ಕಾಂಗ್ರೆಸ್ ಮುಕ್ತ ಭಾರತ ಎಂದರೆ ಅದು ಕಾಂಗ್ರೆಸ್ಸನ್ನು ನಿರ್ಮೂಲನೆ ಮಾಡುವುದು ಎಂದಲ್ಲ. ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಿಂದ ದೇಶವನ್ನು ಮುಕ್ತಗೊಳಿಸುವುದು ಎಂದು ಹೇಳುವ ಮೂಲಕ ತಮ್ಮ ಹಿಂದಿನ ನಿಲುವನ್ನು ಕೊಂಚ ಬದಲಿಸಿಕೊಂಡಿದ್ದಾರೆ.
ರಾಯ್ಪುರ: ಕಾಂಗ್ರೆಸ್ ಮುಕ್ತ ಭಾರತ ಎಂದರೆ ಅದು ಕಾಂಗ್ರೆಸ್ಸನ್ನು ನಿರ್ಮೂಲನೆ ಮಾಡುವುದು ಎಂದಲ್ಲ. ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಿಂದ ದೇಶವನ್ನು ಮುಕ್ತಗೊಳಿಸುವುದು ಎಂದು ಹೇಳುವ ಮೂಲಕ ತಮ್ಮ ಹಿಂದಿನ ನಿಲುವನ್ನು ಕೊಂಚ ಬದಲಿಸಿಕೊಂಡಿದ್ದಾರೆ. ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷವಿಲ್ಲದೇ ಪ್ರಜಾಸತ್ತೆ ಇಲ್ಲ ಎಂದೂ ಹೇಳಿದರು.
ಕಾಂಗ್ರೆಸ್ ಮುಕ್ತ ಭಾರತ ಎಂದರೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯ ನಿರ್ಮೂಲನೆ. ಆದರೆ ಇಂದು ಕಾಂಗ್ರೆಸ್ ಪಕ್ಷ ಕುಗ್ಗುತ್ತಿದೆ ಎಂದರೆ ಅದು ಬೇರೆ ವಿಷಯ. ಕಾಂಗ್ರೆಸ್ಸನ್ನು ಜೀವಂತವಾಗಿ ಇಡಬೇಕಾಗಿದ್ದು ನಾನಲ್ಲ. ಅದು ರಾಹುಲ್ ಗಾಂಧಿ ಅವರ ಜವಾಬ್ದಾರಿ ಎಂದೂ ಶಾ ಅಭಿಪ್ರಾಯಪಟ್ಟರು.
ಇನ್ನು ರಾಹುಲ್ ಗಾಂಧಿ ಅವರ ಮೇಲೆ ನೀವು ವೈಯಕ್ತಿಕ ಟೀಕೆ ಮಾಡುತ್ತೀರಲ್ಲ ಎಂದು ಸುದ್ದಿಗಾರರು ಪ್ರಶ್ನಸಿದಾಗ, ಅದು ವೈಯಕ್ತಿಕ ದಾಳಿ ಎಂದು ನೀವು ಪರಿಗಣಿಸಬೇಡಿ. ರಾಹುಲ್ ಕೆಲವು ಪ್ರಶ್ನೆಗಳನ್ನು ಕೇಳಿರುತ್ತಾರೆ. ಅವುಗಳಿಗೆ ನಾನು ಉತ್ತರಿಸುತ್ತೇನಷ್ಟೇ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ತಮ್ಮ ಪಕ್ಷದ ಪರಂಪರೆ ಬಗ್ಗೆ ಹೇಳುತ್ತಾರೆ. ಬಿಜೆಪಿ ಅಧ್ಯಕ್ಷನಾಗಿ ನಾನು ನಮ್ಮ ಪಕ್ಷದ ಪರಂಪರೆ ಬಗ್ಗೆ ಹೇಳುತ್ತೇನೆ. ಪ್ರಜಾಸತ್ತೆಯಲ್ಲಿ ಇದು ನಡೆಯಬೇಕು. ಇದಕ್ಕೆ ಆಕ್ಷೇಪಿಸಬಾರದು ಎಂದರು.
ಮಧ್ಯಮ ವರ್ಗ ಬಿಜೆಪಿಯಿಂದ ದೂರ ಸರಿಯುತ್ತಿದೆ ಎಂಬ ಆರೋಪ ತಳ್ಳಿಹಾಕಿದ ಶಾ, ಮಧ್ಯಮ ವರ್ಗಕ್ಕೆಂದೇ ಅನೇಕ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಮಧ್ಯಮ ವರ್ಗದ ಬೆಂಬಲ ಇಲ್ಲದೇ ಹೋದರೆ 14 ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದರು.