ಕೊರೋನಾತಂಕ: ಹುಲಿಗೆಮ್ಮಾ ದೇವಸ್ಥಾನ ತೆರೆಯದಿರಲು ಆಗ್ರಹ

By Kannadaprabha NewsFirst Published Jun 1, 2020, 8:11 AM IST
Highlights

ಹುಲಿಗೆಮ್ಮಾ ದೇವಸ್ಥಾನಕ್ಕೆ ನಾಡಿನ ಭಕ್ತರು ಎಷ್ಟು ಇದ್ದಾರೋ ಅಷ್ಟೇ ಭಕ್ತರು ನೆರೆಯ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ| ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ಹರಡುವುದಕ್ಕೆ ಕಾರಣವಾಗಬಹುದು| ಜಿಲ್ಲೆಯಲ್ಲಿ ಇದುವರೆಗೂ ಇರುವುದು ಕೇವಲ ಮೂವರು ಮಾತ್ರ. ಅದು ಮಹಾರಾಷ್ಟ್ರದಿಂದಲೇ ಬಂದವರೇ ಆಗಿದ್ದಾರೆ| ಮಹಾರಾಷ್ಟ್ರದಿಂದ ಅತ್ಯಧಿಕ ಭಕ್ತರ ಆಗಮನ|

ಕೊಪ್ಪಳ(ಜೂ.01): ಸುಪ್ರಸಿದ್ಧ ಹುಲಿಗೆಮ್ಮಾ ದೇವಸ್ಥಾವನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಇದು ಅತ್ಯಂತ ಆತಂಕಕ್ಕೆ ಕಾರಣವಾಗುತ್ತದೆ. ಅದರಲ್ಲೂ ಮಹಾರಾಷ್ಟ್ರ ಭಕ್ತರೇ ಅಧಿಕ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸದ್ಯಕ್ಕೆ ಹುಲಿಗೆಮ್ಮಾ ದೇವಸ್ಥಾನವನ್ನು ತೆರೆಯದಿರುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ದನ್‌ ಆಗ್ರಹಿಸಿದ್ದಾರೆ.

ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವ ಅವರು, ಇದೊಂದು ಗಂಭೀರ ವಿಷಯವೆಂದು ಪರಿಗಣಿಸಿ, ಇತ್ಯರ್ಥ ಮಾಡುವಂತೆ ಒತ್ತಾಯಿಸಿದ್ದಾರೆ.
ಹುಲಿಗೆಮ್ಮಾ ದೇವಸ್ಥಾನಕ್ಕೆ ನಾಡಿನ ಭಕ್ತರು ಎಷ್ಟುಇದ್ದಾರೋ ಅಷ್ಟೇ ಭಕ್ತರು ನೆರೆಯ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ, ಜಿಲ್ಲೆಯಲ್ಲಿ ಕೊರೋನಾ ಹರಡುವುದಕ್ಕೆ ಕಾರಣವಾಗುತ್ತದೆ.

ಡಿ.ಕೆ. ಶಿವಕುಮಾರ ಅಧಿ​ಕಾರ ಸ್ವೀಕ​ರಿ​ಸುವ ಕಾರ್ಯ​ಕ್ರಮ ಅನ್‌ಲೈನ್‌ನಲ್ಲಿ ನೇರ ಪ್ರಸಾ​ರ

ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಇರುವುದು ಕೇವಲ ಮೂವರು ಮಾತ್ರ. ಅದು ಮಹಾರಾಷ್ಟ್ರದಿಂದಲೇ ಬಂದವರೇ ಆಗಿದ್ದಾರೆ. ಹೀಗಾಗಿ, ಈಗ ಹುಲಿಗೆಮ್ಮಾ ದೇವಸ್ಥಾನ ಪ್ರಾರಂಭಿಸಿ, ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿದರೇ ಇಷ್ಟುದಿನ ಕಾಯ್ದುಕೊಂಡು ಬಂದಿದ್ದು ಹಾಳಾಗಿ ಹೋಗುವ ಸಾಧ್ಯತೆ ಇದೆ. ಸರ್ಕಾರ ದೇವಸ್ಥಾನ ತೆರೆಯದಿರುವುದೇ ಒಳಿತು. ಹಾಗೊಂದು ವೇಳೆ ತೆರೆಯಲೇ ಬೇಕಾಗಿದ್ದರೇ ಕೇವಲ ನಾಡಿನ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕು. ಮಹಾರಾಷ್ಟ್ರದಿಂದ ಆಗಮನಕ್ಕೆ ಅವಕಾಶ ನೀಡಬಾರದು. ಇದು ಕಷ್ಟಸಾಧ್ಯವಾಗುತ್ತದೆ. ಗುಡಿಗೆ ಬಂದ ಮೇಲೆ ಎಲ್ಲಿಂದ ಬಂದವರು ಎಂದು ತಪಸಾಣೆ ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ,ಹುಲಿಗೆಮ್ಮಾ ದೇವಸ್ಥಾನವನ್ನೇ ಇನ್ನು ಕೆಲ ದಿನಗಳ ಕಾಲ ತೆರೆಯದಿರುವುದೇ ಉತ್ತಮ.

ಗ್ರಾಮ ಪಂಚಾಯಿತಿ ಚಿಂತನೆ

ಹುಲಿಗೆಮ್ಮಾ ದೇವಸ್ಥಾನ ತೆರೆಯುವುದಕ್ಕೆ ಸರ್ಕಾರ ತೀರ್ಮಾನ ಮಾಡಿದ್ದೆ ಆದರೆ ಸ್ಥಳೀಯವಾಗಿ ಇದನ್ನು ತೆರೆಯದಿರಲು ಗ್ರಾಮ ಪಂಚಾಯಿತಿಯಲ್ಲಿಯೇ ತೀರ್ಮಾನ ನಡೆಸುವ ಚಿಂತನೆಯೂ ನಡೆದಿದೆ. ಈ ಕುರಿತು ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಲಾಗಿದೆ.

ಸರ್ಕಾರ ಅನುಮತಿ ನೀಡಿದರ ಸ್ಥಳೀಯವಾಗಿಯಾದರೂ ಗ್ರಾಮ ಪಂಚಾಯಿತಿಯಲ್ಲಿ ತೀರ್ಮಾನ ಮಾಡಿ, ತಡೆ ಹಿಡಿಯಬಹುದೇ ಎನ್ನುವ ಚರ್ಚೆ ನಡೆದಿದೆ. ಈ ಕುರಿತು ಸೋಮವಾರ ವಿಶೇಷ ಸಭೆಯನ್ನು ನಡೆಸಿ, ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುವ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
 

click me!