
ಬೆಂಗಳೂರು(ಜ.11): ಇದು ಲೈವ್ ಬ್ಯಾಂಡ್'ವೊಂದರಲ್ಲಿ ಸಹಾಯಕನಾಗಿದ್ದವನು ತನ್ನ ವಂಚನೆಯಿಂದಲೇ ಕೋಟ್ಯಾಧೀಶನಾದ ಕಥೆ. ಆತ ಬೆಂಗಳೂರಲ್ಲೊಂದು ಮನೆ ಮಾಡಿಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿದ್ದ ಸಾವಿರಾರು ಜನರಿಂದ ಲಕ್ಷಾಂತರ ಹಣ ಸಂಗ್ರಹಿಸಿ ಈಗ ಪರಾರಿಯಾಗಿದ್ದಾನೆ. 200 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿರುವ ಈತನ ವಿರುದ್ಧ ನೂರಕ್ಕೂ ಹೆಚ್ಚು ಎಫ್ಐಆರ್'ಗಳು ದಾಖಲಾಗಿವೆ. ಇದು ಹೈಟೆಕ್ ವಂಚಕನ ಹೈ ಫ್ರೊಫೈಲ್ ಸ್ಟೋರಿ ಇಲ್ಲಿದೆ ನೋಡಿ.
ಬೆಂಗಳೂರಲ್ಲೊಂದು ಮನೆ ಕಟ್ಟುಕೊಳ್ಳುವ ಆಸೆಯಿಟ್ಟುಕೊಂಡ ಸಾವಿರಾರು ಜನರನ್ನು ವಂಚಿಸಿ 200 ಕೋಟಿಗೂ ಅಧಿಕ ಹಣ ಕೊಳ್ಳೆ ಹೊಡೆದು ಪರಾರಿಯಾದವನ ಹೆಸರು ಸಚಿನ್ ನಾಯ್ಕ್. ಈತನ ವಿರುದ್ಧ ನೂರಕ್ಕೂ ಹೆಚ್ಚು ಎಫ್'ಐಆರ್ ದಾಖಲಾಗಿವೆ. ಆದರೂ ಈತ ಫ್ರೀ ಬರ್ಡ್.
ಅರ್ಧ ಬೆಲೆಗೆ ಫ್ಲಾಟ್ ಕೊಡ್ತೀನಿ ಅಂದವನಿಂದ ನಾಮ!: ಕೋಟಿ ಕೋಟಿ ಕೊಟ್ಟವರೀಗ ಬೀದಿಯಲ್ಲಿ!
ಡ್ರೀಮ್ಸ್ ಜಿಕೆ, ಟಿಜಿಎಸ್ ಕನ್ಸ್ಟ್ರಕ್ಷನ್ಸ್, ಸೆಂಡ್ ಮೈ ಗಿಫ್ಟ್, ಪೂಜಾ ಡಾಟ್ ಕಾಂ ಹೀಗೆ ಚೆಂದ ಚೆಂದದ ಹೆಸರಿಟ್ಟುಕೊಂಡು ಜನರ ಕಣ್ಣಿಗೆ ಮಣ್ಣೆರಚಿದವನ ಹೆಸರು ಸಚಿನ್ ನಾಯ್ಕ್. ಈತ ಇಷ್ಟೇ ಅಲ್ಲ ಚೆಂದ ಚೆಂದದ ಹುಡುಗಿಯರನ್ನು ಕೆಲಸಕ್ಕಿಟ್ಟುಕೊಂಡು ತನ್ನ ವಂಚನೆಗೆ ಗ್ಲಾಮರ್ ಟಚ್ ಕೊಟ್ಟಿದ್ದ. ಫ್ಲಾಟ್'ಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ನಂಬಿಸಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದ್ದಾನೆ. ಫ್ಲಾಟ್ ನಿರ್ಮಾಣ ಮಾಡುವ ಮುನ್ನವೇ ಮಾರುಕಟ್ಟೆಯ ಅರ್ಧ ಬೆಲೆಗೆ ಫ್ಲಾಟ್'ಗಳನ್ನು ಕೊಡುತ್ತೇವೆ ಅಂತ ನಂಬಿಸಿ ಕೊಟ್ಯಾಂತರ ಹಣ ಸಂಗ್ರಹಿಸಿ ಒಬ್ಬನಿಗೂ ಒಂದು ಫ್ಲಾಟ್ ಕೊಟ್ಟಿಲ್ಲ. ಎಸಿ ಕಾರ್'ನಲ್ಲಿ ಅಪಾರ್ಟ್ಮೆಂಟ್ ನಿರ್ಮಾಣದ ಸ್ಥಳಕ್ಕೆ ಜನರನ್ನು ಕರೆದೊಯ್ದು ಲಕ್ಷಾಂತರ ರೂಪಾಯಿ ಪೀಕಿದ್ದಾನೆ.
ಪೊಲೀಸ್ ಇಲಾಖೆಗೆ ಸಂದಾಯವಾಯ್ತಾ ಕೋಟಿ ಕೋಟಿ?
ಬೆಂಗಳೂರಿನಾದ್ಯಂತ ಈ ಸಚಿನ್ ನಾಯ್ಕ್ ಮೇಲೆ ನೂರಕ್ಕೂ ಹೆಚ್ಚು ಎಫ್ಐಆರ್ಗಳು ದಾಖಲಾದ್ರೂ ಈತನನ್ನು ಮುಟ್ಟುವ ಮನಸ್ಸು ಮಾಡಲಿಲ್ಲ ನಮ್ಮ ಪೊಲೀಸರು. ಇನ್ಸ್ಪೆಕ್ಟರ್ ಒಬ್ಬರು ಬಂಧನಕ್ಕೆ ಮುಂದಾದಾಗ ಪೊಲೀಸ್ ಇಲಾಖೆಯ ಹಿರಿತಲೆಯೇ ಬೇಡ ಅಂತ ಹುಕುಂ ಹೊರಡಿಸಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಧಿಕಾರಿಯ ಕೃಪಾಕಟಾಕ್ಷ , ವಂಚಕ ಸಚಿನ್ ನಾಯ್ಕ್ ಮೇಲಿತ್ತು. ಅದೇ ಕಾರಣಕ್ಕೆ ಸಚಿನ್ ನಾಯ್ಕ್ನನ್ನು ಬಂಧಿಸುವ ಸಾಹಸಕ್ಕೆ ಕಿರಿಯ ಅಧಿಕಾರಿಗಳು ಮುಂದಾಗಲಿಲ್ಲ. ನ್ಯಾಯಾಲಯದ ವಾರಂಟ್ ಮೇಲೆ ಒಂದು ಬಾರಿ ಬಂಧನಕ್ಕೊಳಗಾಗಿದ್ದ ಸಚಿನ್ ನಾಯ್ಕ್ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಫ್ಲಾಟ್'ಗಳನ್ನು ಕೊಡುವುದಾಗಿ ಜನರನ್ನು ನಂಬಿಸಿದ್ದ ಈ ಸಚಿನ್ ನಾಯ್ಕ್, ದಾಖಲೆಗಳಲ್ಲೆಲ್ಲೂ ತನ್ನ ಹೆಸರಿಲ್ಲದಂತೆ ನೋಡಿಕೊಂಡಿದ್ದಾನೆ. ತನ್ನ ಪತ್ನಿಯ ಹೆಸರನ್ನು ಬದಲಾಯಿಸಿ ಕಾನೂನು ಕುಣಿಕೆಗೆ ಸಿಗದಂತೆ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾನೆ. ಆರಂಭದಲ್ಲಿ ಈತನ ಉಪಚಾರ ಕಂಡು ಹಿ ಈಸ್ ಸ್ಮಾರ್ಟ್ ಅಂದುಕೊಂಡಿದ್ದ ಜನ ಇದೀಗ ಹೀ ಈಸ್ ಮೋರ್ ಡೇಂಜರಸ್ ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅಪಾರ್ಟ್ಮೆಂಟ್ಗಳನ್ನು ಕಟ್ಟಲು ಮುಂದಾಗಿದ್ದ ಜಾಗಗಳನ್ನೂ ಮಾರಾಟ ಮಾಡಿ ಈಗ ನಾಪತ್ತೆಯಾಗಿದ್ದಾನೆ. ಸದ್ಯ ಸಚಿನ್ ನಾಯಕ್, ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾನೆ ಅನ್ನೋ ಮಾಹಿತಿಯನ್ನ ಪೊಲೀಸರೇ ಹೇಳುತ್ತಿದ್ದರೂ, ಆತನ ವಿರುದ್ದದ ಕ್ರಮಕ್ಕೆ ಮುಂದಾಗದಿರುವುದು ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿದೆ...!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.