
ಮಡಿಕೇರಿ(ನ.27): ಅಯೋಧ್ಯೆಯಲ್ಲಿ 2018ರಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಖಚಿತವಾಗಿದ್ದು, ಮುಂದಿನ ದೀಪಾವಳಿಯನ್ನು ರಾಮಮಂದಿರಲ್ಲೇ ಆಚರಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಎನ್ಸಿ ವತಿಯಿಂದ ಭಾನುವಾರ ನಗರದಲ್ಲಿ ನಡೆದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಸೀದಿಗಳನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದರೆ ದೇಶದ ಹಿಂದೂಗಳ ಭಾವನೆಯ ಪ್ರತೀಕವಾದ ರಾಮ ಜನ್ಮಭೂಮಿಯಲ್ಲೇ ರಾಮ ಮಂದಿರ ನಿರ್ಮಾಣ ವಾಗಬೇಕೆಂದು ಪ್ರತಿಪಾದಿಸಿದರು.
ದೇಶದಲ್ಲಿ ಎಲ್ಲೆಂದರಲ್ಲಿ ಮಸೀದಿಗಳು ನಿರ್ಮಾಣಗೊಳ್ಳುತ್ತವೆ, ಆದರೆ ಮುಸಲ್ಮಾನರೇ ಅಧಿಕ ಸಂಖ್ಯೆಯಲ್ಲಿರುವ ಸೌದಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿದ್ದ ಕೆಲವು ಮಸೀದಿಗಳನ್ನು ಇತ್ತೀಚೆಗೆ ಅಲ್ಲಿನ ಆಡಳಿತ ವ್ಯವಸ್ಥೆ ತೆರವುಗೊಳಿಸಿದೆ. ಈ ಕ್ರಮ ಭಾರತದಲ್ಲಿ ಸಾಧ್ಯವಿಲ್ಲದಿರುವುದು ದುರಂತ ಎಂದರು. ಅಪಘಾನಿಸ್ತಾನದಿಂದ ಬಂದ ಬಾಬರ್ ಮಸೀದಿ ನಿರ್ಮಿಸಿದ್ದು, ಮಸೀದಿಯ ಕೆಳಭಾಗದಲ್ಲಿ ರಾಮಮಂದಿರದ ಅಡಿಪಾಯದ ಅವಶೇಷಗಳಿರುವುದನ್ನು ಸ್ವತಃ ಕೇಂದ್ರ ಪುರಾತತ್ವ ಇಲಾಖೆಯೇ ಹೇಳಿದೆ ಎಂದು ಡಾ. ಸುಬ್ರಮಣಿಯನ್ ಸ್ವಾಮಿ ಗಮನ ಸೆಳೆದರು.
ಸುಮಾರು 800 ವರ್ಷಗಳ ಕಾಲ ಮುಸಲ್ಮಾನರು ಹಾಗೂ 200 ವರ್ಷಗಳ ಕಾಲ ಕ್ರಿಶ್ಚಿಯನ್ನರು ಭಾರತ ದೇಶವನ್ನು ಆಳಿದರು. ಆದರೆ ಶೇ.80 ರಷ್ಟು ಹಿಂದೂಗಳು ಇಂದಿಗೂ ಹಿಂದೂ ಧರ್ಮದಲ್ಲೇ ಉಳಿದುಕೊಂಡಿದ್ದು, ಹಿಂದೂ ಧರ್ಮ ಬಲಿಷ್ಠ ಧರ್ಮ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಹಿಂದೂಗಳು ಹಾಗೂ ಮುಸಲ್ಮಾನರ ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ, ಎರಡೂ ಡಿಎನ್ಎಗಳು ಒಂದೇ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರೆಲ್ಲರೂ ಮೂಲ ಭಾರತೀಯರೇ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳು ತಮ್ಮ ತಮ್ಮ ಧರ್ಮಗಳನ್ನೇ ಪ್ರತಿಪಾದಿಸುತ್ತವೆ, ಆದರೆ ಹಿಂದೂ ಧರ್ಮ ಮಾತ್ರ ಸರ್ವ ಧರ್ಮವನ್ನೂ ಗೌರವಿಸಿ ಎಂದು ಹೇಳುತ್ತದೆ. ರಾಮಾಯಣದಲ್ಲಿ ಸೀತೆ ಹಾಗೂ ಮಹಾಭಾರತದಲ್ಲಿ ದ್ರೌಪದಿ ಮಾದರಿ ಮಹಿಳೆಯರಾಗಿದ್ದು, ಹಿಂದೂ ಸಮಾಜದ ಮಹಿಳೆಯರು ಪುರುಷ ಸಮಾನರಾಗಿದ್ದಾರೆ ಎಂದು ಡಾ. ಸುಬ್ರಮಣಿಯನ್ ಸ್ವಾಮಿ ಹೆಮ್ಮೆಯಿಂದ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.