ಬಂಗಾರಪೇಟೆಯಿಂದ ಯಲಹಂಕಕ್ಕೆ ಹೊಸ ರೈಲು

By Kannadaprabha NewsFirst Published Oct 16, 2019, 8:23 AM IST
Highlights

ಕೋಲಾರದ ಬಂಗಾರಪೇಟೆ ಹಾಗೂ ಯಲಹಂಕ ನಡುವೆ ನೂತನ ರೈಲು ಸಂಚಾರ ಮಾಡಲಿದೆ. ಇದಕ್ಕೆ ಮಾರ್ಗ ಪರಿಶೀಲನಾ ಪ್ರಕ್ರಿಯೆಯೂ ಕೂಡ ನಡೆಯುತ್ತಿದೆ. 

ಕೋಲಾರ [ಅ.16]:  ಕೋಲಾರ ಜಿಲ್ಲೆಯ ಜನರ ಅನುಕೂಲಕ್ಕಾಗಿ ಬಂಗಾರಪೇಟೆಯಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಯಲಹಂಕಕ್ಕೆ ಹೊಸ ರೈಲು ಬಿಡಲಾಗುವುದು ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ಬೆಂಗಳೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ವೇಳೆ ಜಿಲ್ಲೆಗೆ ರೈಲ್ವೆ ಇಲಾಖೆಯಿಂದ ಆಗಬೇಕಾದ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸುವಾಗ ಜಿಲ್ಲೆಗೆ ಹೊಸ ರೈಲು ಕೊಡಬೇಕೆಂದು ಕೋರಲಾಗಿದೆ ಎಂದು ಅವರು ತಿಳಿಸಿದರು.

ಇಂದು ಮಾರ್ಗ ಪರಿಶೀಲನೆ

ಜಿಲ್ಲೆಯಲ್ಲಿ ರೈಲು ನಿಲ್ದಾಣಗಳು ಮತ್ತು ಮಾರ್ಗದಲ್ಲಿರುವ ಅನೇಕ ಸಮಸ್ಯೆಗಳನ್ನು ತಿಳಿಯಲು ರೈಲ್ವೆ ಇಲಾಖೆಯ ಜನರಲ್‌ ಮ್ಯಾನೇಜರ್‌, ಡೆಪ್ಯುಟಿ ಮ್ಯಾನೇಜರ್‌ ಮತ್ತಿತರ ಅಧಿಕಾರಿಗಳೊಂದಿಗೆ ಬುಧವಾರ ಮಾರ್ಗ ಪರಿಶೀಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅ.16 ರಂದು ಬೆಳಿಗ್ಗೆ 9.50 ಗಂಟೆಗೆ ವೈಟ್‌ಫೀಲ್ಡ್‌ನಿಂದ ರೈಲಿನಲ್ಲಿ ಅಧಿಕಾರಿಗಳೊಂದಿಗೆ ಪ್ರಯಾಣ ಬೆಳೆಸುವರು. ನಂತರ ಮಾಲೂರು, ಟೇಕಲ್‌, ಮರಾಲಾಹಳ್ಳಿ, ಬಂಗಾರಪೇಟೆ, ಚಾಂಫಿಯನ್‌ ರೀಫ್‌, ಉರಿಗಾಂ ಸ್ಟೇಷನ್‌, ಮಾರಿಕುಪ್ಪಂ, ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ ಹಾಗೂ ಶಿಡ್ಲಘಟ್ಟರೈಲ್ವೆ ನಿಲ್ಧಾಣಗಳಲ್ಲಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದರು.

ರೈಲು ನಿಲ್ದಾಣದಲ್ಲಿ ಸೌಲಭ್ಯ

ಮಾರ್ಗದ ಉದ್ಧಕ್ಕೂ ಪರಿಶೀಲನೆ ನಡೆಸಲಾಗುವುದು, ಎಲ್ಲೇಲ್ಲಿ ಸಮಸ್ಯೆ ಇದೆ ಎನ್ನುವುದನ್ನು ತಿಳಿದುಕೊಂಡು ರೈಲ್ವ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಜಿಲ್ಲೆಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ, ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ, ರೈಲ್ವೆ ಅಂಡರ್‌ ಪಾಸ್‌ನಲ್ಲಿ ನೀರು ನಿಲ್ಲುವುದು ಸೇರಿದಂತೆ ಅನೇಕ ಸಮಸ್ಯೆಗಳಿವೆ ಅವುಗಳನ್ನು ಪರಿಹರಿಸಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೋಲಾರ, ಶ್ರೀನಿವಾಸಪುರ ಸೇರಿದಂತೆ ಹಲವು ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಸಮಸ್ಯೆ ಇದೆ, ನೀರಿನ ಸಮಸ್ಯೆಗಳಿಂದಾಗಿ ಶೌಚಾಲಯಗಳನ್ನು ನಿರ್ಮಿಸಿದರೂ ಅವುಗಳಿಗೆ ಬೀಗ ಹಾಕಲಾಗಿದೆ ಇದನ್ನು ಗಮನಿಸಿ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಂಡರ್‌ಪಾಸ್‌ಗಳ ಪರಿಶೀಲನೆ

ಬಂಗಾರಪೇಟೆಯಿಂದ ಕೋಲಾರ, ಶ್ರೀನಿವಾಸಪುರ ಮುಂತಾಗಿ ಮಾರ್ಗದ ಮಧ್ಯೆ ನಿರ್ಮಿಸಿರುವ ಅಂಡರ್‌ ಪಾಸ್‌ಗಳನ್ನೂ ಪರಿಶೀಲನೆ ನಡೆಸಲಾಗುವುದು ಕೋಲಾರದ ಕೆಲವು ಭಾಗಗಳಲ್ಲಿ ನಿರ್ಮಿಸಿರುವ ಅಂಡರ್‌ಪಾಸ್‌ಗಳಲ್ಲಿ ಮಳೆಯ ನೀರು ಸಂಗ್ರಹವಾಗಿ ಅದು ಹೊರಗೆ ಹೋಗಲು ಅವಕಾಶ ಇಲ್ಲದೆ ಇರುವುದರಿಂದ ನೀರು ನಿಂತು ಅಲ್ಲಿ ಓಡಾಡುವವರಿಗೆ ತೊಂದರೆ ಆಗುತ್ತಿದೆ. ಇಂತಹ ದೂರುಗಳು ಸಾಕಷ್ಟುಇವೆ ಅವುಗಳನ್ನು ಗಂಭೀರವಾಗಿ ತೆಗೆದುಕೊಂಡು ಅಂಡರ್‌ ಪಾಸ್‌ಗಳಲ್ಲಿ ನೀರು ನಿಲ್ಲದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ರೈಲು ನಿಲ್ದಾಣಗಳಲ್ಲಿ ಹೈಮಾಸ್ಟ್‌ ಲೈಟ್‌ಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಿರುವುದೂ ಗಮನಕ್ಕೆ ಬಂದಿದೆ ಅವುಗಳಿಗೂ ವಿದ್ಯುತ್‌ ಸಂಪರ್ಕ ಒದಗಿಸಲು ಸೂಚಿಸಲಾಗುವುದು ಎಂದರು. ಬಂಗಾರಪೇಟೆಯಿಂದ ಯಲಹಂಕದವರೆಗೆ ರೈಲ್ವೆ ಮಾರ್ಗದಲ್ಲಿ ಸಾಕಷ್ಟುನ್ಯೂನ್ಯತೆಗಳು ಇವೆ ಇವುಗಳನ್ನು ಸರಿಪಡಿಸಲು ಹಿಂದಿನ ಸಂಸದರು ಆಸಕ್ತಿ ತೋರಲಿಲ್ಲ, ರೈಲ್ವೆ ಅಂಡರ್‌ ಪಾಸ್‌ಗಳಲ್ಲಿ ನೀರು ನಿಂತು ಜನರು ಮತ್ತು ವಾಹನಗಳ ಓಡಾಟಕ್ಕೆ ತೊಂದರೆ ಇದ್ದರೂ ಕೇಳುವವರಿರಲಿಲ್ಲ. ಈ ಎಲ್ಲ ಸಮಸ್ಯೆಗಳನ್ನು ತಿಳಿದು ಶೀಘ್ರ ಬಗೆಹರಿಸಲು ಅಧಿಕಾರಿಗಳನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ ಎಂದರು.

click me!