನೆ ಎಂಬುದನ್ನು ಆಧರಿಸಿ ಮುಂಬರುವ ಚುನಾವಣೆಗೆ ಪಕ್ಷವನ್ನು ಬಲಗೊಳಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ನೀಲನಕ್ಷೆ ಸಿದ್ಧಪಡಿಸಿಕೊಂಡು ಹಿರಿಯ ನಾಯಕರು ದೆಹಲಿಗೆ ಬನ್ನಿ. ಅಲ್ಲಿ ಎಲ್ಲವನ್ನೂ ಅಂತಿಮಗೊಳಿಸೋಣ.
2. ಇಂದಿನಿಂದ ಮುಂಬರುವ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಪಕ್ಷದ ಯಾವೊಬ್ಬ ಮುಖಂಡರೂ ವಿರಮಿಸುವಂತಿಲ್ಲ. ಯುದ್ಧಕ್ಕಾಗಿ ಸೈನಿಕರು ಸಿದ್ಧರಾಗುವಂತೆ ನೀವು ಚುನಾವಣೆಗೆ ತಯಾರಾಗಬೇಕು. ನೀವು ಏನು ಮಾಡುತ್ತಿದ್ದೀರಿ ಎಂಬುದರ ಮೇಲೆ ನಿಗಾ ವಹಿಸಿರುತ್ತೇನೆ.
3. ಪಕ್ಷದ ಎಲ್ಲ ನಾಯಕರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಯಾವುದೇ ಕಾರಣಕ್ಕೂ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಾರದು. ನಿಮ್ಮಲ್ಲಿರುವ ಎಲ್ಲ ಭಿನ್ನಾಭಿಪ್ರಾಯ, ಬಿಕ್ಕಟ್ಟುಗಳನ್ನು ಕೈಬಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವುದರತ್ತ ಮಾತ್ರ ಗಮನಹರಿಸಬೇಕು. ಏನೇ ಇದ್ದರೂ ನಾಲ್ಕು ಗೋಡೆಗಳ ನಡುವೆ ಮಾತ್ರ ಇರಲಿ. ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ.
4. ಕಾಂಗ್ರೆಸ್ ಮುಕ್ತ ಕರ್ನಾಟಕ ಘೋಷಣೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖಂಡರು ಸತತ ಪ್ರಯತ್ನದಲ್ಲಿರಬೇಕು. ದಕ್ಷಿಣ ಭಾರತದ ಪ್ರವೇಶ ದ್ವಾರವಾಗಿರುವ ಕರ್ನಾಟಕದಲ್ಲಿ ಈ ಬಾರಿ ಶತಾಯಗತಾಯ ಬಿಜೆಪಿ ಅಧಿಕಾರದ ಗದ್ದುಗೆ ಏರಲೇಬೇಕು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಿರಂತರವಾಗಿರಬೇಕು.
5. ಪಕ್ಷದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಪರಮಾಧಿಕಾರ ಕೋರ್ ಕಮಿಟಿಗೆ ಇದೆಯೇ ಹೊರತು ಒಬ್ಬ ವ್ಯಕ್ತಿಗೆ ಇಲ್ಲ. ಹೀಗಾಗಿ, ಪಕ್ಷಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿದ ನಂತರವೇ ಒಮ್ಮತದಿಂದ ಕೈಗೊಳ್ಳಬೇಕು. ನಿಯಮಿತವಾಗಿ ಕೋರ್ ಕಮಿಟಿ ಸಭೆ ನಡೆಸಿ.
6. ಪಕ್ಷದ ವಿವಿಧ ಮೋರ್ಚಾಗಳು ಮತ್ತು ವಿವಿಧ ಹಂತದ ಪದಾಧಿಕಾರಿಗಳು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಪಕ್ಷದ ಸಂಘಟನೆ ಬಲಪಡಿಸುವುದರ ಜೊತೆಗೆ ತಳಮಟ್ಟದಲ್ಲಿ ಬೂತ್ ಮಟ್ಟದ ಸಮಿತಿಗಳನ್ನು ಬಲಪಡಿಸುವ ಬಗ್ಗೆ ಆದ್ಯತೆ ನೀಡಬೇಕು.
7. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅವುಗಳನ್ನು ಜನರಿಗೆ ಸಮರ್ಪಕವಾಗಿ ತಿಳಿಸುವ ಕೆಲಸವನ್ನು ರಾಜ್ಯದ ಮುಖಂಡರು ಮಾಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆಯಾದರೂ ಜನರ ಬಳಿಗೆ ಹೋಗಿ ನಾವು ಮಾಡಿರುವುದನ್ನು ಹೆಮ್ಮೆಯಿಂದ ತಿಳಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.