ಮಂಡ್ಯ: ಕಟ್ಟಡಗಳ ದುರಸ್ತಿ ಹೆಸರಲ್ಲಿ ಹಣ ಲೂಟಿ

By Kannadaprabha NewsFirst Published Oct 22, 2019, 12:50 PM IST
Highlights

ಕಟ್ಟಡಗಳನ್ನು ದುರಸ್ತಿಗೊಳಿಸುವ ಹೆಸರಲ್ಲಿ ಹಣ ಲೂಟಿ ಮಾಡಿರುವ ಘಟನೆ ಮಂಡ್ಯದ ಕೆ. ಆರ್. ಪೇಟೆಯಲ್ಲಿ ಬೆಳಕಿಗೆ ಬಂದಿದೆ. ಕಾಮಗಾರಿ ಮುಕ್ತಾಯಗೊಳ್ಳುವ ಮೊದಲೇ ಗೋಡೆಗಳ ಗಾರೆ ಕಿತ್ತು ಬರುತ್ತಿದೆ. ಇದು ಕಳಪೆ ಕಾಮಗಾರಿಗೆ ಕೈಗನ್ನಡಿಯಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ(ಅ.22): ಕೆ. ಆರ್ ಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ನಾಲ್ಕು ಕಟ್ಟಡಗಳ ದುರಸ್ತಿ ಮತ್ತು ಸುಣ್ಣ ಬಣ್ಣ ಬಳಿಯುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ದೂರುಗಳು ಬಂದಿವೆ. ಕಾಮಗಾರಿ ಮುಕ್ತಾಯಗೊಳ್ಳುವ ಮೊದಲೇ ಗೋಡೆಗಳ ಗಾರೆ ಕಿತ್ತು ಬರುತ್ತಿದೆ. ಇದು ಕಳಪೆ ಕಾಮಗಾರಿಗೆ ಕೈಗನ್ನಡಿಯಂತಾಗಿದೆ.

ತಾಪಂ ನಿಧಿ 3ರಲ್ಲಿ ಈ ವರ್ಷದ ಕ್ರಿಯಾಯೋಜನೆಯನ್ನು 26 ಲಕ್ಷ ರು. ಗಳಿಗೆ ಅನುಮೋದನೆ ನೀಡಲಾಗಿತ್ತು. ತಾಪಂ ಆವರಣದಲ್ಲಿರುವ ಇಒ ಮತ್ತು ಸಿಬ್ಬಂಧಿಗಳ ಕಟ್ಟಡ ಮತ್ತು ತರಬೇತಿ ನಡೆಸಲು ಬಳಸುತ್ತಿರುವ ಸಾಮರ್ಥ್ಯ ಸೌಧ ಮತ್ತು ಸಭಾಂಗಣದ ಹೊರ ಸುತ್ತು ಮತ್ತು ಸಭಾಂಗಣದೊಳಗಿನ ದುರಸ್ತಿ ಮತ್ತು ಸುಣ್ಣ ಬಣ್ಣ ಬಳಿಯಲು ಯೋಜನೆ ರೂಪಿಸಲಾಗಿತ್ತು.

ಗುತ್ತಿಗೆ ನೀಡುವಲ್ಲಿ ತಾರತಮ್ಯ:

ಪ್ರತಿ ಕಾಮಗಾರಿಗೆ ತಲಾ 2.5 ಲಕ್ಷದಂತೆ ಒಟ್ಟು 10 ಲಕ್ಷದಲ್ಲಿ 4 ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಒಂದೇ ಜಾಗದಲ್ಲಿ ನಾಲ್ಕು ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಒಟ್ಟು ಮೊತ್ತ 10 ಹತ್ತು ಲಕ್ಷಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಬೇಕಿತ್ತು. ಆದರೆ ತುಂಡು ಗುತ್ತಿಗೆ ನೀಡಿ, ತಮಗೆ ಬೇಕಾದ ಗುತ್ತಿಗೆದಾರನಿಗೆ ಕಾಮಗಾರಿ ನೀಡಲಾಗಿದೆ ದೂರುಗಳು ಬಂದಿವೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಪಲ್ಟಿ : ಇಬ್ಬರ ದುರ್ಮರಣ

ನಾಲ್ಕು ಕಾಮಗಾರಿಯನ್ನು ಒಬ್ಬ ಗುತ್ತಿಗೆದಾರನಿಗೆ ನೀಡಿಲಾಗಿದೆ. ನಾಲ್ಕು ಕಾಮಗಾರಿಯನ್ನು ಒಟ್ಟಾಗಿ ಮಾಡಿದ್ದರೇ ಇ ಟೆಂಡರ್‌ ಮಾಡಬೇಕಿತ್ತು. ಆಗ ತಮಗೆ ಬೇಕಾದ ಗುತ್ತಿಗೆದಾರನಿಗೆ ನೀಡಲು ಆಗತ್ತಿರಲಿಲ್ಲ. ಅಲ್ಲದೆ ಕಮೀಷನ್‌ ಕೂಡ ನಿರೀಕ್ಷೆಯಂತೆ ಪಡೆಯಲು ತಾಪಂ ಅಧಿಕಾರಿಗಳಿಗೆ ಆಗುತ್ತಿರಲಿಲ್ಲ. ಈ ಕಾರಣದಿಂದಾಗಿ ತುಂಡು ಗುತ್ತಿಗೆ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸಾರ್ವಜನಿಕರ ದೂರುಗಳು

1. ಮೂರು ಕಟ್ಟಡಗಳಿಗೆ ಸಂಪೂರ್ಣ ಸುಣ್ಣ ಬಣ್ಣ ಬಳಿಯುವುದು, ಕಚೇರಿ ಕಟ್ಟಡಗಳ ಮೆಟ್ಟಲುಗಳಿಗೆ ಟೈಲ್ಸ್‌ ಅಳವಡಿಸಿವುದು, ಕಿತ್ತು ಹೋಗಿರುವ ಕಿಟಿಕಿಗಳನ್ನು ಮರುಜೋಡಣೆ ಮಾಡುವುದು. ಅವಶ್ಯಕತೆಯಿರುವ ಕೊಠಡಿಗಳ ಶೌಚಾಲಯಗಳಿಗೆ ಆಧುನಿಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಕೆಲಸಗಳನ್ನು ಮಾಡಲು ತಾಂತ್ರಿಕ ಅಂದಾಜು ವೆಚ್ಚ 10 ಲಕ್ಷಕ್ಕೆ ಅನುಮೋದನೆ ಪಡೆದಿದ್ದಾರೆ. ತಾಪಂ ಸಭಾಂಗಣದ ಕಟ್ಟಡದ ಮೆಟ್ಟಿಲುಗಳಿಗೆ ಅಳವಡಿಸಿರುವ ಟೈಲ್ಸ್‌ ಉದ್ಘಾಟನೆಗೂ ಮುನ್ನವೇ ಕಿತ್ತು ಬಂದಿವೆ. ಹಿಂದೆ ಇದ್ದ ಸಿಮೆಂಟ್‌ ನ ನೈನ್‌ ಗಾರೆ ಮೆಟ್ಟಿಲನ್ನು ತೆರವು ಮಾಡದೆ. ಅದರ ಮೇಲೆಯೇ ಟೈಲ್ಸ್‌ ಅಂಟಿಸಿದ್ದಾರೆ. ಹೀಗಾಗಿ ಟೈಲ್ಸ್‌ ಗಳು ಈಗಾಗಲೇ ಕಿತ್ತು ಬಂದಿವೆ. ಹೊಸ ಮೆಟ್ಟಿಲು ನಿರ್ಮಾಣ ಮಾಡಿ ಟೈಲ್ಸ್‌ ಶಾಶ್ವತವಾಗಿ ಅಂಟಿಕೊಳ್ಳುವಂತೆ ಕೆಲಸ ಮಾಡಿಲ್ಲ.

2. ಕಟ್ಟಡಕ್ಕೆ ಬಳದಿರುವ ಬಣ್ಣ ಕೂಡ ಚೆನ್ನಾಗಿಲ್ಲ. ತೆಳುವಾಗಿ ಬಳದಿರುವ ಕಾರಣ ಹೊಸ ಬಣ್ಣ ಬಳಿದಿದ್ದಾರೆ ಎಂಬುದು ಕಾಣುತ್ತಿಲ್ಲ. ಕಟ್ಟಡದ ಚಾವಣಿಯಿಂದ ನೀರು ಇಳಿದು ಬಳಿದಿರುವ ಬಣ್ಣದ ಮೇಲೆ ಹರಿದಿದೆ. ಬಣ್ಣ ಕೂಡ ಕಿತ್ತು ಬಂದಿದೆ. ಕಚೇರಿಯೊಳಗೆ ನೆಲಹಾಸಿಗೆ ಟೈಲ್ಸ್‌ ಹಾಕಲಾಗಿದೆ. ಕಚೇರಿ ಒಳಗೆ ಮತ್ತು ಹೊರಗೆ ಸಮತಟ್ಟಾಗಿ ಅಳವಡಿಸಿಲ್ಲ. ಕಚೇರಿ ಒಳಗೆ ಹೋಗುವಾಗ ಒಳಗಿನ ಉಬ್ಬು ಇರುವ ಟೈಲ್ಸ್‌ ಗೆ ಎಡವಿ ಬೀಳುವಂತಾಗಿದೆ. ಕಿಟಿಕಿ ಮತ್ತು ಬಾಗಿಲುಗಳನ್ನು ಕಿತ್ತು ಮರುಜೋಡಣೆ ಮಾಡದೆ, ಅವುಗಳಿಗೆ ಬಣ್ಣ ಬಳಿಯಲಾಗಿದೆ.

3. ಜನರಿಗೆ ಕಣ್ಣಿಗೆ ಕಾಣುವ ಕಡೆ ಅಲ್ಯುಮಿನಿಯಂ ಗ್ಲಾಸ್‌ ಹಾಕಲಾಗಿದೆ. ದುರಸ್ತಿ ಆದ ಕಿಟಕಿಗೆ ಅಕ್ಷರ ದಾಸೋಹ ಕಚೇರಿಯ ಸಿಬ್ಬಂದಿ ಗ್ಲಾಸ್‌ ಒಡೆದುಹೊಂದ ಹಿನ್ನಲೆಯಲ್ಲಿ ನ್ಯೂಸ್‌ ಪೇಪರ್‌ ಅಳವಡಿಸಿದ್ದಾರೆ.

ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು...!

4. ಹಳೆ ಕಟ್ಟಡಕ್ಕೆ ಸುಣ್ಣ ಬಳಿದು ನವೀಕರಣ ಕಟ್ಟಡ ಉದ್ಘಾಟನೆ ಎಂದು ತಾಪಂ ಆಡಳಿತ ಮಂಡಳಿ ಸದಸ್ಯರನ್ನೊಳಗೊಂಡ ಬೋರ್ಡ್‌ ಹಾಕಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ.

5. ತಾಲೂಕಿನ ಗ್ರಾಮೀಣ ಪ್ರದೇಶದ ಕಾಮಗಾರಿಗಳ ಗುಣಮಟ್ಟದ ಮೇಲ್ವಿಚಾರಣೆ ಮಾಡಬೇಕಿರುವ ತಾಪಂ ಅಧಿಕಾರಿಗಳು, ತಮ್ಮ ಕಟ್ಟಡಗಳ ದುರಸ್ಥಿಯನ್ನು ಗುಣಮಟ್ಟದಿಂದ ಮಾಡಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

click me!