
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ದೇಶದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತರ್ ನಗರ ಮತ್ತು ಅಂತರ್ ರಾಜ್ಯಗಳಿಗೆ ಆರಂಭಿಸಿರುವ ‘ಫ್ಲೈ ಬಸ್’ ಸೇವೆ ಯಶಸ್ವಿ ಐದು ವರ್ಷ ಪೂರೈಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು 2013ರಲ್ಲಿ ಕೆಐಎಎಲ್-ಮೈಸೂರು ನಡುವೆ ಒಂದು ಫ್ಲೈ ಬಸ್ ಕಾರ್ಯಾಚರಣೆ ಆರಂಭಿಸಲಾಯಿತು. ಆರಂಭದಲ್ಲಿ ನಷ್ಟವಾದರೂ ಕಾಲಕ್ರಮೇಣ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂತರ್ ನಗರ ಮತ್ತು ಅಂತರ್ ರಾಜ್ಯಗಳಿಗೆ ಬೇಡಿಕೆಯೂ ಬಂದಿತು. ಪ್ರಸ್ತುತ ಕೆಐಎಎಲ್-ಮೈಸೂರು ಮಾರ್ಗದಲ್ಲಿ ಆರು, ಕುಂದಾಪುರ, ಸೇಲಂ, ತಿರುಪತಿಗೆ ತಲಾ ಎರಡು, ಮಡಿಕೇರಿ ಮತ್ತು ಕೊಯಮತ್ತೂರಿಗೆ ತಲಾ ಒಂದು ಸೇರಿದಂತೆ 14 ಫ್ಲೈ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಅಂತೆಯೆ ಕೇರಳದ ಕ್ಯಾಲಿಕಟ್ ಸೇರಿದಂತೆ ನೆರೆ ರಾಜ್ಯಗಳ ವಿವಿಧ ನಗರಗಳ ಪ್ರಯಾಣಿಕರಿಂದ ಸೇವೆಗೆ ಬೇಡಿಕೆ ಬಂದಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಆರಂಭದಲ್ಲಿ ವೆಚ್ಚ ಹೆಚ್ಚಾಗಿ ಆದಾಯ ನಷ್ಟವಾದರೂ ಧೈರ್ಯ ಮಾಡಿ ಸೇವೆ ಮುಂದುವರಿಸಲಾಯಿತು. ಇದರ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಆದಾಯ ಏರಿಕೆಯಾಯಿತು. ಟ್ಯಾಕ್ಸಿ ಪ್ರಯಾಣ ದರಕ್ಕಿಂತ ಫ್ಲೈ ಬಸ್ ಟಿಕೆಟ್ ದರ ಕಡಿಮೆ ಇರುವುದರಿಂದ ಪ್ರಯಾಣಿಕರು ಫ್ಲೈ ಬಸ್ಗಳತ್ತ ಹೆಚ್ಚು ಆಕರ್ಷಿತರಾದರು.
ಅಂತರ್ ನಗರಕ್ಕೆ ಸಿಮೀತವಾಗಿದ್ದ ಫ್ಲೈ ಬಸ್ ಸೇವೆ ಇದೀಗ ಅಂತರ್ ರಾಜ್ಯಗಳವರೆಗೂ ವಿಸ್ತರಿಸುವ ಮಟ್ಟಕ್ಕೆ ಯಶಸ್ವಿಯಾಗಿದೆ. ನೆರೆ ರಾಜ್ಯಗಳ ಹಲವು ನಗರಗಳಿಗೆ ಸೇವೆ ಆರಂಭಿಸುವಂತೆ ಬೇಡಿಕೆ ಬರುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟುನಗರಗಳಿಗೆ ಈ ಬಸ್ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.