ಬದಲಾಗ್ತಾ ಇದೆ ಟ್ರೆಂಡ್ ; ಟೂರಿಸಂ ಕಡೆ ವಾಲುತ್ತಿದೆ ಯುವಕರ ಮನಸ್ಸು!

By Web DeskFirst Published Oct 6, 2019, 1:56 PM IST
Highlights

ಈಗಿನ ಹುಡುಗ-ಹುಡುಗಿಯರಿಗೆ ಜಗತ್ತು ಸುತ್ತುವ ಆಸೆ ಬಂದುಬಿಟ್ಟಿದೆ. ಕೆಲಸ ಸಿಗುತ್ತಿದ್ದಂತೆ ಒಂದೈದೋ ಹತ್ತೋ ವರ್ಷ ಗೆಳೆಯರೊಂದಿಗೆ ಸೇರಿ ದೇಶ ಸುತ್ತೋಣ ಅಂತ ಹೊರಡುತ್ತಾರೆ. ಅವರಿಗೆ ಮದುವೆಯಾಗುವ ಆಸಕ್ತಿ ಇರೋದಿಲ್ಲ. ಆಮೇಲೆ ಮದುವೆಯ ಆಲೋಚನೆ ಮಾಡುತ್ತಾರೆ. ಇದು ನಾವು ಗಮನಿಸಿರುವ ಟ್ರೆಂಡು. 

ಈಗೀಗ ಹುಡುಗರು ಬೇಗ ಮದುವೆ ಮಾಡ್ಕೊಳ್ಳಲ್ಲ. ಮೂವತ್ತು ಮೂವತ್ತೈದರ ತನಕವೂ ಒಂಟಿಯಾಗಿರಲಿಕ್ಕೆ ಇಷ್ಟಪಡುತ್ತಾರೆ. ಅಂಥವರೇ ನಮ್ಮ ಪಾಲಿನ ದೇವರು.

ಅಷ್ಟುಹೇಳಿ ಅವರು ಮುಗುಳುನಕ್ಕರು. ಆಸ್ಪ್ರೇಲಿಯಾದ ವಿಮಾನಯಾನ ಸಂಸ್ಥೆಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿರುವ ಅವರು ಭಾರತೀಯರಷ್ಟೇ ಅಲ್ಲ, ಇಡೀ ಜಗತ್ತಿನ ತರುಣರ ವರ್ತನೆಯನ್ನೆಲ್ಲ ಅಧ್ಯಯನ ಮಾಡಿದಂತಿದ್ದರು.

ಈಗಿನ ಹುಡುಗ-ಹುಡುಗಿಯರಿಗೆ ಜಗತ್ತು ಸುತ್ತುವ ಆಸೆ ಬಂದುಬಿಟ್ಟಿದೆ. ಕೆಲಸ ಸಿಗುತ್ತಿದ್ದಂತೆ ಒಂದೈದೋ ಹತ್ತೋ ವರ್ಷ ಗೆಳೆಯರೊಂದಿಗೆ ಸೇರಿ ದೇಶ ಸುತ್ತೋಣ ಅಂತ ಹೊರಡುತ್ತಾರೆ. ಅವರಿಗೆ ಮದುವೆಯಾಗುವ ಆಸಕ್ತಿ ಇರೋದಿಲ್ಲ. ಆಮೇಲೆ ಮದುವೆಯ ಆಲೋಚನೆ ಮಾಡುತ್ತಾರೆ. ಇದು ನಾವು ಗಮನಿಸಿರುವ ಟ್ರೆಂಡು. ಇದರಿಂದಾಗಿಯೇ ಪ್ರವಾಸೋದ್ಯಮ ಬೆಳೆದಿರೋದು ಅಂತ ಅವರು ಲೆಕ್ಕಾಚಾರ ಮುಂದಿಟ್ಟರು.

ಮಂಜು ಮುಸುಕಿದ ಊರಿನ ನೆನಪು; ತುಮರಿಯಲ್ಲೊಂದು ವೀಕೆಂಡು!

ಈ ಲೆಕ್ಕಾಚಾರಕ್ಕೆ ಸಮೀಕ್ಷೆಯ ಬೆಂಬಲವಿದೆಯೇ ಕೇಳಿದೆ.

‘ಅಂಥದ್ದೇನೂ ಇಲ್ಲ. ಇದನ್ನು ನಾವು ಟ್ರೆಂಡ್‌ ಅಂತ ಕರೀತೇವೆ. ವರ್ಷದಿಂದ ವರ್ಷಕ್ಕೆ ಇದು ಬದಲಾಗುತ್ತಲೇ ಇರುತ್ತದೆ. ಒಂದು ಉದಾಹರಣೆ ಕೊಡುತ್ತೇನೆ. ಭಾರತದಿಂದ ಆಸ್ಪ್ರೇಲಿಯಾಕ್ಕೆ ಪ್ರವಾಸಕ್ಕೆಂದೇ ಬಂದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಪ್ರತಿಯೊಬ್ಬರು ಆಸ್ಪ್ರೇಲಿಯಾ ಪ್ರವಾಸಕ್ಕೆ ಮಾಡುವ ಅಂದಾಜು ಖರ್ಚು 2,40,000 ರೂಪಾಯಿ. 2019ರಲ್ಲಿ ಜೂನ್‌ ತನಕ ಭಾರತೀಯರು 20.9 ಮಿಲಿಯನ್‌ ರಾತ್ರಿಗಳನ್ನು ಆಸ್ಪ್ರೇಲಿಯಾದಲ್ಲಿ ಕಳೆದಿದ್ದಾರೆ. ಅದು ಕಳೆದ ವರ್ಷಕ್ಕಿಂತ ಶೇಕಡಾ 12ರಷ್ಟೇ ಜಾಸ್ತಿ. ಹೀಗೆ ನಾವು ಲೆಕ್ಕ ಹಾಕುತ್ತಾ ಹೋಗುತ್ತೇವೆ. ಆಸ್ಪ್ರೇಲಿಯಾಕ್ಕೆ ಬರುವ ವಿದೇಶಿ ಪ್ರವಾಸಿಗರ ಪೈಕಿ ಭಾರತಕ್ಕೆ ಆರನೇ ಸ್ಥಾನ. ಹೀಗೆಲ್ಲ ಲೆಕ್ಕ ಹಾಕುತ್ತಾ ಹೋದರೆ ಪ್ರತಿಯೊಂದು ವಿವರಗಳನ್ನೂ ನಾವು ಕಲೆ ಹಾಕುತ್ತೇವೆ’ ಅವರು ವಿವರಿಸುತ್ತಾ ಹೋದರು.

ಅವರ ಪಟ್ಟಿಯಲ್ಲಿ ಇನ್ನೂ ಅನೇಕ ಸಂಗತಿಗಳಿದ್ದವು. ಇವತ್ತು ದುಡಿಯುತ್ತಿರುವ ತರುಣರ ಪೈಕಿ ನೂರರಲ್ಲಿ ಎಂಬತ್ತು ಮಂದಿಗೆ ಉಳಿತಾಯ ಮಾಡುವ ಆಸೆಯೇ ಇಲ್ಲ. ಅವರದೇನಿದ್ದರೂ ದುಡಿ, ಕುಡಿ, ಓಡಾಡಿ ಅನ್ನುವ ಪಾಲಿಸಿ. ನಾವು ದುಡಿಯುವುದೇ ಆನಂದ ಪಡುವುದಕ್ಕೆ ಎಂಬ ಧೋರಣೆ. ತಿಂಗಳಿಗೆ ಒಂದು ಲಕ್ಷ ರುಪಾಯಿ ದುಡಿಯುವ ವ್ಯಕ್ತಿ, ಐದು ವರ್ಷದ ನಂತರವೂ ಒಂದು ಫಿಕ್ಸೆಡ್‌ ಡಿಪಾಜಿಟ್‌ ಹೊಂದಿರುವುದಿಲ್ಲ. ಹಳೆಯ ತಲೆಮಾರಿನ ಕೂಡಿಡುವ ಧೋರಣೆ ಪೂರ್ತಿ ಕಣ್ಮರೆಯಾಗಿದೆ. ಕೂಡಿ ಇಡುವುದರಿಂದ ಲಾಭವಿಲ್ಲ ಎಂದು ಅವರೆಲ್ಲ ಅರ್ಥಮಾಡಿಕೊಂಡಿದ್ದಾರೆ.

ಭೂತದ ಕಟ ಕಾಡುವ ಭಾರತದ 6 ರೈಲು ನಿಲ್ದಾಣಗಳು

ಅವರ ಉದ್ಯೋಗ ಅವರ ಕಷ್ಟದ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ ಎಂಬುದು ಗೊತ್ತಿದೆ. ವೈದ್ಯಕೀಯ ವೆಚ್ಚವನ್ನು ವಿಮಾ ಕಂಪೆನಿ ಭರಿಸುತ್ತದೆ. ಮನೆಗೆ ಸಾಲ ಬ್ಯಾಂಕು ಕೊಡುತ್ತದೆ. ಕಾರು ಬೇಕಿದ್ದರೆ ಕೊಳ್ಳಬಹುದು, ಇಲ್ಲದೇ ಹೋದರೆ ಕಂಪೆನಿಯ ವಾಹನವಿದೆ. ದೂರ ಪ್ರಯಾಣಕ್ಕೆ ಕಾರು ಬಾಡಿಗೆಗೆ ಸಿಗುತ್ತದೆ ಎಂದೆಲ್ಲ ಅವರು ಯೋಚಿಸುತ್ತಾರೆ.

ಆಮೇಲೆ ಏನೇನು ನಿಮ್ಮ ಗಮನಕ್ಕೆ ಬಂದಿದೆ?

ಅವರ ಆಸಕ್ತಿಗಳು ಬದಲಾಗಿವೆ. ಪ್ರವಾಸೋದ್ಯಮವನ್ನು ನಾವೆಲ್ಲ ಎಷ್ಟುಸಮರ್ಥವಾಗಿ ಪ್ರಚಾರ ಮಾಡಿದ್ದೇವೆ ಎಂದರೆ ಅದೊಂದೇ ಸತ್ಯ ಎನ್ನುವ ಭಾವನೆ ಹುಟ್ಟಿಬಿಟ್ಟಿದೆ. ಒಂದು ದಿನ ರಜೆ ಸಿಕ್ಕರೆ ಪ್ರವಾಸ ಹೋಗೋಣ ಅನ್ನುವ ಹುಡುಗರಿದ್ದಾರೆ. ಅಂಥವರ ಸಂಖ್ಯೆ ಸಾಕಷ್ಟುದೊಡ್ಡದಿದೆ. ತಾವಿರುವ ಜಾಗದಲ್ಲಿ ಸಂತೋಷಪಡುವ ಪ್ರವೃತ್ತಿ ಕ್ರಮೇಣ ಕಡಿಮೆಯಾಗುತ್ತಿದೆ. ಅವರ ಪಾಲಿಗೆ ಆಫೀಸು ಜೈಲು, ಮನೆಯೂ ಜೈಲು. ಪರದೇಶವೋ ಪರವೂರೋ ಪರ್ವತಶ್ರೇಣಿಯೋ ಅವರ ಪಾಲಿಗೆ ಸ್ವರ್ಗ.

ಇಂಥ ಭಾವನೆ ಹುಟ್ಟುವುದಕ್ಕೆ ಕಾರಣ ಪ್ರವಾಸೋದ್ಯಮದ ಜಾಹೀರಾತುಗಳು. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಬಂದದ್ದರಿಂದ ಇದು ಹಬ್ಬಲು ಕಾರಣವಾಯಿತು. ಮನೆಯಲ್ಲಿ ಕೂತು ಮತ್ತೊಬ್ಬರು ಏನು ಮಾಡುತ್ತಾರೆ ಅಂತ ಗಮನಿಸುವುದೇ ಶೋಕಿಯಾಗಿರುವ ನಮಗೆ, ಅವರ ಸ್ಟೇಟಸ್ಸಿನಲ್ಲಿ ಮುನ್ನಾರ್‌ ಫೋಟೋ ಒಂದು ಕಾಣಿಸಿಕೊಂಡರೆ ಏನಾಗಬೇಡ? ನಾವು ಯಾವತ್ತೂ ಅಲ್ಲಿಗೆ ಹೋದೇವು? ಯಾವತ್ತೂ ನಮ್ಮ ಫೋಟೋವನ್ನು ಅಪ್‌ಲೋಡ್‌ ಮಾಡಿಯೇವು ಎಂದು ಕಾಯಲು ಶುರುಮಾಡುತ್ತೇವೆ. ಈಗ ಮೋಸ್ಟ್‌ ಎಕ್ಸೈಟೆಡ್‌ ಹಾಬಿ ಎಂದರೆ ಸೋಷಲ್‌ ವಿಸಿಬಿಲಿಟಿ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು. ಅದರಾಚೆಗೆ ಏನೂ ಇಲ್ಲ.

ಅವರ ಬಳಿ ಮತ್ತೊಂದಷ್ಟುಮಾಹಿತಿಗಳೂ ಇದ್ದವು. ಯಾರು ಯಾವ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಏರ್‌ಪೋರ್ಟಿನಲ್ಲಿ ಏನು ಮಾಡುತ್ತಾರೆ? ಗಂಡು ಹೆಣ್ಣಿನ ಆಕರ್ಷಣೆ ಹೇಗೆ ಕುಗ್ಗುತ್ತಿದೆ. ಅದಕ್ಕಿಂತ ಆಘಾತಕಾರಿಯಾದ ಮತ್ತೊಂದು ವಿವರ ಮುಂದಿಟ್ಟರು.

ಪಟ್ಟಾಯದಂಥ ಸೆಕ್ಸ್‌ ಟೂರಿಸಮ್‌ ಜನಪ್ರಿಯವಾಗುವ ದೇಶಗಳಿಗೆ ಹೋಗುವವರ ಪೈಕಿ ಮಧ್ಯವಯಸ್ಕರೇ ಜಾಸ್ತಿ. ಯುವಕರೂ ಯುವತಿಯರೂ ಅದನ್ನು ಇಷ್ಟಪಡುವುದಿಲ್ಲ. ಅವರ ಜನಪ್ರಿಯ ಪ್ರವಾಸಿ ತಾಣ ಕೊಂಚ ರಿಸ್ಕ್‌ ಇರುವ, ಯಾರೂ ಹೋಗದಂಥ, ಕ‚ಡಿಮೆ ಜನಸಂಖ್ಯೆ ಇರುವಂಥ ಜಾಗಗಳು. ಉದಾಹರಣೆಗೆ ಇಸ್ತಾಂಬುಲ್‌. ಅಲ್ಲಿಗೆ ಅವರೆಲ್ಲ ಯಾಕೆ ಹೋಗುತ್ತಾರೋ ನನಗಂತೂ ಗೊತ್ತಿಲ್ಲ. ಆದರೆ ಅಂಥ ಜಾಗಗಳಿಗೇ ಬೇಡಿಕೆ ಜಾಸ್ತಿ.

ನಾವು ಮೌನವಾಗಿದ್ದದ್ದು ನೋಡಿ ಅವರೇ ನಿಟ್ಟುಸಿರಿಟ್ಟು ಮುಂದುವರಿಸಿದರು.

ಯಾರಿಗೂ ತಾವು ತಿನ್ನುವ ಆಹಾರ ಬೇಕಾಗಿಲ್ಲ. ಬೇರೆ ದೇಶದ ತಿನಿಸುಗಳ ಮೇಲೆ ಮೋಹ ಹುಟ್ಟಿಬಿಟ್ಟಿದೆ. ದೊಡ್ಡ ದೊಡ್ಡ ಹೋಟೆಲುಗಳ ಮೇಲಿರುವ ಮೋಹ ಹೋಗಿಬಿಟ್ಟಿದೆ. ಸ್ಟ್ರೀಟ್‌ ಫುಡ್‌ ಅಂದರೆ ಪ್ರಾಣ. ಯಂತ್ರಗಳಲ್ಲಿ ತಯಾರಾದ ಆಹಾರಗಳಿಗಿಂತ ಕೈಯಡುಗೆ ಮೇಲೆ ಮೋಹ ಬಂದುಬಿಟ್ಟಿದೆ. ಮೊದಲೆಲ್ಲ ಎಲ್ಲರಿಗೂ ಪಂಚತಾರಾ ಹೋಟೆಲುಗಳ ಬಗ್ಗೆ ಮೋಹವಿತ್ತು. ಈಗ ಗುಡಿಸಲುಗಳ ಕಡೆಗೆ ಹೋಗುತ್ತಿದ್ದಾನೆ.

ನನ್ನ ಪ್ರಕಾರ ಮನುಷ್ಯ ಮತ್ತೆ ಅಲೆಮಾರಿಯಾಗಲು ಹೊರಟಿದ್ದಾನೆ. ಜಿಪ್ಸಿಯಂತೆ ಬಾಳುವುದು ಅವನಿಗೆ ಇಷ್ಟವಾಗುತ್ತಿದೆ. ಶ್ರೀಲಂಕಾದಲ್ಲೊಂದು ರೆಸಾರ್ಟ್‌ ಇದೆ. ಅಲ್ಲಿಗೆ ಮೊಬೈಲ್‌ ಒಯ್ಯುವಂತಿಲ್ಲ. ಹಾಗೇನಾದರೂ ಮಾಡಿದರೆ ಯಾರೂ ಬರೋದಿಲ್ಲ ಅಂದುಕೊಂಡಿದ್ದೆವು. ಆದರೆ ಅಲ್ಲಿಗೆ ಜನ ಕಿಕ್ಕಿರಿದು ನುಗ್ಗುತ್ತಾರೆ. ಅದೇ ಹತ್ತು ವರ್ಷಗಳ ಹಿಂದೆ, ನೆಟ್‌ವರ್ಕ್ ಸಿಗುತ್ತೋ ಅಂತ ಕೇಳುತ್ತಿದ್ದರು. ಈಗ ಸಿಗೋಲ್ಲ ತಾನೇ ಅಂತ ಕೇಳುತ್ತಿದ್ದಾರೆ.

ಈ ಟ್ರೆಂಡುಗಳಿಂದ ನಿಮಗೇನು ಲಾಭ ?- ಕೇಳಿದೆವು.

ಅದರ ಪ್ರಕಾರ ನಾವು ನಮ್ಮ ಪ್ರವಾಸೋದ್ಯಮವನ್ನು ಬದಲಾಯಿಸಿಕೊಳ್ಳುತ್ತಿರುತ್ತೇವೆ. ಕಳೆದ ವರ್ಷಕ್ಕಿಂತ ಶೇ. 12ರಷ್ಟುಹೆಚ್ಚು ಮಂದಿ ಈ ವರ್ಷ ಆಸ್ಪ್ರೇಲಿಯಾಕ್ಕೆ ಬರುತ್ತಾರೆ. ನೀವೇನೋ ಆರ್ಥಿಕ ಹಿಂಜರಿತ, ಉದ್ಯೋಗ ಕುಸಿತ ಅಂತ ಹೇಳುತ್ತೀರಿ. ಆದರೆ ಅದ್ಯಾವುದೂ ಪ್ರವಾಸೋದ್ಯಮವನ್ನು ಒಂಚೂರೂ ಅಲ್ಲಾಡಿಸಿಲ್ಲ ಅಂತ ಅವರು ನಕ್ಕರು.

- ನೈನಾ ಆರ್ ಕಣ್ಣನ್ 

click me!