ಕೇಂದ್ರದ ಹೊಡೆತಕ್ಕೆ ಪ್ರತ್ಯೇಕತಾವಾದಿಗಳು ತತ್ತರ

By Web DeskFirst Published Jul 6, 2019, 8:28 AM IST
Highlights

ಕೇಂದ್ರದ ಹೊಡೆತಕ್ಕೆ ಪ್ರತ್ಯೇಕತಾವಾದಿಗಳು ತತ್ತರ| ಕಾಶ್ಮೀರಿ ಪಂಡಿತರನ್ನು ಮರಳಿ ಕಾಶ್ಮೀರಕ್ಕೆ ಕರೆತರಲು ಯೋಜನೆ| ಪ್ರತ್ಯೇಕತಾವಾದಿಗಳಿಂದ ಸಮಿತಿ ರಚನೆ, ಪಂಡಿತರ ಜೊತೆ ಚರ್ಚೆ

ಶ್ರೀನಗರ[ಜು.06]: ಭದ್ರತೆ ವಾಪಸ್‌, ಉಗ್ರ ಕೃತ್ಯಕ್ಕೆ ಹಣ ಪೂರೈಕೆ ಬಂದ್‌, ಹಲವು ಪ್ರತ್ಯೇಕತಾವಾದಿ ನಾಯಕರನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮಗಳು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಜಂಘಾಬಲವನ್ನೇ ಉಡುಗಿಸಿರುವುದು ಮೊದಲ ಬಾರಿಗೆ ಗೋಚರವಾಗಿದೆ.

ಸತತ ಉಗ್ರ ದಾಳಿಯ ಮೂಲಕ ರಾಜ್ಯದಲ್ಲಿನ ಕಾಶ್ಮೀರಿ ಪಂಡಿತರು, ತಮ್ಮ ನೆಲೆ ತೊರೆಯುವಂತೆ ಮಾಡಿದ್ದ ಪ್ರತ್ಯೇಕತಾವಾದಿಗಳು, ಇದೀಗ ಅದೇ ಕಾಶ್ಮೀರಿ ಪಂಡಿತರನ್ನು ರಾಜ್ಯಕ್ಕೆ ಮರಳಿ ಕರೆತರಲು ಯೋಜನೆ ರೂಪಿಸಿದ್ದಾರೆ. ಅದಕ್ಕೆಂದೇ ಅವರೀಗ ಸಮಿತಿಯೊಂದನ್ನು ರಚಿಸಿದ್ದಾರೆ. ಗುರುವಾರ ಸಮಿತಿಯ ಸದಸ್ಯರು ಕಾಶ್ಮೀರಿ ಪಂಡಿತರ ಮುಖಂಡ ಸತೀಶ್‌ ಮಹಲ್ದರ್‌ ತಂಡದ ಜೊತೆ ಸಭೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತ್ಯೇಕತಾವಾದಿ ಮುಖಂಡ ಮಿರ್ವಾಯಿಜ್‌ ಉಮರ್‌ ಫಾರೂಕ್‌, ಇದಕ್ಕೂ ಮುನ್ನ ಕೂಡ ನಾವು ಬೇರೆ ಸ್ಥಳದಲ್ಲಿ ಪಂಡಿತರ ಜೊತೆ ಸಭೆ ನಡೆಸಿದ್ದೇವೆ. ಹೀಗಾಗಿ ಇದು ಎರಡನೇ ಸಭೆ ಎಂದು ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರನ್ನು ಪುನಃ ಕರೆಯಿಸಿಕೊಳ್ಳುವುದು ಮತ್ತು ಎರಡೂ ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸ ಬೆಳೆಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ ಎಂದು ಪ್ರತ್ಯೇಕತಾವಾದಿಗಳೇ ತಿಳಿಸಿದ್ದಾರೆ. ಪಂಡಿತರನ್ನು ಪುನಃ ಕಾಶ್ಮೀರಕ್ಕೆ ಕರೆಯಿಸಿಕೊಂಡರೆ, ಕೇಂದ್ರದ ಕೆಂಗಣ್ಣಿನಿಂದ ಪಾರಾಗಬಹುದು ಎಂಬುದು ಪ್ರತ್ಯೇಕತಾವಾದಿಗಳ ಯೋಜನೆಯಾಗಿದೆ.

click me!