
ಬೆಂಗಳೂರು(ಜೂ.27): ಬಿಡಿಎ ವಿವಿಧ ಉದ್ದೇಶಗಳಿಗಾಗಿ ರೈತರಿಂದ ಭೂ ಮಾಲೀಕರಿಂದ ಸಾವಿರಾರು ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ ಸ್ವಾಧೀನಪಡಿಸಿಕೊಂಡ ಭೂಮಿ ಈಗ ಪಾಳುಕೊಂಪೆಯಾಗಿವೆ. ಇತ್ತ ನಿವೇಶನವೂ ನಿರ್ಮಾಣ ಮಾಡಿಲ್ಲ. ಅಂತ ರೈತರಿಗೆ ಪರಿಹಾರವೂ ನೀಡಿಲ್ಲ. ಸರ್ಕಾರಕ್ಕೆ ಬರಬೇಕಾದ ಆದಾಯವೂ ಬರುತ್ತಿಲ್ಲ. ಏಕೆ ಅಂತೀರಾ ಈ ವರದಿ ನೋಡಿ.
ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಯ್ತು ಬಿಡಿಎ ಭೂಮಿ ರಹಸ್ಯ!
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದಲ್ಲಿ ಹಲವು ಬಡಾವಣೆ ನಿರ್ಮಾಣ ಮಾಡಿದೆ. ಪ್ರಾಧಿಕಾರ ಆರಂಭಗೊಂಡಾಗಿನಿಂದ ಕೆಂಪೇಗೌಡ ಬಡಾವಣೆವರೆಗೂ ಬಿಡಿಎ ಸಾವಿರಾರು ನಿವೇಶನ, ವಸತಿ ನಿರ್ಮಾಣದ ಸಲುವಾಗಿ ರೈತರಿಂದ ಹಾಗೂ ಭೂ ಮಾಲೀಕರಿಂದ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆದ್ರೆ ಹೀಗೆ ವಶಪಡಿಸಿಕೊಂಡ ಭೂಮಿಯನ್ನು ಬಿಡಿಎ ಸಂಪೂರ್ಣವಾಗಿ ಬಳಸಿಕೊಳ್ಳುವ ಗೋಜಿಗೆ ಹೋಗದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಹಾಗೂ ವಾಸ್ತವದಲ್ಲಿ ಬಳಸಿಕೊಂಡಿರುವ ಭೂಮಿ ಕುರಿತು ದಾಖಲೆಗಳ ಪರಿಶೀಲನೆ ನಡೆಸಿದಾಗ 56 ಬಡಾವಣೆಗಳಲ್ಲಿ ಒಟ್ಟು 11,533 ಎಕರೆ ಜಾಗ ಬಳಕೆ ಆಗದೇ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಆ ಜಾಗಗಳು ಈಗ ಪಾಳುಕೊಂಪೆಯಾಗಿವೆ.
ಇದೇ ವೇಳೆ ಖಾಲಿ ಇರುವ 11,533 ಎಕರೆ ಜಮೀನಿನಲ್ಲಿ ಅನಧಿಕೃತವಾಗಿ ನಿವೇಶನ ನಿರ್ಮಿಸಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಬಿಡಿಎ ಅಧಿಕಾರಿಗಳು ನಡೆಸಿದ ಸ್ಥಳ ಪರಿಶೀಲನೆಯಲ್ಲಿ ಅಂದಾಜು 2, 34,322 ನಿವೇಶನಗಳು ತಲೆಎತ್ತಿರುವುದು ಪತ್ತೆಯಾಗಿದೆ. ಬಿಡಿಎ ಸ್ವಾಧೀನಪಡಿಸಿಕೊಂಡ ಭೂಮಿ ಉದ್ದೇಶಿತ ಯೋಜನೆಗಳಿಗೆ ಬಳಕೆ ಮಾಡಿದ್ದರೆ ಬಿಡಿಎಗೆ 3 ಸಾವಿರ ಕೋಟಿ ಆದಾಯ ಬರುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರನ್ನು ಪ್ರಶ್ನಿಸಿದಾಗ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿದ ಜಮೀನು ಲೆಕ್ಕದ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂತ ತಿಳಿಸಿದರು.
ಒಟ್ಟಿನಲ್ಲಿ ಬಿಡಿಎ ವಶಪಡಿಸಿಕೊಂಡ ಭೂಮಿ ಜಾಗ ಪಾಳುಕೊಂಪೆಯಾಗಿವೆ. ಇನ್ನು ಮುಂದಾದರೂ ಬಿಡಿಎ ಈ ಜಾಗದಲ್ಲಿ ನಿವೇಶನ ನಿರ್ಮಾಣ ಮಾಡುತ್ತೋ ಅಥವಾ ನಿಜವಾದ ಭೂ ಮಾಲೀಕರಿಗೆ ಜಮೀನು ಹಸ್ತಾಂತರ ಮಾಡಿ ಅವರಿಂದ ಶುಲ್ಕ ವಸೂಲಿ ಮಾಡುತ್ತೋ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.