
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕರುಳು ಹಿಂಡುವ ಘಟನೆ ನಡೆದಿದ್ದು, ಮಗು ಬಿಟ್ಟು 19 ವರ್ಷದ ತಾಯಿ ಪರಾರಿಯಾಗಿದ್ದಾಳೆ. ಹೆರಿಗೆ ಬಳಿಕ ಟೀ ಕುಡಿದು ಬರುವೆ ಎಂದು ಹೇಳಿದ ಯುವತಿ ಮತ್ತೆ ಹಿಂದಿರುಗಿ ಬಂದಿಲ್ಲ. ಕೋಲಾರದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಸ್ಪತ್ರೆ ವೈದ್ಯರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. 19 ವರ್ಷದ ಯುವತಿ ನಿನ್ನೆ ಸಂಜೆ ಜಿಲ್ಲಾಸ್ಪತ್ರೆಗೆ ಬಂದಿದ್ದು, ತನ್ನ ಹೆಸರು ಮೌನಿಕಾ ಎಂದು ಹೇಳಿ ದಾಖಲಾಗಿದ್ದಾಳೆ. ಸಂಬಂಧಿಕರ ಮದುವೆಗೆ ಬಂದಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಳು. ಈ ವೇಳೆ ಯುವತಿಯೊಂದಿಗೆ ಓರ್ವ ವೃದ್ಧೆಯೂ ಸಹ ಬಂದಿದ್ದಳು.
ಆಸ್ಪತ್ರೆಗೆ ದಾಖಲಾಗುವ ತನ್ನೂರು ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರ, ಗಂಡನ ಹೆಸರು ಶ್ರೀನಿವಾಸ್ ಮತ್ತು ಮೊಬೈಲ್ ನಂಬರ್ ಸಹ ನೀಡಿದ್ದಳು. ತುರ್ತು ಹೆರಿಗೆ ಇದ್ದಿದರಿಂದ ಮಾನವೀಯತೆ ದೃಷ್ಟಿಯಲ್ಲಿ ಡಾಕ್ಟರ್ ಶಾಂತ ಹೆರಿಗೆ ಮಾಡಿಸಿದ್ದರು.ರಾತ್ರಿ ಹೆರಿಗೆಯಾಗಿದ್ದು ಮಹಿಳೆಗೆ ಹೆಣ್ಣು ಮಗು ಜನನವಾಗಿದೆ. ಇಂದು ಬೆಳಗ್ಗೆ ಟೀ ಕುಡಿಯೋದಾಗಿ ಹೇಳಿ ಆಸ್ಪತ್ರೆಯಿಂದ ಹೊರ ಬಂದ ಮಹಿಳೆ ಮತ್ತು ವೃದ್ಧೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ
ಸುಳ್ಳು ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲು
ಮಗುವಿನ ತಾಯಿ ಮತ್ತು ಆ ವೃದ್ಧೆ ಕಾಣಿಸದಿದ್ದಾಗ ಆಕೆ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದು ತಪ್ಪಾದ ನಂಬರ್ ಎಂದು ಗೊತ್ತಾಗಿದೆ. ನವಜಾತಶಿಶು 1.5 ಕೆಜಿ ತೂಕ ಹೊಂದಿರೋದರಿಂದ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತದೆ. ಸದ್ಯ ಆಸ್ಪತ್ರೆಯುಲ್ಲಿರುವ ಬೇರೆ ಬಾಣಂತಿಯರ ಎದೆ ಹಾಲು ಕುಡಿಸಿ ಮಗುವನ್ನು ನೋಡಿಕೊಳ್ಳಲಾಗುತ್ತಿದೆ. ತಾಯಿಯ ಮಡಿಲು ಸಿಗದ ಕಂದಮ್ಮನ ನರಳಾಟ ಕಂಡು ಆಸ್ಪತ್ರೆಯಲ್ಲಿರುವ ಜನರು ಭಾವುಕರಾಗುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಶೇ.99ರಷ್ಟು ಮಕ್ಕಳಿಗೆ ಮೊಬೈಲ್ ಗೀಳು
ಡಾ. ಜಗದೀಶ್ ಬೇಜವಾಬ್ದಾರಿ ಉತ್ತರ
ಸಿಸಿಟಿವಿ ಆಧರಿಸಿ ಕ್ರೂರ ತಾಯಿಗಾಗಿ ಕೋಲಾರ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾಸ್ಪತ್ರೆಯ ಸಿಬ್ಬಂದಿ, ಸೆಕ್ಯೂರಿಟಿ ವೈಫಲ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಗುವಿನ ತಾಯಿಗೆ ಟೀ ಕುಡಿಯುಲು ಅನುಮತಿ ನೀಡಿದ್ಯಾರು ಪ್ರಶ್ನೆಗೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಬಳಿ ಉತ್ತರವಿಲ್ಲ. ಆಕೆ ಟೀ ಕುಡಿದು ಬರ್ತೀನಿ ಅಂತ ಹೋದ್ರೆ ನಾವೇನು ಮಾಡೋಕೆ ಆಗುತ್ತೆ ಅಂತ ಜಿಲ್ಲಾ ಸರ್ಜನ್ ಡಾ. ಜಗದೀಶ್ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಮಗು ಅರೋಗ್ಯವಾಗಿದೆ,ಬೇರೆಯವರ ಎದೆ ಹಾಲು ಕೊಡ್ತಿದ್ದೇವೆ ಎಂದು ಮಕ್ಕಳ ವೈದ್ಯ ಡಾ. ಕಮಲಾಕಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ವಾರವಷ್ಟೇ ಕೋಲಾರ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ಕೆಜಿಎಫ್ ಮೂಲದ ದಂಪತಿ ಮಗು ಬಿಟ್ಟು ಎಸ್ಕೇಪ್ ಆಗಿದ್ದರು. ರಮೇಶ್ ಎಂಬಾತ ಸುಳ್ಳು ಮಾಹಿತಿ ನೀಡಿ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಮಗು ಬೇಡ ಎಂದು ತಾಯಿಯೇ ಬಿಟ್ಟು ಹೋಗಿರೋದು ತಿಳಿದು ಬಂದಿತ್ತು. ನಂತರ ಆ ಮಗುವನ್ನು ಜಿಲ್ಲಾಸ್ಪತ್ರೆಯ ಮಕ್ಕಳ ಘಟಕಕ್ಕೆ ವರ್ಗಾಯಿಸಲಾಗಿತ್ತು.
ಸಾರ್ವಜನಿಕರ ಆಕ್ರೋಶ
ಏನೇ ನಡೆದರೂ, ಯಾರೇ ಬಂದು ಹೋದರು ಹೇಳೋರು, ಕೇಳೋರು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಇಲ್ಲ.ಆಗ ತಾನೇ ಹೆರಿಗೆ ಆಗಿರುವ ಮಹಿಳೆಯನ್ನು ವಾರ್ಡ್ ನಿಂದ ಹೊರಗೆ ಕಳುಹಿಸಿದ್ದು ಯಾರು? ಮಗು,ತಾಯಿ,ಸಂಬಂಧಿಕರಿಗೆ ಕನಿಷ್ಠ ಐಡಿ ಕಾರ್ಡ್ ಸಹ ನೀಡಿಲ್ಲ ಎಂದು ಜಿಲ್ಲಾಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ಜೀವಂತ ತಾಯಿಯ ಮರಣ ಪ್ರಮಾಣಪತ್ರ ಪಡೆದ ಪುತ್ರ: ದೂರು ದಾಖಲು