
ಬೆಂಗಳೂರು(ಡಿ.21): ATM ಗಳಲ್ಲಿ ಕ್ಯೂ ಕರಗಿತಾ? ಜನರ ಸಂಕಷ್ಟ ಮುಗಿಯುತ್ತಾ ಬಂತಾ? ಇದು ಸುವರ್ಣ ನ್ಯೂಸ್ ಮೆಗಾ ರಿಯಾಲಿಟಿ ಚೆಕ್. ಏಕೆಂದರೆ, ಹಳೆ ನೋಟು ನಿಷೇಧ ಎನ್ನುವ ಐತಿಹಾಸಿಕ ನಿರ್ಧಾರದ ಕೊನೆಯ ದಿನ ಸಮೀಪಿಸುತ್ತಾ ಇದೆ. ಬಾಕಿ ಉಳಿದಿರುವುದು ಇನ್ನು ಕೇವಲ 10 ದಿನ. ಈ ಬಗ್ಗೆ ಸುವರ್ಣ ನ್ಯೂಸ್ ದೊಡ್ಡ ಕ್ಯಾಂಪೇನ್ ನಡೆಸುತ್ತಾ ಇದೆ. ಈ ಕ್ಯಾಂಪೇನ್'ನ ಮೊದಲ ಹಂತವೇ ಎಟಿಎಂಗಳ ರಿಯಾಲಿಟಿ ಚೆಕ್. ಎಟಿಎಂ ವಿಚಾರ ಕುರಿತಂತೆ ವಿಶೇಷ ಕಾರ್ಯಕ್ರಮವೂ ಸಂಜೆ 5 ಗಂಟೆಯವರೆಗೆ ಸುವರ್ಣ ನ್ಯೂಸ್'ನಲ್ಲಿ ಪ್ರಸಾರವಾಗಲಿದೆ.
ಪ್ರಧಾನಿ ಮೋದಿ ಇಂಥಾದ್ದೊಂದು ಐತಿಹಾಸಿಕ ಘೋಷಣೆ ಮೊಳಗಿಸಿದ್ದು 40 ದಿನಗಳ ಹಿಂದೆ ಅಂದು ನವೆಂಬರ್ 8. ಆ ದಿನ ದೇಶಕ್ಕೆ ದೇಶವೇ ಇನ್ನು ಕಪ್ಪುಕುಳಗಳ ಕಥೆ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ, ಕ್ರಮೇಣ ಒಂದೊಂದೇ ಹೊರಬೀಳುತ್ತಾ ಹೋದವು. ಈ ದಿಟ್ಟ ಹೆಜ್ಜೆ, ಮೋದಿ ಅಂದುಕೊಂಡಷ್ಟು ಸುಲಭವಲ್ಲ. ಇಂತಹ ನಿರ್ಧಾರದ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳಿವೆ ಎನ್ನುವ ಸತ್ಯ ಹೊರಬೀಳುತ್ತಾ ಹೋಯಿತು. ಕಪ್ಪುಕುಳಗಳು ರಂಗೋಲಿ ಕೆಳಗೆ ನುಸುಳಿದ್ದರು. ಹೀಗಾಗಿಯೇ ಈ 40 ದಿನಗಳಲ್ಲಿ ನಿಯಮಾವಳಿಗಳು ಎರಡು ದಿನಕ್ಕೊಂದರಂತೆ ಬದಲಾಗುತ್ತಾ ಹೋದವು. ಹೊಸ ಹೊಸ ಸಮಸ್ಯೆ ಎದುರಾದಂತೆ, ಹೊಸ ಹೊಸ ನಿಯಮಗಳೂ ಜಾರಿಯಾದವು. ಎಲ್ಲಕ್ಕಿಂತ ಹೆಚ್ಚಾಗಿ ಜನರನ್ನು ಬಾಧಿಸಿದ್ದು ಚಿಲ್ಲರೆ ಸಮಸ್ಯೆ. ಎಟಿಎಂಗಳಲ್ಲಿ ಹಣ ದೊರಕದೆ ಜನ ಪರದಾಡಿದರು. ಆ ಪರದಾಟ ಈಗಲೂ ಇದೆ. ಎಟಿಎಂಗಳಲ್ಲಿ ಕ್ಯೂ ಇಂದಿಗೂ ಕರಗಿಲ್ಲ. ಇದೆಲ್ಲದರ ಮಧ್ಯೆ ಇರುವುದು ಅದೊಂದು ನಿರೀಕ್ಷೆ.
ಮೋದಿ ಕೇಳಿದ್ದ 50 ದಿನ ಮುಗಿದ ಮೇಲೆ ಏನಾಗುತ್ತೆ?
ಇದೊಂದು ಭರವಸೆಗಾಗಿಯೇ ಜನ ಕಾಯುತ್ತಾ ಇದ್ದದ್ದು. ಇದೊಂದು ಭರವಸೆ ಡಿಸೆಂಬರ್ 31ರಂದು ನಿಜವಾಗಿಬಿಟ್ಟರೆ, ಅಲ್ಲಿಗೆ ಕಾಳಧನಿಕರ ವಿರುದ್ಧದ ಮೊದಲ ಯುದ್ಧ ಗೆದ್ದಂತೆ. ಏಕೆಂದರೆ, ದೇಶದಲ್ಲಿರುವ ಎಟಿಎಂಗಳನ್ನೆಲ್ಲ ಹೊಸ ನೋಟುಗಳಿಗೆ ತಕ್ಕಂತೆ ಅಪ್'ಡೇಟ್ ಮಾಡುವುದು ಅಷ್ಟು ಸುಲಭವಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ, ದೇಶದ ಶೇ. 95ರಷ್ಟು ಕಂಪ್ಲೀಟ್ ಅಪ್'ಡೇಟ್ ಆಗಿವೆ.
ದೇಶಾದ್ಯಂತ ಇರುವ ಒಟ್ಟು ಎಟಿಎಂಗಳು: 2 ಲಕ್ಷದ 15 ಸಾವಿರದ 39
ಕರ್ನಾಟಕದಲ್ಲಿರುವ ಒಟ್ಟು ಎಟಿಎಂಗಳು: 16, 929
ಹೊಸ ನೋಟು ವಿತರಣೆಗೆ ಸಿದ್ಧವಾಗಿರುವ ಎಟಿಎಂಗಳು: 13,929
ಹೊಸ ನೋಟಿಗೆ ಸಿದ್ಧವಾಗಬೇಕಿರುವ ಎಟಿಎಂಗಳು: 3 ಸಾವಿರ
ನಗದು ವಹಿವಾಟನ್ನೇ ನಂಬಿಕೊಂಡಿರುವ ಕೋಟ್ಯಂತರ ಜನರ ಕಣ್ಣು ನೆಟ್ಟಿರುವುದು ಇದೇ ಎಟಿಎಂಗಳ ಮೇಲೆ. ಆರ್ಬಿಐ ನಮ್ಮಲ್ಲಿ ಹಣದ ಕೊರತೆ ಇಲ್ಲ ಎಂದು ಪದೇ ಪದೇ ಹೇಳುತ್ತಲೇ ಇದೆ. 500 ರೂ. ನೋಟು ಬಿಟ್ಟಿದ್ದರೂ, ಅದು ಮಾರುಕಟ್ಟೆಯಲ್ಲಿ ನಿರೀಕ್ಷೆಯ ಪ್ರಮಾಣದಲ್ಲಿ ಇಲ್ಲ. ಈಗ ಹೊಸದಾಗಿ 50 ರೂ. ನೋಟು ಬಿಡುವುದಾಗಿಯೂ ಆರ್ಬಿಐ ಹೇಳಿದೆ. ಅದು ಚಿಲ್ಲರೆ ಸಮಸ್ಯೆಗೆ ಮುಕ್ತಿ ಹಾಡಬಲ್ಲದು. ಇಷ್ಟಕ್ಕೂ ಈ ಚಿಲ್ಲರೆ ಸಮಸ್ಯೆಗೆ ಆರ್ಥಿಕ ತಜ್ಞರು ನೀಡಿರುವ ಕಾರಣಗಳೇ ಕುತೂಹಲಕಾರಿ.
-ಶೇ.35ರಷ್ಟು ಎಟಿಎಂಗಳಿಗೆ ಮಾತ್ರ ಹಣ ಪೂರೈಕೆ
-ಎಟಿಎಂಗಳಿಗಿಂತ ಶಾಖೆಯಲ್ಲಿ ಹಣ ವಿತರಣೆ ಮಾಡಿದ ಬ್ಯಾಂಕುಗಳು
-ಎಟಿಎಂಗಳಲ್ಲಿ ಬಹುತೇಕ ಸಿಗುತ್ತಿರುವುದು 2 ಸಾವಿರ ರೂ. ಮಾತ್ರ
-ಬ್ಯಾಂಕುಗಳು ಹಂಚಿದ ಚಿಲ್ಲರೆ ನೋಟುಗಳು ಮತ್ತೆ ಬ್ಯಾಂಕ್ಗೆ ಬರಲಿಲ್ಲ
-SBI ಹೊರತುಪಡಿಸಿದರೆ, ಇತರೆ ಬ್ಯಾಂಕ್ ಎಟಿಎಂಗಳಲ್ಲಿ ಸಮಸ್ಯೆ ಹೆಚ್ಚು
ಇಷ್ಟೆಲ್ಲಾ ಸಿದ್ಧವಾದ ಮೇಲೆ ಹೆಚ್ಚು ನಗದು ಡ್ರಾ ಮಾಡುವ ಶೇ.35ರಷ್ಟು ಎಟಿಎಂಗಳಿಗೆ ಮಾತ್ರ ಆದ್ಯತೆಯ ಮೇರೆಗೆ ನಗದು ಪೂರೈಕೆ ಮಾಡಲಾಗಿದೆ. ಉಳಿದ ಎಟಿಎಂಗಳನ್ನು ಎರಡನೇ ಆದ್ಯತೆಗೆ ನೀಡಲಾಗಿದೆ. ಇನ್ನು, ಬ್ಯಾಂಕ್'ಗಳು ತಮ್ಮ ತಮ್ಮ ಶಾಖೆಗೆ ನೀಡಿದ ಬಹುತೇಕ ಹಣವನ್ನು ಎಟಿಎಂಗಳಿಗೆ ಹಾಕಲಿಲ್ಲ. ತಮ್ಮದೇ ಶಾಖೆಯ, ತಮ್ಮದೇ ಗ್ರಾಹಕರಿಗೆ ಹಣ ನೀಡಲು ಮುಂದಾದವು. ನಗದನ್ನು ಶಾಖೆಯಲ್ಲೇ ಉಳಿಸಿಕೊಂಡವು. ಇನ್ನು, ಆರಂಭದಲ್ಲಿ ನೀಡಿದ 100, 50, 20,10 ರೂ. ನೋಟುಗಳು ಮತ್ತೆ ಬ್ಯಾಂಕುಗಳಿಗೆ ಬರಲೇ ಇಲ್ಲ. ಹೀಗಾಗಿ ಎಸ್ಬಿಐ ಹೊರತುಪಡಿಸಿದರೆ, ಉಳಿದ ಬ್ಯಾಂಕುಗಳ ಎಟಿಎಂಗಳಲ್ಲಿ ಸಮಸ್ಯೆ ತೀವ್ರವಾಗಿ ಕಾಡಿತು.
ಈಗ ಕೇಂದ್ರ ಸಚಿವ ಅರುಣ್ ಜೇಟ್ಲಿ ಭರವಸೆ ಕೊಟ್ಟಿದ್ದಾರೆ. ಡಿಸೆಂಬರ್ 30ರ ನಂತರ ಬ್ಯಾಂಕ್ಗಳಲ್ಲಿ ಹಳೆಯ ನೋಟು ಬದಲಾವಣೆಯಾಗಲೀ, ಡೆಪಾಸಿಟ್ ಆಗಲೀ ಇರುವುದಿಲ್ಲ. ಬ್ಯಾಂಕುಗಳ ವಹಿವಾಟು ಯಥಾಸ್ಥಿತಿಗೆ ಬರಲಿದೆ. ಅದೇ ಸಮಯಕ್ಕೆ ಚಿಲ್ಲರೆ ಸಮಸ್ಯೆ ನೀಗುತ್ತಾ? ಎಟಿಎಂಗಳಲ್ಲಿ ದುಡ್ಡು ಸಿಗುತ್ತಾ? ಉಳಿದಿರುವುದು ಇನ್ನು ಹತ್ತೇ ದಿನ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.