
ತಿರುಮಲ/ವಿಜಯವಾಡ: ತಿರುಪತಿ ತಿಮ್ಮಪ್ಪನ ದೇವಾಲಯಲ್ಲಿ ಅಕ್ರಮ ನಡೆಯುತ್ತಿದೆ. ಇದರ ಹಿಂದಿನ ಸೂತ್ರಧಾರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಂದು ಆರೋಪ ಮಾಡಿದ್ದಕ್ಕಾಗಿ ದೇಗುಲದ ಮುಖ್ಯ ಅರ್ಚಕನ ಹುದ್ದೆಯಿಂದ ವಜಾ ಆಗಿರುವ ಎ.ವಿ. ರಮಣ ದೀಕ್ಷಿತುಲು ಅವರು ನಾಯ್ಡು ವಿರುದ್ಧ ಮತ್ತಷ್ಟು ಗಂಭೀರ ಆಪಾದನೆಗಳನ್ನು ಮಾಡಿದ್ದಾರೆ.
ಮಾಧ್ಯಮಗಳ ಮುಂದೆ ಸೋಮವಾರ ಮಾತನಾಡಿದ ದೀಕ್ಷಿತುಲು ಅವರು, ‘ಚಂದ್ರಬಾಬು, ತಮಗೆ ಬೇಕಾದವರನ್ನು ತಿರುಮಲ ದೇವಾಲಯ ಮಂಡಳಿಗೆ ನೇಮಕ ಮಾಡಿಕೊಂಡರು. ಈ ಮೂಲಕ 100 ಕೋಟಿ ರು.ಗಳನ್ನು ಅಕ್ರಮವಾಗಿ ದೇಗುಲದಿಂದ ವಿವಿಧ ಯೋಜನೆಗಳ ನೆಪದಲ್ಲಿ ಟಿಡಿಪಿಗೆ ವರ್ಗಾಯಿಸಿದ್ದಾರೆ’ ಎಂದು ಆರೋಪ ಮಾಡಿದರು.
ಆಭರಣ ಮಾಯ!: ದೇಗುಲದ ಲಡ್ಡು ಪ್ರಸಾದ ತಯಾರಿಸುವ ಅಡುಗೆ ಮನೆಯಲ್ಲಿ ರಹಸ್ಯ ಕೋಣೆ ಇದೆ. ಅದರಲ್ಲೇ ಪುರಾತನ ಆಭರಣ ಇಡಲಾಗುತ್ತಿತ್ತು. ಅಡುಗೆಮನೆ ಯಾವತ್ತೂ ಬಂದ್ ಆಗಿದ್ದನ್ನು ನಾನು ನೋಡಿಲ್ಲ. ಆದರೆ ಕಳೆದ ಡಿಸೆಂಬರ್ 8 ರಂದು 1 ದಿನ ಅಡುಗೆ ಮನೆ ಬಂದ್ ಆಗಿತ್ತು. ಆಗ ಸಂದೇಹ ಬಂದ ನಾನು ಅಲ್ಲಿಗೆ ಹೋಗಿ ನೋಡಿದಾಗ ರಹಸ್ಯ ಕೋಣೆಯಿದ್ದ ಸ್ಥಳದಲ್ಲಿ ಇಟ್ಟಿಗೆಗಳನ್ನು ಬದಲಿಸಲಾಗಿತ್ತು. ನೆಲ ಅಗೆಯಲಾಗಿತ್ತು. ನೆಲ ಅಲ್ಲಾಡಿದಂತೆ ಭಾಸವಾಯಿತು. ಈ ಕೋಣೆಯಲ್ಲಿನ ಪುರಾತನ ಆಭರಣಗಳನ್ನು ಸಾಗಿಸಿರುವ ಶಂಕೆಯಿದೆ.
ಸುಮಾರು 100 ಕೋಟಿ ರುಪಾಯಿ ಮೌಲ್ಯದ ಆಭರಣ, ಹಣವನ್ನು ಚಂದ್ರಬಾಬು ಕಡೆಯವರು ಲೂಟಿ ಹೊಡೆದಿದ್ದಾರೆ. ಆಭರಣ ನಿರ್ಮಾಣ ಹೆಸರಿನಲ್ಲಿ ಹಣವನ್ನು ವರ್ಗಾಯಿಸಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆವರು ಆಗ್ರಹಿಸಿದರು.
ಗಣಿಗಾರಿಕೆ ಹೆಸರಲ್ಲಿ ಲೂಟಿ: ನಾಯ್ಡು ಅವರು ಇದೊಂದೇ ಅಲ್ಲ. ಗಣಿಗಾರಿಕೆ ನೆಪದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಅನೇಕ ಸ್ಥಳದಲ್ಲಿ ಉತ್ಖನನ ನಡೆದಿದೆ. ಇಲ್ಲಿನ ಸಂಪತ್ತನ್ನು ಅಕ್ರಮವಾಗಿ ಲೂಟಿ ಹೊಡೆದು ತೆಲುಗುದೇಶಂ ಬಳಸಿಕೊಳ್ಳುತ್ತಿದೆ ಎಂದು ದೂರಿದರು. 50 ಸಾವಿರದ ಟಿಕೆಟ್ಗೆ 20 ಲಕ್ಷ: ಆಗಮ ಸೇವೆಗೆ 50 ಸಾವಿರ ರು. ಟಿಕೆಟ್ ದರವಿದೆ. ಆದರೆ ಏಜೆಂಟರ ಮೂಲಕ 20 ಲಕ್ಷ ರು.ಗೆ ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಲಾಗುತ್ತಿದೆ ಎಂದು ದೂರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.