ಐಪಿಎಸ್‌ಗೆ ಭಾರೀ ಸರ್ಜರಿ : ಅಣ್ಣಾಮಲೈ ಸೇರಿ 29 ಅಧಿಕಾರಿಗಳ ವರ್ಗ

By Web DeskFirst Published Feb 21, 2019, 7:56 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯದ ಸಮ್ಮಿಶ್ರ ಸರ್ಕಾರ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಿದೆ. ಬುಧವಾರ ಮಧ್ಯಾಹ್ನ 14 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ, ರಾತ್ರಿ ವೇಳೆಗೆ 29 ಐಪಿಎಸ್‌ ಅಧಿಕಾರಿಗಳ ಸ್ಥಾನಪಲ್ಲಟ ಮಾಡಿದೆ.

ಬೆಂಗಳೂರು (ಫೆ. 21): ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯದ ಸಮ್ಮಿಶ್ರ ಸರ್ಕಾರ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ಮಾಡಿದೆ. ಬುಧವಾರ ಮಧ್ಯಾಹ್ನ 14 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ, ರಾತ್ರಿ ವೇಳೆಗೆ 29 ಐಪಿಎಸ್‌ ಅಧಿಕಾರಿಗಳ ಸ್ಥಾನಪಲ್ಲಟ ಮಾಡಿದೆ.

ಅತ್ಯಂತ ಪ್ರಮುಖವಾಗಿ ಗುಪ್ತಚರ ದಳದ ಮುಖ್ಯಸ್ಥರಾಗಿದ್ದ ಅಮರ್‌ ಕುಮಾರ್‌ ಪಾಂಡೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬಿ.ದಯಾನಂದ ಅವರನ್ನು ನಿಯೋಜಿಸಲಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಗೃಹ ಇಲಾಖೆ ಸಲಹೆಗಾರರಾಗಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಅವರಿಗೆ ನಿಕಟವಾಗಿದ್ದಾರೆ ಎನ್ನಲಾಗಿರುವ ದಯಾನಂದ ಅವರನ್ನು ಗುಪ್ತಚರ ವಿಭಾಗಕ್ಕೆ ನೇಮಕ ಮಾಡಲಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದು ಪ್ರಮುಖ ಬದಲಾವಣೆ ಎಂದರೆ, ಖಡಕ್‌ ಐಪಿಎಸ್‌ ಅಧಿಕಾರಿ ಎಂದೇ ಖ್ಯಾತಿವೆತ್ತ ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಅವರ ವರ್ಗಾವಣೆ. ಅಣ್ಣಾಮಲೈ ವರ್ಗಾವಣೆ ಆಗಿದ್ದರೂ, ಅವರಿಗೆ ಯಾವುದೇ ಸ್ಥಾನ ತೋರಿಸಲಾಗಿಲ್ಲ. ಆದರೆ, ಅಣ್ಣಾಮಲೈ ಸ್ಥಾನಕ್ಕೆ ಈಶಾ ಪಂತ್‌ ಅವರನ್ನು ನೇಮಿಸಲಾಗಿದೆ.

ಮಾನವ ಆಯೋಗಕ್ಕೆ ಪಾಂಡೆ: ರಾಜ್ಯ ಗುಪ್ತ ದಳದ ಮುಖ್ಯಸ್ಥರಾಗಿದ್ದ ಅಮರ್‌ ಕುಮಾರ್‌ ಪಾಂಡೆ ಅವರನ್ನು ರಾಜ್ಯ ಮಾನವ ಹಕ್ಕು ಆಯೋಗದ ಪೊಲೀಸ್‌ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಗುಪ್ತ ದಳದ ಮುಖ್ಯಸ್ಥರಾಗಿ ಕೇಂದ್ರ ವಲಯ ಐಜಿಪಿ ದಯಾನಂದ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಐಜಿಪಿಗಳ ವರ್ಗಾವಣೆ: ಅಮೃತ ಪಾಲ್‌- ದಾವಣಗೆರೆ ವಿಭಾಗಕ್ಕೆ, ಕೆ.ವಿ. ಶರತ್‌ ಚಂದ್ರ- ಕೇಂದ್ರ ವಲಯಕ್ಕೆ, ವಿಪುಲ್‌ ಕುಮಾರ್‌- ದಕ್ಷಿಣ ವಲಯಕ್ಕೆ, ಎಂ ನಂಜುಂಡ ಸ್ವಾಮಿ- ಬಳ್ಳಾರಿ ವಲಯಕ್ಕೆ, ಎಚ್‌.ಎಸ್‌. ರೇವಣ್ಣ- ಕಾರಾಗೃಹ ಇಲಾಖೆಗೆ, ರಾಘವೇಂದ್ರ ಸುಹಾಸ ಅವರನ್ನು ಉತ್ತರ ವಲಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಡಿಐಜಿಗಳ ವರ್ಗಾವಣೆ: ಸುಬ್ರಹ್ಮಣ್ಯೇಶ್ವರ ರಾವ್‌- ಗುಪ್ತದಳಕ್ಕೆ, ಟಿ.ಆರ್‌. ಸುರೇಶ್‌- ಜಂಟಿ ಆಯುಕ್ತ ಸಿಎಆರ್‌, ಸಂದೀಪ್‌ ಪಾಟೀಲ್‌- ಮಂಗಳೂರು ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.

ಡಿಸಿಪಿಗಳ ವರ್ಗಾವಣೆ: ಚೇತನ್‌ ಸಿಂಗ್‌, ಶಶಿ ಕುಮರ್‌, ಎಂ.ಬಿ, ಬೋರಲಿಂಗಯ್ಯ, ಅಭಿನವ್‌ ಖಾರೆ ವರ್ಗಾವಣೆಗೊಂಡ ಪ್ರಮುಖ ಡಿಸಿಪಿಗಳಾಗಿದ್ದಾರೆ.

click me!