Selfie Tragedy| ಸೆಲ್ಫಿ ತೆಗೆಯುವಾಗ ರೈಲಿಂದ ಬಿದ್ದು ಯುವಕ ಸಾವು

Kannadaprabha News   | Asianet News
Published : Nov 19, 2021, 10:47 AM IST
Selfie Tragedy| ಸೆಲ್ಫಿ ತೆಗೆಯುವಾಗ ರೈಲಿಂದ ಬಿದ್ದು ಯುವಕ ಸಾವು

ಸಾರಾಂಶ

*  ಸ್ನೇಹಿತರ ಜತೆ ಊರಿಗೆ ಹೋಗುವಾಗ ದುರ್ಘಟನೆ *  ಪೋಷಕರು ನಾಪತ್ತೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ *  ಆಯತಪ್ಪಿ ನದಿಗೆ ಬಿದ್ದು ಸಾವು   

ಬೆಂಗಳೂರು(ನ.19):  ಇತ್ತೀಚಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಬೆಂಗಳೂರಿನ(Bengaluru) ಗಾಂಧಿನಗರದಲ್ಲಿನ ಬಾರ್‌ ಕೆಲಸಗಾರನ ಮೃತದೇಹ(Deadbody) ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಸಮೀಪ ರೈಲ್ವೆ ಸೇತುವೆ ಬಳಿ ಪತ್ತೆಯಾಗಿದ್ದು, ಚಲಿಸುವ ರೈಲಿನ ಬಾಗಿಲಿನಲ್ಲಿ ಸೆಲ್ಫಿ(Selfie) ಕ್ಲಿಕ್ಕಿಸಲು ಹೋಗಿ ಆಯ ತಪ್ಪಿ ನದಿಗೆ ಬಿದ್ದು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಅಣ್ಣೆಚಕ್ಕನಹಳ್ಳಿಯ ಅಭಿಷೇಕ್‌(19) ಮೃತ ದುರ್ದೈವಿ. ತನ್ನೂರಿಗೆ ಗೆಳೆಯರ ಜತೆ ಅಭಿಷೇಕ್‌ ತೆರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು(Police) ಹೇಳಿದ್ದಾರೆ.

ಮೃತ ಅಭಿಷೇಕ್‌, ಮೂರು ತಿಂಗಳಿಂದ ಗಾಂಧಿನಗರದ ಸ್ಕೈ ಎವನ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ(Sky Even Bar and Restaurant) ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ನ.8ರಂದು ಆತನ ಊರಿನಲ್ಲಿ ಅಂಕಲಿಂಗೇಶ್ವರ ದೇವಾಲಯದ ಶಂಕುಸ್ಥಾಪನಾ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ತನ್ನ ಸ್ನೇಹಿತರೆನ್ನೆಲ್ಲ ಆಹ್ವಾನಿಸಿದ್ದ ಆತ, ನ.6ರಂದು ತನ್ನ ಸೋದರಿಗೆ ಕರೆ ಮಾಡಿ ಗೆಳೆಯರೊಟ್ಟಿಗೆ ಊರಿಗೆ ಬರುತ್ತಿರುವುದಾಗಿ ಸಹ ತಿಳಿಸಿದ್ದ. ಅಂತೆಯೇ ಬಾರ್‌ನಲ್ಲಿ ರಜೆ ಪಡೆದು ಗೆಳೆಯರ ಜತೆ ಸಂಗೊಳ್ಳಿ ರೈಲ್ವೆ ನಿಲ್ದಾಣದಲ್ಲಿ ಊರಿಗೆ ಹೋಗಲು ರಾತ್ರಿ ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ(Mysuru Express) ಹೊರಟ್ಟಿದ್ದ. ನಸುಕಿನ ಎರಡು ಗಂಟೆ ಸುಮಾರಿಗೆ ಫುಟ್‌ಬೋರ್ಡ್‌ ಮೇಲೆ ನಿಂತು ಸ್ನೇಹಿತರು ಸೆಲ್ಫಿ ಕ್ಲಿಕ್ಕಿಸುತ್ತಿದ್ದರು.

ಸೆಲ್ಫಿಗಾಗಿ ಪ್ರಾಣ ಕಳೆದು ಕೊಂಡ ಹಾಂಗ್ ಕಾಂಗ್ ಮಾಡೆಲ್!

ಆಯತಪ್ಪಿ ನದಿಗೆ ಬಿದ್ದ ಅಭಿಷೇಕ್‌:

ಆಗ ಆಯ ತಪ್ಪಿ ಅಭಿಷೇಕ್‌ ಕೆಳಗೆ ಬಿದ್ದಿದ್ದಾನೆ. ಅನಿರೀಕ್ಷಿತ ಘಟನೆಯಿಂದ ಆತಂಕಗೊಂಡ ಮೃತನ ಸ್ನೇಹಿತರು, ಪಾಂಡವಪುರ ರೈಲ್ವೆ(Railway Station) ನಿಲ್ದಾಣದಲ್ಲಿಳಿದು ಗೆಳೆಯನಿಗೆ ಹುಡುಕಾಟ ನಡೆಸಿದ್ದರೂ ಸಿಗದೆ ಬೆಂಗಳೂರಿಗೆ ಮರಳಿದ್ದರು. ಅತ್ತ ಮನೆಗೆ ಬರುತ್ತೇನೆ ಎಂದ ಮಗ ಮನೆಗೆ ಬಾರದೆ ಹೋದಾಗ ಆತಂಕಗೊಂಡ ಮೃತನ ಪೋಷಕರು, ಮಗನಿಗೆ ನಿರಂತರವಾಗಿ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಬೆಂಗಳೂರಿಗೆ ಬಂದು ಮಗ ಕೆಲಸ ಮಾಡುತ್ತಿದ್ದ ಬಾರ್‌ನಲ್ಲಿ ವಿಚಾರಿಸಿದಾಗ ಊರಿಗೆ ಹೋಗಿದ್ದವನು ಬಂದಿಲ್ಲ ಎಂದಿದ್ದಾರೆ.

5 ದಿನ ಹುಡುಕಾಟದ ಬಳಿಕ ಮೃತದೇಹ ಪತ್ತೆ:

ನ.8ಕ್ಕೆ ಉಪ್ಪಾರಪೇಟೆ ಠಾಣೆಗೆ ಮೃತನ ಪೋಷಕರು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ನ.9ರಂದು ಅಭಿಷೇಕ್‌ ಜತೆಯಲ್ಲಿದ್ದ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದಾಗ ನಡೆಸಿದಾಗ ರೈಲಿನಿಂದ ಬಿದ್ದ ಸಂಗತಿ ಗೊತ್ತಾಗಿದೆ. ಮರುದಿನ ಅಭಿಷೇಕ್‌ ಸ್ನೇಹಿತರನ್ನು ಕರೆದುಕೊಂಡು ಸ್ಥಳಕ್ಕೆ ತೆರಳಿದ ಉಪ್ಪಾರಪೇಟೆ ಪೊಲೀಸರು, ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮೀನುಗಾರರ ನೆರವು ಪಡೆದು ಐದು ದಿನಗಳ ಕಾಲ ಹುಡುಕಾಟ ನಡೆಸಿದಾಗ ಶ್ರೀರಂಗಪಟ್ಟಣ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

ಸೇತುವೆ ಕಂಬಿ ತಾಕಿ ಕೆಳಗೆ ಬಿದ್ದ

ರೈಲಿನ ಫುಟ್‌ ಬೋರ್ಡ್‌ನಲ್ಲಿ ನಿಂತು ಒಂದು ಕೈಯಲ್ಲಿ ಬಾಗಿಲ ಕಂಬಿ ಹಿಡಿದು, ದೇಹವನ್ನು ಹೊರಗೆ ಬಾಗಿಸಿ ಸೆಲ್ಫಿ ತೆಗೆಯುವ ವೇಳೆ ಅಭಿಷೇಕ್‌ಗೆ ಸೇತುವೆ ಕಂಬಿ ಬಡಿದಿದೆ. ಆಗ ಪೆಟ್ಟಾಗಿ ಆತ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Bengaluru| ಏರ್‌ಪೋರ್ಟ್‌ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ: ಮೂವರ ದುರ್ಮರಣ

ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್‌ ಡಿಕ್ಕಿ: ಇಬ್ಬರ ಸಾವು

ಮೇಲ್ಸೇತುವೆ(Flyover) ಮೇಲೆ ಕಾರಿನ ಮುಂದೆ ಸೆಲ್ಫಿ(Selfie) ತೆಗೆದುಕೊಳ್ಳುವ ವೇಳೆ ಹಾಲಿನ ಕ್ಯಾಂಟರ್‌ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟು(Death), ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ತಾವರೆಕೆರೆ ಮೇಲ್ಸೇತುವೆ ಮೇಲೆ ನ.12 ರಂದು ನಡೆದಿತ್ತು.

ದಿನೇಶ್‌(25), ವಿನಯ್‌(25) ಮೃತರು. ಉಳಿದಂತೆ ಜನಾರ್ದನ್‌ ಹಾಗೂ ಜಾಸ್ಮಿನ್‌ ಗಂಭೀರ ಗಾಯಗೊಂಡಿದ್ದರು. ಮೂಲತಃ ಬೆಂಗಳೂರಿನ (Bengaluru) ವೈಟ್‌ಪೀಲ್ಡ್‌ ನವರಾದ ಯುವಕರು ಕಾರ್ಯನಿಮಿತ್ತ  ತಡರಾತ್ರಿ 1 ಗಂಟೆ ಸಮಯದಲ್ಲಿ ಕೋಲಾರಕ್ಕೆ(Kolar) ತೆರಳುತ್ತಿದ್ದರು. ಈ ವೇಳೆ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ 75ರ ತಾವರೆಕೆರೆ ಗ್ರಾಮದ ಮೇಲ್ಸೇತುವೆ ಕಾರನ್ನು ನಿಲ್ಲಿಸಿ ಸೆಲ್ಪಿ ತೆಗೆದುಕೊಳ್ಳಲು ಮುಂದಾದಾಗ ಹಿಂಬದಿಯಿಂದ ಬಂದಂತಹ ಹಾಲಿನ ಕ್ಯಾಂಟರ್‌ ವಾಹನ ಡಿಕ್ಕಿ(Accident) ಹೊಡೆದಿತ್ತು. ಈ ವೇಳೆ ಇಬ್ಬರು ಸ್ಥಳದಲ್ಲೆ ಮೃತಪಟ್ಟರೆ, ಇನ್ನೊಬ್ಬ ಮೇಲ್ಸೆತುವೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು.  
 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ