
ನವದೆಹಲಿ(ಜ.13): ದೇಶಾದ್ಯಂತ ನಿರುದ್ಯೋಗ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರುದ್ಯೋಗ ಭತ್ಯೆ ನೀಡಲು ಚಿಂತನೆ ನಡೆಸಿದೆಯಂತೆ. ಈ ಯೋಜನೆಗಾಗಿ 12 ಸಾವಿರ ಕೋಟಿ ಹಣವನ್ನು ತೆಗೆದಿಟ್ಟು, ಆಯ್ದ, ಅತ್ಯಂತ ಬಡ ನಿರುದ್ಯೋಗಿಗಳಿಗೆ ವಾರ್ಷಿಕ 5 ಸಾವಿರ ರೂ. ಭತ್ಯೆ ನೀಡಲು ಕೇಂದ್ರ ಚಿಂತನೆ ನಡೆಸಿದೆ.
ಆದರೆ, ಈ ಯೋಜನೆಗೆ ಹಣ ಹೊಂದಿಸುವುದು ಹೇಗೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ. ಈಗಾಗಲೇ ಇರುವ ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಈ ಯೋಜನೆಯನ್ನೂ ಜಾರಿಗೆ ತಂದರೆ, ಪರಿಸ್ಥಿತಿ ಬಿಗಡಾಯಿಸಬಹುದು ಎಂಬ ಆತಂಕ ಸರ್ಕಾರಕ್ಕೆ ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ನಿರುದ್ಯೋಗಿಗಳನ್ನು ಗುರುತಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ನೀತಿ ಆಯೋಗಕ್ಕೆ ಸೂಚನೆ ನೀಡಲಾಗಿದೆಯಂತೆ. ಆದರೆ, ದೇಶದಲ್ಲಿ 48 ಕೋಟಿಗೂ ಹೆಚ್ಚು ಜನ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಇದುವರೆಗೆ ಸರ್ಕಾರದ ಬಳಿ ಯಾವುದೇ ದಾಖಲಾತಿಗಳಿಲ್ಲ. ಈ ಹಿಂದಿನ ಸರ್ಕಾರಗಳೂ ಈ ಕುರಿತು ದಾಖಲೆಗಳನ್ನು ಇಟ್ಟಿಲ್ಲ. ಹೀಗಾಗಿ ಹೊಸದಾಗಿ ಈ ಯೋಜನೆ ಜಾರಿಗೆ ತಂದರೆ, ನಿರುದ್ಯೋಗಿಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಿ ಕಾಡಲಿದೆ.
ಈಗಾಗಲೇ ಪಂಜಾಬ್, ಛತ್ತೀಸ್ಘಡ, ಹರಿಯಾಣ, ಮಧ್ಯಪ್ರದೇಶ, ಕೇರಳಗಳಲ್ಲಿ ನಿರುದ್ಯೋಗ ಭತ್ಯೆ ಯೋಜನೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಇನ್ನೂ ಯೋಜನೆ ಜಾರಿಗೆ ತಂದಿಲ್ಲ. ಸದ್ಯಕ್ಕಿದು ಚಿಂತನೆ ಮಾತ್ರ! ಏಕೆಂದರೆ, ಈ ಯೋಜನೆ ಜಾರಿಗೆ ತಂದರೆ, ಪೆಟ್ರೋಲಿಯಂ, ಗ್ಯಾಸ್, ಆಹಾರಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಕಡಿತ ಮಾಡಬೇಕಾಗತ್ತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.